Sunday, July 27, 2014

ಕರ್ನಾಟಕ ಇತಿಹಾಸ ಅಕಾದೆಮಿ ಕಾರ್ಯಕ್ರಮ



ಐತಿಹಾಸಿಕ ಪರಂಪರೆ ಉಳಿಸಿ
ಎಚ್‌.ಶೇಷಗಿರಿರಾವ್
appaaji@gmail.com

ಕರ್ನಾಟಕ ಇತಿಹಾಸ ಅಕಾದೆಮಿಯು ಇತಿಹಾಸ ಸಂಶೋಧಕರ ಮತ್ತು ಆಸಕ್ತರ ರಾಜ್ಯ ಮಟ್ಟದ ಸಂಘಟನೆಯಾಗಿದೆ. ಖ್ಯಾತ ಇತಿಹಾಸತಜ್ಞ ಡಾ. ಸೂರ್ಯನಾಥಕಾಮತ್ ರಿಂದ ೧೯೮೬ ರಲ್ಲಿ ಸ್ಥಾಪಿತವಾದ ಅಕಾದೆಮಿ ಯುವ ಸಂಶೋದಕರಿಗೆ ಉತ್ತಮ ವೇದಿಕೆಯಾಗಿದೆ. ಇದನ್ನು ಈಗ ಡಾ. ದೇವರಕೊಂಡಾರೆಡ್ಡಿ ಮುನ್ನೆಡಸುತಿದ್ದಾರೆ.ಪ್ರತಿವರ್ಷ ಸಮ್ಮೇಳನ ನಡೆಸಿ ನಾಡಿನಾದ್ಯಂತದ ಇತಿಹಾಸ ಸಂಶೋಧಕರಿಗೆ ಆ ಸಂದರ್ಭದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಅವಕಾಶ ನೀಡುವುದು. ನಂತರ ಅದನ್ನು ಸ್ಮರಣ ಸಂಚಿಕೆಯ ಮೂಲಕ ಹೊರತರುವುದು. ಒಂದು ಪ್ರಮುಖ ಕಾರ್ಯ.

ಇದರಿಂದ ನಾಡಿನ ಮೂಲೆ ಮೂಲೆಯಲ್ಲಿರುವ ಶಾಸನ, ಹಸ್ತಪ್ರತಿ ,ಸ್ಮಾರಕ, ಪ್ರಾಗೈತಿಹಾಸಿಕ ಸ್ಥಳ, ಕೋಟೆ ಕೊತ್ತಳಗಳ ಮಾಹಿತಿಯನ್ನು ಆಸಕ್ತಿವಹಿಸಿ ಸದಸ್ಯರುಗಳು ಬೆಳಕಿಗೆ ತರತಿದ್ದಾರೆ, ಈ ಎಲ್ಲ ಕಾರ್ಯವನ್ನೂ ಸ್ವಇಚ್ಛೆಯಿಂದ ಮಾಡಲಾಗುತ್ತಿದೆ. ಸರ್ಕಾರದ ಅನುದಾನಕ್ಕೆ ಕೈ ಚಾಚುತ್ತಿಲ್ಲ. ಮತ್ತು ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸಲು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವಾರ್ಷಿಕ ಆಚರಣೆಯು ಯುವಜನರಲ್ಲಿ ಇತಿಹಾಸ ಪ್ರೇಮ ಬೆಳಸಲು ಸಹಕಾರಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಹೊಂದಿರುವ ಅಕಾದೆಮಿ ಪ್ರತಿವರ್ಷ ಜೂಲೈ ತಿಂಗಳಲ್ಲಿ ಪ್ರೌಢಶಾಲೆ, ಪಿಯುಸಿ ಮತ್ತು ಪದವಿಕಾಲೇಜುಗಳಲ್ಲಿ ಮತ್ತು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಐತಿಹಾಸಿಕ ಪರಂಪರೆಯ ತಿಳಿವು ನೀಡುವ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿಸುವ ವ್ಯವಸ್ಥೆಯನ್ನು ಜಿಲ್ಲಾಘಟಕಗಳ ಮೂಲಕ ಮಾಡುತ್ತಿದೆ 

ಹಾಗೂ ವಿದ್ಯಾರ್ಥಿಗಳಿಗೆ ಐತಿಹಾಸಿಕ ವಿ‍ಷಯಗಳ ಮೇಲೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿ ವಿವಿಧ ಹಂತದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡುವುದು. ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಉತ್ತೇಜನ ನೀಡುವುದು.
ಈ ವ‍ರ್ಷ ಇತಿಹಾಸ ಅಕಾದೆಮಿಯ ಬೆಂಗಳೂರು ನಗರ ಜಿಲ್ಲಾ ಘಟಕವು ಅಧ್ಯಕ್ಷ್ಯೆ ಶ್ರೀಮತಿ ಇಂದಿರಾ ಹೆಗಡೆಯವರ ನೇತೃತ್ವದಲ್ಲಿ ಜೂಲೈ ೨೭ ನೆಯ ಭಾನುವಾರದಂದು ಪರಂಪರೆ ಉಳಿಸಿ ಕಾರ್ಯಕ್ರಮ ಸಂಘಟಿಸಿತು. ಜಯನಗರ ನ್ಯಾಷನಲ್‌ ಪದವಿ ಕಾಲೇಜಿನಲ್ಲಿ ವಿವಿಧ ಕಾಲೇಜುಗಳಿಂದ ಬಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೈಸ್ಕೂಲು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗೆ ಬೆಂಗಳೂರಿನ ಹೆಮ್ಮೆಯ ತೋಟ ' ಲಾಲ್‌ಬಾಗ್‌' ವಿಷಯ ನೀಡಲಾಗಿತ್ತು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ "ಬೆಂಗಳೂರು ಉತ್ಸವಗಳಲ್ಲಿ ಕರಗ" , ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರು ಅಭಿವೃದ್ದಿಯಲ್ಲಿ ಮಾರ್ಕ‌ ಕಬ್ಬನ್ ಪಾತ್ರ' ಭಾಷಣದ ವಿಷಯವಾಗಿತ್ತು.

ಪ್ರಬಂಧ ಸ್ಪರ್ಧೆಗೆ ಹೈಸ್ಕೂಲುವಿದ್ಯಾರ್ಥಿಗಳಿಗೆ "ಬೆಂಗಳೂರಿನ ಒಂದು ಪ್ರಾಚ್ಯ ಕ್ಷೇತ್ರ",. ಪದವಿ ಪೂರ್ವ ಕಾಲೇಜಿನವರಿಗೆ "ಪ್ರಾಚ್ಯ ವಸ್ತು ಸಂಗ್ರಾಹಾಲಯ" ಮತ್ತು ಪದವಿ ವಿದ್ಯಾರ್ಥಿಗಳಿಗೆ "ಬೆಂಗಳೂರಿನಲ್ಲಿ ಯುದ್ಧ ಸ್ಮಾರಕಗಳು" ವಿ‍ಷಯದ ಬಗ್ಗೆ ಒಂದು ಗಂಟೆಯಲ್ಲಿ ಪ್ರಬಂಧ ಬರೆಯ ಬೇಕಿತ್ತು. ಕನ್ನಡದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳೂ ಬಂದು ತಮಗೂ ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಕಲ್ಪಿಸಲು ಮನವಿ ಮಾಡಿದ್ದು ವಿಶೇಷವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದರೆ ಮುಂದಿನ ವರ್ಷ ಪರಿಶೀಲಿಸಲಾಗುವುದೆಂಬ ಭರವಸೆ ನೀಡಲಾಯಿತು.
'ಸುಮಾರು ೨೦ ಪ್ರೌಢಶಾಲೆಗಳು ಮತ್ತು ೧೫ ಕಾಲೇಜು ಮತ್ತು ೧೦ಕ್ಕೂ ಅಧಿಕ ಪದವಿ ಕಾಲೇಜುಗಳು ಭಾಗವಹಿಸಿದ್ದವು. ಯುವ ಜನರ ಸಂಶೋಧನಾ ಪ್ರವೃತ್ತಿ ಮತ್ತು ವಿಷಯ ಸಂಗ್ರಹಣಾ ಶಕ್ತಿ ಅವರ ಭಾಷಣದಲ್ಲಿ ಮತ್ತು ಬರಹಗಳಲ್ಲಿ ಎದ್ದು ಕಂಡಿತು. ಪ್ರಬಂಧ ಸ್ಪರ್ಧೆಯಲ್ಲಂತೂ ಹಲವು ವಿದ್ಯಾರ್ಥಿಗಳು ಬೆಂಗಳೂರು ವಿಷಯವನ್ನು ಕುರಿತಾದ ಚಿತ್ರಗಳ ಪ್ರಿಂಟ್‌ ಔಟ್‌ ಅನ್ನು ಪ್ರಬಂಧದ ಜೊತೆ ಲಗತ್ತಿಸಿರುವುದು ವಿಶೇಷವಾಗಿತ್ತು ಇದರಿಂದಾಗಿ ಯುವಜನರಲ್ಲಿ ಇತಿಹಾಸ ಕುರಿತಾದ ಕುತೂಹಲ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಗಳಿಸಿರುವುದು ಸಾಬೀತಾಯಿತು.

ರಾಜ್ಯಾಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ, ಕಾರ್ಯದರ್ಶಿಗಳಾದ ಡಾ.ಜಿ.ಕೆ. ದೇವರಾಜ ಸ್ವಾಮಿ , ಇತಿಹಾಸ ತಜ್ಞರಾದ ಡಾ. ಜಯಮ್ಮ ಕರಿಯಣ್ಣ, ಗುಜ್ಜಾರಪ್ಪ, ಡಾ. ಹರಿಹರ ಶ್ರೀನಿವಾಸರಾವ್‌. ಭಾಗವಹಿಸಿದ್ದರು. ಎಲ್ಲ ರಿಗೂ ಮಧ್ಯಾಹ್ನ ಲಘು ಉಪಹಾರ ನೀಡಲಾಯಿತು. ಜಿಲ್ಲಾಘಟಕದ ಕಾರ್ಯದರ್ಶಿ ಶ್ರೀ ಬಿ.ಎಸ್‌ ಗುರುಪ್ರಸಾದರ ಪರಿಶ್ರಮ ಮತ್ತು ಸಂಘಟನಾ ಚಾತುರ್ಯ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಶ್ರೀಮತಿ ಸೀತಾಲಕ್ಷ್ಮಿ ರಾವ್, ಶ್ರೀ ಆದೆಪ್ಪ ಪಾಸೋಡಿ, ಡಾ. ಅನಂತಪದ್ಮನಾಭ, ವೇಮಗಲ್ ಮೂರ್ತಿ, ವೇಮಗಲ್ ಸೋಮಶೇಖರ, ಶ್ರೀನರಸಿಂಹಮೂರ್ತಿ ಹಾಗೂ ಅನೇಕ ಸ್ವಯಂ ಸೇವಕರುಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಭಾನುವಾರವಾದರೂ ನ್ಯಾಷನಲ್‌ ಕಾಲೇಜಿನ ಆವರಣ ಜನರಿಂದ ಗಿಜುಗುಡುತ್ತಿರುವುದು ಇತಿಹಾಸ ಪ್ರಜ್ಞೆಯು ಜಾಗೃತವಾಗಿರುವುದರ ಸಂಕೇತವಾಗಿತ್ತು .










Wednesday, July 23, 2014

ವಿಜಯನಗರದ ವಾಣಿಜ್ಯ


ಮೋಹನ ತರಂಗಿಣಿ ಬಿಂಬಿಸುವ ವಿಜಯನಗರದ ವಾಣಿಜ್ಯ
ರಾಜೀವ ಬಾಬು
ಕನಕದಾಸರ ರಚನೆಯಾದ ಮೋಹನ ತರಂಗಿಣಿಯು, ಮಹಾಕಾವ್ಯವಾಗಿದ್ದು ಇತಿಹಾಸ ಸಂಶೋಧಕರಿಗೆ ಪರಿಚಿತವಾಗಿದೆ. ಕೃಷ್ಣದೇವರಾಯನ ಆಳ್ವಿಕೆಯ ಸಂದರ್ಭದಲ್ಲಿ ಕನಕದಾಸರು ಜೀವಿಸಿದ್ದರೆಂಬುದು ತಿಳಿದ ಸಂಗತಿಯಾಗಿದೆ.
ಮೋಹನ ತರಂಗಿಣಿಯಲ್ಲಿ ಬರತಕ್ಕಂತಹ ವಾಣಿಜ್ಯ ಅಂಶಗಳನ್ನು ಗಮನಿಸಿ, ಅದನ್ನು ಕೆಲವು ವಿದೇಶಿ ಬರಹಗಳೊಂದಿಗೆ ತುಲನೆ ಮಾಡಿ ಎರಡರಲ್ಲೂ ದೊರಕುವ ಐತಿಹಾಸಿಕ ಮಾಹಿತಿಗಳ ವಿಶ್ವಸ್ಥತೆಯನ್ನು ಸಮರ್ಥಿಸಲಾಗಿದೆ. ಮೋಹನ ತರಂಗಿಣಿಯು ಶ್ರೀಕೃಷ್ಣನ ಲೀಲೆಗಳನ್ನು ವರ್ಣಿಸುವ ಒಂದು ಸಾಂಗತ್ಯ ಕಾವ್ಯ. ಇದರಲ್ಲಿ ಮೂರನೇ ಸಂಧಿಯ 11ನೇ ಪದ್ಯದಿಂದ 31ನೇ ಪದ್ಯದವರೆಗೂ ದ್ವಾರಕಾಪುರದಲ್ಲಿ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳನ್ನು ವರ್ಣಿಸಲಾಗಿದೆ. ಇದು ನಿಸ್ಸಂದೇಹವಾಗಿ ಕನಕದಾಸರು ತಮ್ಮ ಕಾಲದಲ್ಲಿ ಕಂಡು ಅನುಭವಿಸಿದ ವರ್ತಕ ಚಟುವಟಿಕೆಗಳ ಪ್ರತಿಬಿಂಬ.
ಮೋಹನ ತರಂಗಿಣಿಯಲ್ಲಿ ದ್ವಾರಕಾಪುರದ ವಾಣಿಜ್ಯ ವಿವರಣೆ ಹೀಗಿದೆ. ದ್ವಾರಕಾಪುರದಲ್ಲಿ ‘ಸೋಮ/ಸೂರ್ಯ’ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಎರಡು ಬೀದಿಗಳಿದ್ದವು. ಈ ಬೀದಿಗಳ ಎರಡೂ ಬದಿಗಳಲ್ಲಿ ವಾಸದ ಮನೆಗಳೊಂದಿಗೆ ಸಾಲು ಸಾಲಾಗಿ ಅಂಗಡಿಗಳಿದ್ದವು. ಈ ಅಂಗಡಿಗಳಲ್ಲಿ ನಾನಾ ಪ್ರಕಾರದ ವಸ್ತುಗಳು ವಿಕ್ರಯಗೊಳ್ಳುತ್ತಿದ್ದವು. ಇಲ್ಲಿ ಒಂದು ಭಾಗದಲ್ಲಿ ತಾಂಬೂಲಕ್ಕೆ ಬಳಸಲಾಗುವ ವಿಳ್ಯದ ಎಲೆ, ಅಡಿಕೆ, ಅದಕ್ಕೆ ಬಳಸಲಾಗುವ ಪರಿಮಳ ದ್ರವ್ಯವಾದ ಜವಾಜಿ, ಇತ್ಯಾದಿಗಳು ಮಾರಲ್ಪಡುತ್ತಿದ್ದವು. ಮತ್ತೊಂದು ಕಡೆ ದೈನಂದಿನ ಬಳಕೆಯ ಕಂಚು, ಹಿತ್ತಾಳೆ ಪಾತ್ರೆಗಳನ್ನು ಮಾರಲಾಗುತ್ತಿತ್ತು. ಇನ್ನು ಅಕ್ಕಸಾಲಿಗರ ಅಂಗಡಿಗಳಲ್ಲಿ ನಾನಾ ರೀತಿಯ ಆಭರಣಗಳನ್ನು ಮಾಡಲಾಗುತ್ತಿತ್ತು. ಈ ಅಕ್ಕಸಾಲಿಗರು ಹೊಸ ಆಭರಣಗಳನ್ನು ಸಿದ್ಧಪಡಿಸುವುದೇ ಅಲ್ಲದೆ ಹಳೆಯ ಆಭರಣಗಳಿಗೆ ಮೆರಗು ನೀಡುತ್ತಿದ್ದರು. ಹೂವನ್ನು ಮಾರುವಂತಹ ಹೂವಾಡಿಗರು ನಾನಾ ಬಗೆಯ ಹೂವುಗಳನ್ನು ಮಾರುತ್ತಿದ್ದರು. ಇದರಲ್ಲಿ ಹೆಸರಿಸಿರುವ ಹೂವುಗಳು, ಇಂದಿಗೂ ಪರಿಚಯವಿರುವ, ಮಲ್ಲಿಗೆ, ಸಂಪಿಗೆ, ಜಾಜಿ ಇತ್ಯಾದಿ. ಇವರೊಂದಿಗೆ ತರುಣಿಯರನ್ನು ಆಕರ್ಷಿಸುವಂತಹ ಬಳೆಗಳನ್ನು ಮಾರತಕ್ಕಂತಹ ಬಳೆಗಾರರಿದ್ದರು.
ಇಲ್ಲಿಯ ಅಂಗಡಿಗಳಲ್ಲಿ ಗಮನಾರ್ಹವಾದ ಅಂಗಡಿಗಳೆಂದರೆ ಚಿತ್ರಗಾರರ ಮತ್ತು ಶಿಲ್ಪಿಗಳ ಆಯುಧಗಳನ್ನು ಮಾರುತ್ತಿದ್ದ ಅಂಗಡಿಗಳು. ಪ್ರಾಯಶಃ ಬಗೆಬಗೆಯ ಕುಂಚ, ಬಣ್ಣದ ಸಾಧನ, ವಿವಿಧ ಪ್ರಕಾರದ ಉಳಿ, ಅಳತೆಗೋಳ, ಮೊದಲಾದ ವಸ್ತುಗಳನ್ನು ಈ ಅಂಗಡಿಗಳಲ್ಲಿ ಮಾರುತ್ತಿದ್ದಿರಬಹುದು.
ಮೇಲಿನ ಪದ್ಯಗಳ ಸಾರಾಂಶವನ್ನು ಗ್ರಹಿಸಿದಾಗ ಕೇವಲ ವಾಣಿಜ್ಯವೇ ಅಲ್ಲದೆ, ಕೆಲವು ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಗಮನಕ್ಕೆ ಬರುತ್ತವೆ. ಅವುಗಳನ್ನು ಈ ಕೇಳಗೆ ಚರ್ಚಿಸಲಾಗಿದೆ.
ಈ ಕಾವ್ಯದಲ್ಲಿ ಹೂವಿನ ವ್ಯಾಪಾರ ನಡೆಯುತ್ತಿದ್ದ ಬಗೆಗೆ ವಿವರಣೆಗಳಿವೆ. ಈ ರೀತಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಡೆಯುವುದು ವಿಜಯನಗರ ಕಾಲದಿಂದ ಪ್ರಾಯಶಃ ಆರಂಭವಾಯಿತು ಎಂದು ಚಿಂತಿಸುವಂತೆ ಮಾಡುತ್ತದೆ. ಏಕೆಂದರೆ ವಿಜಯನಗರ ಕಾಲದಲ್ಲಿ ದೇವಾಲಯಕ್ಕೆ ಹೂತೋಟಗಳನ್ನು ರೂಪಿಸಿ ದಾನವಾಗಿ ನೀಡುತ್ತಿದ್ದ ಉಲ್ಲೇಖ ದೊರೆಯುತ್ತದೆ. ಇನ್ನು ಸಾರ್ವಜನಿಕ ಬಳಕೆಗೆ ಕೈತೋಟಗಳು ಖಾಸಗಿಯಾಗಿ ಇದ್ದಿರಬೇಕು. ಆದರೆ ವಿಜಯನಗರವು ಅಂದಿನ ಕಾಲಕ್ಕೆ ಮಹಾನಗರವಾದ ಕಾರಣ ಪ್ರಾಯಶಃ ಸಾರ್ವಜನಿಕ ಬಳಕೆಗೂ ಹೂವನ್ನು ವಿಕ್ರಯಿಸಲು ತೊಡಗಿರಬಹುದು. ವಿಜಯನಗರ ಪೂರ್ವಕಾಲದಲ್ಲಿ ದೇವಾಲಯದ ಬಳಕೆಗೆ ಹೂತೋಟಗಳಿದಿದ್ದು, ಅದಕ್ಕಾಗಿ ನೇಮಕವಾದ ಹೂವಾಡಿಗರಿದ್ದದ್ದು ಬಾದಾಮಿಯ 3ನೇ ಗುಹೆಯ ಶಾಸನ ಮತ್ತು ಹರಿಹರನ ಪುಷ್ಪರಗಳೆಗಳಿಂದ ತಿಳಿದುಬರುತ್ತದೆ.
ಮತ್ತೊಂದು ಗಮನಾರ್ಹ ಅಂಶವೆಂದರೆ ವರ್ತಕರು ತಮ್ಮ ಅಂಗಡಿಗಳಲ್ಲಿ ಜನರ ಗಮನವನ್ನು ಸೆಳೆಯಲು ಆಕರ್ಷಕವಾದ ಹುಡುಗಿಯರನ್ನು ನೇಮಕ ಮಾಡಿಕೊಳ್ಳುತ್ತಿದ್ದದ್ದು. ಇದು ಇಂದಿನ ಕಾಲದ ‘ಸೇಲ್ಸ್ ಗಲ್ರ್ಸ್’ಗಳ ಪರಿಕಲ್ಪನೆಯು ವಿಜಯನಗರ ಕಾಲದ ಹೊತ್ತಿಗೆ ಇದ್ದದ್ದು ತಿಳಿದುಬರುತ್ತದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ವೇಶ್ಯೆಯರ ವಾಸಸ್ಥಾನ. ಅಂದಿನ ವೇಶ್ಯೆಯರು ಜನಸಾಮಾನ್ಯರ ವಸತಿಯಿಂದ ದೂರವಿರದೆ, ವ್ಯಾಪಾರ ಕೇಂದ್ರಗಳ ಸಮೀಪವಾಗಿಯೇ ತಮ್ಮ ವಾಟಿಕೆಗಳನ್ನು ನಿರ್ಮಿಸಿಕೊಂಡಿರುತ್ತಿದ್ದರು. ಇದು ದೇಶ ವಿದೇಶದಿಂದ ವ್ಯಾಪಾರಾರ್ಥವಾಗಿ ಬರುತ್ತಿದ್ದ ವರ್ತಕರಿಗೆ ಅಗತ್ಯವಾಗಿತ್ತು. ಇಲ್ಲಿಯ ವೇಶ್ಯೆಯರು ವರ್ತಕರಿಗೆ ಕೇವಲ ಒಡನಾಟ ಮಾತ್ರವಲ್ಲದೆ, ವಾಸಕ್ಕೂ ಅನುಕೂಲ ಒದಗಿಸುತ್ತಿದ್ದರು. ಜನಸಾಮಾನ್ಯರಿಗೂ ಯಾತ್ರಾರ್ಥಿಗಳಿಗೂ ಹಲವು ಛತ್ರ ಮತ್ತು ಚಾವಡಿಗಳು ನಿರ್ಮಾಣವಾಗುತ್ತಿದ್ದದ್ದು ತಿಳಿದ ಸಂಗತಿಯೆ. ಅಂದರೆ, ಅಮೂಲ್ಯವಾದ ವಸ್ತುಗಳನ್ನು ವ್ಯಾಪಾರಾರ್ಥವಾಗಿ ತರುತ್ತಿದ್ದ ವರ್ತಕರಿಗೆ ಹೆಚ್ಚು ಏಕಾಂತ ಮತ್ತು ಭದ್ರತೆಯೂ ಗಣಿಕಾಲಯಗಳಲ್ಲಿ ಪರೋಕ್ಷವಾಗಿ ದೊರಕುತ್ತಿದ್ದಿರಬಹುದು. ಈ ಕಾರಣದಿಂದ ವರ್ತಕ ಬೀದಿಗಳ ಸಮೀಪಗಳಲ್ಲಿಯೇ ವೇಶ್ಯೆವಾಸಗಳಿರುವುದು ತಿಳಿದುಬರುತ್ತದೆ. ಈ ಕಾರಣದಿಂದಲೇ ಆಡಳಿತಗಾರರು ವೇಶ್ಯೆಯರಿಂದಲೂ ಸಹ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತಿದ್ದರು. ಅಚ್ಯುತರಾಯ ದೇವಾಲಯದ ಮುಂದಿನ ‘ಅಚ್ಯುತ ಬಜಾರ್’ ಬೀದಿಯ ಮತ್ತೊಂದು ತುದಿಯನ್ನು ‘ಸೂಳೆ ಬಜಾರ್’ ಎಂದು ಇಂದಿಗೂ ಗುರುತಿಸುತ್ತಾರೆ.
ಈ ಕಾವ್ಯದಲ್ಲಿ ರತ್ನ ಮತ್ತು ಮುತ್ತುಗಳನ್ನು ಹೊಳಪು ಮಾಡುವ ಅಂಗಡಿಗಳಿದ್ದ ಬಗ್ಗೆ ಉಲ್ಲೇಖವಿದೆ. ಬಹುಶಃ ಇವು ಹಳೆಯ ಒಡವೆಗಳನ್ನು ಹೊಳಪು ಮಾಡುವ ಅಥವಾ ರೂಪಾಂತರ ಮಾಡುವ ಅಂಗಡಿಗಳಿದ್ದಿರಬಹುದು.
ಮೂರನೇ ಸಂಧಿಯ 29ನೇ ಪದ್ಯದಲ್ಲಿ ಇಲ್ಲಿ ಕುಬೇರನಿಗೂ ಸಾಲ ಕೊಡುವಂತಹ ಶ್ರೀಮಂತರಿದ್ದರು ಎಂಬ ವರ್ಣನೆಯಿದ್ದು, ಪ್ರಾಯಶಃ ಅಂದಿನ ಕಾಲಕ್ಕೆ ಇವರು ಬ್ಯಾಂಕರ್‍ಗಳಾಗಿದ್ದಿರಬಹುದು. ವರ್ತಕರಿಗೂ ಮತ್ತು ಕೆಲವೊಮ್ಮೆ ಜನಸಾಮಾನ್ಯರಿಗೂ ದ್ರವ್ಯವನ್ನು ಸಾಲ ಕೊಡುತ್ತಿರಬಹುದು. ಇವರು ಐವತ್ತಾರು ರಾಜ್ಯಗಳ ನಾಣ್ಯಗಳನ್ನು ಕೊಪ್ಪರಿಗೆಗಳಲ್ಲಿ ಸುರಿದುಕೊಂಡು ವಿನಿಮಯ ಮಾಡುತ್ತಿದ್ದರೆಂದು ಹೇಳಲಾಗಿದೆ. ಇದು ಸಮಕಾಲೀನ ವಿದೇಶಿ ವಿನಿಮಯದ ಪೂರ್ವರೂಪವಿದ್ದಿರಬಹುದು. ಭರತ ವರ್ಷದಲ್ಲಿ ಅಂಗ, ವಂಗ, ಕಳಿಂಗ, ಕಾಮರೂಪ, ಇತ್ಯಾದಿ 56 ರಾಜ್ಯಗಳು ಇದ್ದುವೆಂದು ಪುರಾಣಗಳಲ್ಲಿ ಹೇಳಲಾಗಿದೆ. ವಿಜಯನಗರ ಕಾಲದಲ್ಲಿ ಈ 56 ದೇಶಗಳ ಪರಿಕಲ್ಪನೆಯಿದ್ದಿತೋ ಇಲ್ಲವೋ, ಆದರೆ ವಿಜಯನಗರ ಸಾಮ್ರಾಜ್ಯದ ವ್ಯಾಪಾರ ಚಟುವಟಿಕೆಯೊಂದಿಗೆ ನಾನಾ ದೇಶಗಳು ಸಂಪರ್ಕವನ್ನು ಹೊಂದಿದ್ದವು. ಸಮುದ್ರದ ಆಚೆಗೆ ಅಲ್ಲದೆ ಉತ್ತರ ಭಾರತದ ಹಲವು ಭಾಗ ಮತ್ತು ಅರಬ್ ದೇಶಗಳೊಂದಿಗೆ ಸಂಪರ್ಕವಿದ್ದಿತು. ಪ್ರಾಯಶಃ ವಿಜಯನಗರದ ಗದ್ಯಾಣ, ವರಹ, ಇತ್ಯಾದಿ ನಾಣ್ಯಗಳಂತೆ ಉತ್ತರ ಭಾರತ ಮತ್ತು ಇತರ ರಾಜ್ಯಗಳಲ್ಲಿ ಬೇರೆ ನಾಣ್ಯಗಳು ಚಲಾವಣೆಯಲ್ಲಿದ್ದಿರಬಹುದು ಮತ್ತು ಇವೆರಡರ ಮೌಲ್ಯ, ತೂಕ ಇತ್ಯಾದಿಗಳಲ್ಲೂ ವ್ಯತ್ಯಾಸವಿದ್ದಿರಬಹುದು. ಈ ಕಾರಣದಿಂದ ಹೊರದೇಶದ ವ್ಯಾಪಾರಿಗಳು ತಮ್ಮೊಂದಿಗೆ ತಂದ ದ್ರವ್ಯದ ಮೌಲ್ಯವನ್ನು ವಿಜಯನಗರದಲ್ಲಿ ಪ್ರಚಲಿತವಾಗಿದ್ದ ಮೌಲ್ಯಕ್ಕೆ ಮಾರ್ಪಡಿಸಿಕೊಂಡು ಬಳಸುತ್ತಿದ್ದಿರಬಹುದು.
ಮೋಹನ ತರಂಗಿಣಿಯ ಈ ಉಲ್ಲೇಖಗಳಿಗೆ ನಮಗೆ ಹಲವಾರು ವಿದೇಶಿಯ ಪ್ರವಾಸ ಕಥನಗಳು ಮತ್ತು ಪುರಾತತ್ತ್ವ ಉತ್ಖನನಗಳು ಪೆÇೀಷಕವಾಗಿ ದೊರೆತಿವೆ. ಕನಕದಾಸರು ‘ಸೋಮ/ಸೂರ್ಯ’ ಬೀದಿಯೆಂದು ಹೆಸರುಗಳನ್ನು ಉಲ್ಲೇಖಿಸಿರುತ್ತಾರೆ. ಆ ಹೆಸರಿನ ಬೀದಿಗಳು ಇದ್ದವೆಂದು ಅಬ್ದುಲ್ ರಜಾಕನ ಬರವಣಿಗೆಯಲ್ಲಿ ಉಲ್ಲೇಖವಾಗಿದೆ. ಅಲ್ಲದೇ ಅಬ್ದುಲ್ ರಜಾಕನು ವ್ಯಾಪಾರಕೇಂದ್ರಗಳ ಬಳಿಯಿದ್ದ ವೇಶ್ಯಾವಾಟಿಕೆಗಳನ್ನು ಕುರಿತು ಬರೆಯುತ್ತಾನೆ.
ಕನಕದಾಸರು ಮತ್ತು ವಿದೇಶ ಪ್ರವಾಸಿಗಳು, ಬಹುತಳ ಅಂತಸ್ತಿನ ಭವನಗಳು, ಅಂದರೆ ಮಹಡಿ ಮನೆಗಳ ಬಗ್ಗೆ ವಿವರಗಳನ್ನು ಕೋಡುತ್ತಾರೆ. ಇತ್ತೀಚಿನ ಪುರಾತತ್ತ್ವ ಉತ್ಖನನಗಳಲ್ಲಿ ಎರಡು ಅಂತಸ್ತಿನ ಹಲವಾರು ಮಂಟಪಗಳ ಸಾಲು ವಿರೂಪಾಕ್ಷ ಬಜಾರ್, ವಿಠಲಾಪುರ ಬಜಾರ್ ಮತ್ತು ಅಚ್ಯುತರಾಯ ಬಜಾರಗಳಲ್ಲಿ ಬೆಳಕಿಗೆ ಬಂದಿದೆ.
ಒಟ್ಟಾರೆ ಪುರಾತತ್ತ್ವ ಸಂಶೋಧನೆ ಮತ್ತು ವಿದೇಶಿ ಪ್ರವಾಸ ಕಥನಗಳೊಂದಿಗೆ ಸ್ಥಳೀಯ ಸಾಹಿತ್ಯವು ಪೂರಕ ಮಾಹಿತಿಯನ್ನು ಒದಗಿಸಿರುವುದು ಇಲ್ಲಿ ಗಮನಾರ್ಹ.
[ಈ ಲೇಖನವನ್ನು ಸಿದ್ದಪಡಿಸಲು ನನಗೆ ನೆರವಾಗಿ ಮಾರ್ಗದರ್ಶನವಿತ್ತ ನನ್ನ ಗುರುಗಳಾದ ಡಾ. ಜಿ. ಮನೋಜ್ ಮತ್ತು ಡಾ. ಟಿ.ವಿ. ನಾಗರಾಜ್‍ಗೆ ನಾನು ಆಭಾರಿಯಾಗಿದ್ದೇನೆ.]

ಆಧಾರಸೂಚಿ
1. ಮೋಹನ ತರಂಗಿಣಿ, ಗದ್ಯಾನುವಾದ, ಡಾ. ಎಸ್.ಎಸ್. ಕೋತಿನ, ಕನ್ನಡ ಸಾಹಿತ್ಯ ಪರಿಷತ್.
2. ಇತಿಹಾಸ ದರ್ಶನ, ಸಂಪುಟ 16, `ವಿಜಯನಗರ ಕಾಲದ ಸಂತೆಗಳು’, ಎಂ.ಬಿ. ಪಾಟೀಲ್.
3. ಕರ್ನಾಟಕ ಜನಜೀವನ, ಬೆಟೆಗೇರಿ ಕೃಷ್ಣಶರ್ಮ.
4. ಪ್ರವಾಸಿ ಕಂಡ ವಿಜಯನಗರ, ಸಂಪಾದಕರು, ಡಾ. ಬಿ.ಎ. ವಿವೇಕ ರೈ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

 # 26, `ನೇಸರ’, ನಾಲ್ಕನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ಮುನಿಕೊಂಡಪ್ಪ ಬಡಾವಣೆ, ಬಾಗಲಗುಂಟೆ, ಬೆಂಗಳೂರು-560073.

Tuesday, July 22, 2014

ರೇವಣಸಿದ್ಧೇಶ್ವರ ಮಠಗಳು

ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳು

ಶ್ರೀಮತಿ ಹನುಮಂತಮ್ಮ ಎಂ.
ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಹೆಸರು ರೇವಣಸಿದ್ಧನದು. ಕುರುಬ ಮತ್ತು ವೀರಶೈವ ಸಮಾಜಗಳೆರಡಕ್ಕೂ ಈತ ಅಗ್ರಗಣ್ಯನಾಗಿದ್ದಾನೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕರ್ನಾಟಕದಾದ್ಯಂತ ಮಠಮಂದಿರಗಳಿವೆ. ಇವುಗಳಿಗೆ ಕುರುಬ ಒಡೆಯರು ಗುರುಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಗಾದಿಗನೂರು, ವಿಠಲಾಪುರ, ದೇವಲಾಪುರ, ಓಬಲಾಪುರ, ಬಳ್ಳಾರಿ ಮುಂತಾದೆಡೆ ಈತನ ಹೆಸರಿನಲ್ಲಿರುವ ಮಠಗಳ ಸಾಂಸ್ಕøತಿಕ ಮಹತ್ವವನ್ನು ಈ ಸಂಪ್ರಬಂಧದಲ್ಲಿ ಚರ್ಚಿಸಲಾಗಿದೆ.
ರೇವಣಸಿದ್ಧನನ್ನು ಕುರಿತು `ರೇವಣ ಸಾಂಗತ್ಯ’, `ರೇವಣ ಸಿದ್ಧೇಶ್ವರ ರಗಳೆ’ ಮುಂತಾದ ಕೃತಿಗಳಲ್ಲದೆ, `ಜನಪದ ಹಾಲುಮತ ಪುರಾಣ’ ಕೃತಿಗಳು ರಚನೆಯಾಗಿವೆ. ಇತ್ತೀಚೆಗೆ ರೇವಣಸಿದ್ಧ ಸಂಪ್ರದಾಯವನ್ನು ತಿಳಿಸುವ `ಟಗರ ಪವಾಡ’ ಕೃತಿಯು ಪ್ರಕಟವಾಗಿದೆ. ಈ ಎಲ್ಲಾ ಕೃತಿಗಳ ಹಿನ್ನೆಲೆಯಲ್ಲಿ ರೇವಣಸಿದ್ಧ ಕುರುಬ ಸಮಾಜದ ಶಿವಸಿದ್ಧ ಸಂಪ್ರದಾಯಕ್ಕೆ ಸೇರಿದವನು. ಈತನ ಕಾಲಾನಂತರದಲ್ಲಿ ಈ ಪರಂಪರೆಯ ಮಠಗಳು ಕಂಡುಬರುತ್ತವೆ.
ಹಾಲುಮತದ ಮುದ್ದುಗೊಂಡ ಮತ್ತು ಮುದ್ದವ್ವ ದಂಪತಿಗಳ ಏಳು ಜನ ಮಕ್ಕಳಲ್ಲಿ ಕೊನೆಯವನು ಉಂಡಾಡು ಪದ್ಮಗೊಂಡ. ಇವನು ಕುರುಬರ ಮೂಲಪುರುಷ. ಇವನ ಮೊದಲ ಹೆಂಡತಿ ಜಿಂಕಾದೇವಿಯಲ್ಲಿ ಜಗ್ಗಲಿ ಮುತ್ತಯ್ಯ ಸಹಾಯ ಮುತ್ತಯ್ಯ, ಸೋಹ ಮುತ್ತಯ್ಯ, ಶಾಂತಿಮಯ ಮುತ್ತಯ್ಯ ಮತ್ತು ದೇವರಾಜ ಎಂಬ ಐದು ಮಕ್ಕಳು ಜನಿಸುತ್ತಾರೆ. ಇವರಲ್ಲಿ ನಾಲ್ಕನೇ ಮಗನಾದ ಶಾಂತಿಮಯ ಮುತ್ತಯ್ಯನ ಮಗನೇ ರೇವಣಸಿದ್ಧ.1
ಇವನು ಪ್ರಾಚೀನ ಕಾಲದಿಂದಲೂ ಕುರುಬ ಜನಾಂಗದಲ್ಲಿ ಬೆಳೆದು ಬಂದಿರುವುದರಿಂದ ಕೊಲ್ಲಿಪಾಕಿ ಕ್ರಿ.ಶ.1110ರಲ್ಲಿ ಜನಿಸಿ ಕ್ರಿ.ಶ.1217ರಲ್ಲಿ ನಿಧನರಾದರೆಂದು ತಿಳಿದುಬರುತ್ತದೆ.2 ಈತನನ್ನು ಕುರಿತು ಮೊಟ್ಟಮೊದಲ ಬಾರಿಗೆ ಕಾವ್ಯವನ್ನು ಬರೆದಂತವನು ಮಹಾಕವಿ ಹರಿಹರ. ಈತನು ತನ್ನ ರೇವಣಸಿದ್ಧೇಶ್ವರ ರಗಳೆಯಲ್ಲಿ ರೇವಣಸಿದ್ಧರ ಜನಪದ ಪ್ರಸಂಗವನ್ನು ಪೌರಾಣಿಕ ಹಿನ್ನೆಲೆಯಲ್ಲಿಟ್ಟುಕೊಂಡು ಅಭಿವ್ಯಕ್ತಪಡಿಸಿದ್ದಾನೆ. ರತ್ನಗಿರಿಯ ಶಿವನ ಸಭೆಯಲ್ಲಿ ನಂದೀಶ, ವೀರಭದ್ರ ನಾಯಕ, ರೇಣುಕ ಮುಂತಾದ ದೇವಾನುದೇವತೆಗಳು ಕುಳಿತುಕೊಂಡಿರುವಾಗ ರೇಣುಕನ ಮುಖವನ್ನು ನೋಡಿ ಶಿವನು ತಾಂಬೂಲವನ್ನು ತಂದುಕೊಡು ಎನ್ನುತ್ತಾನೆ. ರೇಣುಕನು ತಾಂಬೂಲವನ್ನು ತೆಗೆದುಕೊಂಡು ಬರುವಾಗ ದಾರುಕನೆಂಬುವವನನ್ನು ದಾಟಿದ ಪರಿಣಾಮದಿಂದ ನಿನಗೆ ನರಜನ್ಮ ಪ್ರಾಪ್ತವಾಗಲೆಂದು ಶಿವನು ಶಾಪವನ್ನು ಕೊಡುತ್ತಾನೆ. ಆಗ ರೇಣುಕನು ಭಯದಿಂದ ಕೈಮುಗಿದು, ತನ್ನ ತಪ್ಪನ್ನು ಮನ್ನಿಸಿ ವಿಶಾಪವನ್ನು ಕರುಣಿಸೆಂದು ಬೇಡಿಕೊಳ್ಳುತ್ತಾನೆ. ಆಗ ಶಿವನು, ಕರುಣೆಗೊಂಡು ಭೂಲೋಕದಲ್ಲಿ ಸೋಮೇಶ್ವರಲಿಂಗದಲ್ಲಿ ಹುಟ್ಟಿ ಸುಖ, ದುಃಖಗಳನ್ನು ಅನುಭವಿಸಿ ಬರಬೇಕೆನ್ನುತ್ತಾನೆ. ಅದೇ ರೀತಿಯಾಗಿ ಕೊಲ್ಲಿಪಾಕಿ ಸೋಮೇಶ್ವರಲಿಂಗದಲ್ಲಿ ರೇಣುಕನು ಹುಟ್ಟುತ್ತಾನೆ.3 ಹೀಗೆ ಕೊಲ್ಲಿಪಾಕಿ ಸೋಮನಾಥಲಿಂಗದಲ್ಲಿ ರೇವಣಸಿದ್ಧರು ಹುಟ್ಟಿದರು ಎಂದು ಕವಿಗಳು ಮತ್ತು ಪುರಾಣಕರ್ತರ ಅಭಿಪ್ರಾಯ. ಹಾಗೆಯೇ ಇವನು ಮೂಲತಃ ಕುರುಬಮೂಲದಿಂದ ಬಂದವನೆಂದು ಜನಪದರ ಮಾತಾಗಿದೆ.
ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದಲ್ಲಿ ಶಾಂತಮಯ ಮುತ್ತಯ್ಯ ಶಿವಯೋಗಿಯಾಗಿ ಸಂಸಾರಿಯಾಗಿ ತನ್ನ ಪತ್ನಿ ಮಹಾದೇವಿ ಮತ್ತು ಗುರುಭಕ್ತರೊಡನೆ ಸಂಚಾರಿಯಾಗಿದ್ದ ಸಮಯದಲ್ಲಿ ಇಂದಿನ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಭುವನಗಿರಿ ತಾಲ್ಲೂಕಿನ ಕೊಲ್ಲಿಪಾಕಿ ಗ್ರಾಮದಲ್ಲಿ ಕೆಲವು ಸಮಯ ವಾಸವಾಗಿದ್ದಾಗ ರೇವಣಸಿದ್ಧರು ಜನಿಸಿದರು. ಯಾವುದೋ ಒಂದು ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಇವನನ್ನು ನಾಥಪಂಥೀಯ ಸಾಧುಗಳು ಸಾಕಿದರೆಂದು ನವನಾಥದಿಂದ ತಿಳಿದುಬರುತ್ತದೆ. ಇವರ ಪಾಲನೆಯಲ್ಲಿ ಬೆಳೆದ ರೇವಣಸಿದ್ಧರು ಕೂಡ ನಾಥಸಿದ್ಧರಾದರು. ಉತ್ತರ ಭಾರತದಲ್ಲೆಲ್ಲಾ ಸಂಚರಿಸಿ ಗೂಢವಿದ್ಯೆಗಳನ್ನೆಲ್ಲಾ ಕಲಿತುಕೊಂಡು ಶ್ರೇಷ್ಠನಾಥರೆಂದು ಕರೆಯಿಸಿಕೊಂಡರು. ಇಲ್ಲಿ ವ್ಯಕ್ತವಾಗಿರುವ ನಾಥ ಸಿದ್ಧರೆಂದರೆ:
1.ಗೋರಕ್ಷನಾಥ, 2. ಜಾಲಂಧರ ನಾಥ,
3. ಕಾನಿಪನಾಥ, 4. ಗಹನಿ ನಾಥ, 5. ರೇವಣನಾಥ,
6. ನಾಗನಾಥ, 7. ಭರ್ತರಿನಾಥ, 8. ಚರ್ಪಟಿ ನಾಥ,
9. ಮತ್ಸ್ಯೇಂದ್ರನಾಥ
ಹೀಗೆ ರೇವಣನಾಥರು ನವನಾಥ ಸಿದ್ಧರ ಸಾಲಿನಲ್ಲಿ ಶೈವಮತ ಸ್ವೀಕರಿಸಿರುವುದರಿಂದ ಇವರು ಸೋಮನಾಥಲಿಂಗದಲ್ಲಿ ಜನಿಸಿದರು ಹಾಗೂ ರೇವಣಸಿದ್ಧರು `ಬಂಧುಲ’ ಗ್ರಾಮದಲ್ಲಿ ಅನ್ನಛತ್ರವನ್ನಿಟ್ಟು ನಡೆಸುತ್ತಿದ್ದರು ಎಂದು ಈ ಗ್ರಂಥದಿಂದ ತಿಳಿದುಬರುತ್ತದೆ.
ಡಾ. ಎಂ.ಎಂ. ಕಲಬುರ್ಗಿಯವರು ರೇವಣಸಿದ್ಧ ಕಲ್ಯಾಣ ಚಾಳುಕ್ಯ ವಿಕ್ರಮಾದಿತ್ಯ (1026-1126) ಮೂರನೆಯ ಸೋಮೇಶ್ವರ, ಕಲಚೂರಿ ತೈಲಪ ಬಿಜ್ಜಳನ ಕಾಲದವರೆಗೆ ಬಾಳಿದ ವಿವರಗಳನ್ನು ಶಾಸನ ಮತ್ತು ಪದ್ಯಗಳಿಂದ ಸ್ಪಷ್ಟಪಡಿಸಿದ್ದಾರೆ.4 ರೇವಣಸಿದ್ಧ ಜೀವಂತವಿರುವಾಗಲೇ (1172 ಕುಕ್ಕೇರಿ ಶಾಸನ) ಅವನ ಸಿದ್ಧ ಸಂಪ್ರದಾಯವು ಲಾಕುಳ ಶೈವದಲ್ಲಿ ಆರಂಭಿಸಿದ್ದಿತೆಂದು ಹೇಳಬಹುದಾಗಿದೆ.5
ಕಲಬುರ್ಗಿ ಅವರ `ರೇವಣಸಿದ್ಧ ಚರಿತ್ರೆಯ ಎರಡು ಸಂಪ್ರದಾಯಗಳು’ ಎಂಬ ಲೇಖನದಲ್ಲಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “ರೇವಣಸಿದ್ಧ ಮತ್ತು ಸಿದ್ಧರಾಮರು” ಮೂಲತಃ ಜಾತಿಯಿಂದ ಕುರುಬ ಪಂಥಸಿದ್ಧರು. ಸಿದ್ಧರಾಮನು ದೀಕ್ಷೆಯನ್ನು ಪಡೆದುಕೊಂಡು ಶರಣ ಧರ್ಮವನ್ನು ಸೇರಿದ. ಇಂತಹ ಸಮಯದಲ್ಲಿ ವಯೋವೃದ್ಧನಾಗಿದ್ದ ರೇವಣಸಿದ್ಧನನ್ನು ಅವನ ಸಿದ್ಧಿ ಪಂಥೀಯರು ಭಕ್ತಿ ಪ್ರಜ್ಞೆಯಿಂದ ಶುದ್ಧ ಶೈವರು ಆಚಾರ್ಯ ಪ್ರಜ್ಞೆಯಿಂದ ಚಿತ್ರಿಸುವ ಪ್ರಯತ್ನ ನಡೆಸಿದರು.
ಸಿದ್ಧ ಮತ್ತು ಆಚಾರ್ಯ ಸಂಪ್ರದಾಯದ ರೇವಣಸಿದ್ಧ ಭಕ್ತಿ ಪ್ರಜ್ಞೆಯಲ್ಲಿ ಮಲ್ಲಣ ಕವಿಯು ರೇವಣಸಿದ್ಧ ಕಾವ್ಯವನ್ನು ಚರ್ಚೆಗೆ ಒಳಪಡಿಸಿ ತೌಲನಿಕವಾಗಿ ಹರಿಹರ ಕವಿಯ ಕೊಲ್ಲಿಪಾಕಿಯ ಲಿಂಗೋದ್ಭವ, ಅಗಸ್ತ್ಯನ ದರ್ಶನ ಮೊದಲಾದ ಪ್ರಸಂಗಗಳನ್ನು ಮಲ್ಲಣ್ಣ ಕವಿ ಕಾಣದ ವಿಷಯಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ. ಇವರ ಇನ್ನೊಂದು ಲೇಖನ ಸಿದ್ಧರಾಮನು ಶಿವಯೋಗಿಯಾಗಿರುವಂತಹ ರೇವಣಸಿದ್ಧರನ್ನು ಶಿವಾಚಾರ್ಯ =ರನ್ನಾಗಿ ಮಾಡಿದ ಅನೇಕ ವಿಷಯಗಳನ್ನು ಹೊರಹಾಕುತ್ತದೆ.
ಸಿದ್ಧಮಂಕೆ ಚರಿತೆಗೆ ಸೊಲ್ಲಾಪುರ ಸಿದ್ಧರಾಮ ಚರಿತ್ರೆಯೆಂದು ಟಗರ ಪವಾಡ ಕೃತಿಗೆ ರೇವಣಸಿದ್ಧೇಶ್ವರ ಪುರಾಣವೆಂದು ಕರೆದುದು ಇವರಿಬ್ಬರ ಕುರುಬ ಜಾತಿಯನ್ನು ದೃಢಪಡಿಸುತ್ತದೆ. ಇದಲ್ಲದೆ ಚಿಕ್ಕನಾಯಕನಹಳ್ಳಿಯಲ್ಲಿರುವ ಸಿದ್ಧರಾಮನ ಶಿಷ್ಯನಾದ ಸಿದ್ಧಮಂಕನ ಮಠಕ್ಕೆ ಲಿಂಗಾಯಿತರು ಮತ್ತು ರೇವಣಸಿದ್ಧನ ಮಠಕ್ಕೆ ಕುರುಬರು ಪೂಜಾರಿಗಳಾಗಿದ್ದಾರೆ. ಹೀಗೆ ಸಿದ್ಧರಾಮನು ಕೊನೆಗೆ ನಾಥಪಂಥ ಮತ್ತು ಕುರುಬ ಜಾತಿಯನ್ನು ತ್ಯಜಿಸಿ ಲಿಂಗವಂತನಾದನು. ರೇವಣಸಿದ್ಧನು ಕೊನೆಯವರೆಗೂ ನಾಥಪಂಥೀಯ ಕುರುಬನಾಗಿಯೇ ಉಳಿದುದು ಕಾರಣವಾಗಿರಬಹುದೆಂದು ಊಹಿಸಿದ್ದಾರೆ. ರೇವಣಸಿದ್ಧನ ಇತಿವೃತ್ತ ವಿಚಾರ, ಭೌಗೋಳಿಕ ನೆಲೆ, ಅಲಿಖಿತ ಆಕರಗಳಲ್ಲಿ ಮೂಡಿಬಂದ ರೇವಣಸಿದ್ಧನ ಚಿತ್ರಣ ವಿಷಯವಾಗಿ ಕುರುಬರ ಕುಲಗುರು ರೇವಣಸಿದ್ಧನನ್ನೇ 14-15ನೆಯ ಶತಮಾನದ ಹೊತ್ತಿಗೆ ರೇಣುಕಾಚಾರ್ಯರನ್ನಾಗಿ ಮಾಡಿರುವುದನ್ನು ಎಂ.ಎಂ. ಕಲಬುರ್ಗಿ ಅವರು ಸಕಾರಣವಾಗಿ ಗುರುತಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳು
1. ಗಾದಿಗನೂರು : ಇದು ಹೊಸಪೇಟೆ ಬಳ್ಳಾರಿ ಮುಖ್ಯರಸ್ತೆಯಲ್ಲಿ ಹೊಸಪೇಟೆಯಿಂದ ಮೂವತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿ ಸರೂರು ರೇವಣಸಿದ್ಧೇಶ್ವರ ಮಠದ ಶಾಖಾಮಠವಿದೆ. ಈ ಮಠಕ್ಕೆ 1872ರಲ್ಲಿ ಗುರುಗಳಾಗಿದ್ದವರು ಒಡೆಯ ಸಣ್ಣಸಿದ್ಧಯ್ಯನವರು. ಇವರು ಮೂಲತಃ ದೇವಲಾಪುರದವರು ನಂತರ ಶ್ರೀ ಸಿದ್ಧಯ್ಯಸ್ವಾಮಿ ಒಡೆಯರು ಎಂಬುವವರು ಈ ಮಠಕ್ಕೆ ಗುರುಗಳಾಗಿದ್ದರು. ಈಗ ರೆಡ್ಡಿ ಕುಲದವರನ್ನು (ಗೌಡಕಿ ಮನೆತನದವರನ್ನು) ಊರಿನ ಜನ ಮುಖಂಡರು ಸೇರಿ ಆರ್ಚಕರನ್ನಾಗಿ ಮಾಡಿದ್ದಾರೆ. ಮೂಲತಃ ದೇವಲಾಪುರದ ಮಠಾಧಿಪತಿಗಳು ಊರಿನ ಹಬ್ಬ, ಹರಿದಿನ, ಮದುವೆ, ಮುಂಜೆ ಇತ್ಯಾದಿ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ. ಈ ಊರಲ್ಲಿ ಪುರಾತನ ಕಾಲದ ಹಾಳುಬಿದ್ದ ರೇವಣಸಿದ್ಧನ ಮಠವಿದೆ. “ಈ ಮಠದಲ್ಲಿ ಒಂದು ದೊಡ್ಡದಾದ ಹುತ್ತ ಬೆಳೆದು ಇದರಲ್ಲಿ ತುಂಬಾ ವರ್ಷಗಳಿಂದ ಹಾವೊಂದು ವಾಸವಾಗಿದೆ. ಇದಕ್ಕೆ ಉದ್ದವಾದ ಕೂದಲುಗಳು ಬೆಳೆದಿವೆ ಎಂದು ಈಗಿನ ಆರ್ಚಕರಾದ ಗಿರಿಜಮ್ಮಜ್ಜಿ ಹೇಳುತ್ತಾರೆ. ಈ ಮಠವನ್ನು ಕೆಡವಿ ನೂತನ ಮಠವನ್ನು ಕಟ್ಟಿದರಾಯಿತು ಎಂದು ಮಾತನಾಡಿಕೊಂಡರೆ, ಈ ಹಾವು ಒಬ್ಬ ಹೆಣ್ಣು ಮಗಳ ಕನಸಿನಲ್ಲಿ ಬಂದು ನೀವು ಕಟ್ಟುವುದಾದರೆ ಮೂರು ಗುಡ್ಡದಕಲ್ಲು ಮತ್ತು ಮೂರು ಹೊಳೆ ನೀರು ತಂದು ಒಂದೇ ದಿನದಲ್ಲಿ ಕಟ್ಟಬೇಕು ಎಂದು ಹೇಳಿತಂತೆ.” ಒಂದೇ ದಿನದಲ್ಲಿ ಮಠವನ್ನು ಕಟ್ಟಲು ಆಗದೆ ಮೂಲ ಮಠದ ಪಕ್ಕದಲ್ಲಿ ನೂತನವಾದ ರೇವಣಸಿದ್ಧನ ಮಠವನ್ನು ಕಟ್ಟಿದ್ದಾರೆ. ಇದು ಸುಮಾರು 30-35 ವರ್ಷ ಆಗಿರಬಹುದು. ಈ ನೂತನ ಮಠಕ್ಕೆ ಗೌಡಕಿ ಮನೆತನದವರು ದಿನಕ್ಕೆ ಒಂದು ಸಲ ಮಾತ್ರ ಪೂಜೆ ಮಾಡುತ್ತಾರೆ. ಸಂಜೆ ದೀಪ ಮಾತ್ರ ಹಚ್ಚುತ್ತಾರೆ. ವಾರದ ಪೂಜೆ ಸೋಮವಾರ. ಆ ದಿನ ಊರಿನ ಜನರೆಲ್ಲಾ ನಡೆದುಕೊಳ್ಳುತ್ತಾರೆ. ಶಿವರಾತ್ರಿಯ ದಿವಸ ಜನರೆಲ್ಲ ಕಾಳು ಗುಗ್ಗುರಿ ನೈವೇದ್ಯ ಮಾಡಿ, ಡೊಳ್ಳು ವಾದ್ಯ ಭಜನೆಯೊಂದಿಗೆ ಜಾಗರಣೆ ಮಾಡುತ್ತಾರೆ. ಶಿವರಾತ್ರಿ ಆಗಿ ಐದು ದಿನಕ್ಕೆ ಪಂಚಮಿ ನಕ್ಷತ್ರವೆಂದು ಸಾಯಂಕಾಲ ಆರು ಗಂಟೆಗೆ ರಥ ಎಳೆಯುತ್ತಾರೆ. ನಂತರ ರೇವಣಸಿದ್ಧನ ಶಿಷ್ಯ ಗಾದಿಲಿಂಗನ ರಥ ಹಿಂದಾಗಿ ಎಳೆಯುತ್ತಾರೆ. ಈ ಮಠದಲ್ಲಿ ಮದುವೆಗಳು ನಡೆಯುತ್ತವೆ. ಮುಖ್ಯವಾಗಿ ಈ ಊರಿನಲ್ಲಿ ಅಧಿಕವಾಗಿ ಕುರುಬರೇ ಕಂಡುಬರುತ್ತಾರೆ. ಆದರೆ ಒಂದು ಮನೆಯೂ ಸಹ ಒಡೆಯರದಿಲ್ಲ. ಮೇಲಾಗಿ ಈ ಮೂಲ ಮಠವನ್ನೇ ಹಿಂದಕ್ಕೆ ತಳ್ಳಿದ್ದಾರೆಂದು ಹೇಳಬಹುದು. ಈ ಮಠಕ್ಕೆ ಮೂವತ್ಮೂರು ಹಳ್ಳಿ ಭಕ್ತರಿದ್ದಾರೆ.
2. ದೇವಲಾಪುರ : ಕಂಪ್ಲಿ ಬಳ್ಳಾರಿ ಮುಖ್ಯರಸ್ತೆಯಲ್ಲಿ ಕಂಪ್ಲಿಯಿಂದ 15 ಕಿ.ಮೀ. ದೂರದಲ್ಲಿ ಈ ಗ್ರಾಮವಿದೆ. ಈ ಊರಿನಲ್ಲಿ ರೇವಣಸಿದ್ಧೇಶ್ವರ ಮಠ 17-6-1999ರಲ್ಲಿ ಸ್ಥಾಪನೆ ಆಗಿದೆ. ಈ ಮಠಕ್ಕೆ ಕುರುಬರ ಗುರು ಒಡೆಯರ ರೋಹಿತಸ್ವಾಮಿ ಪೂಜೆ ಮಾಡುತ್ತಾರೆ. ದಿನಕ್ಕೆ ಎರಡು ಸಲ ಪೂಜೆ. ವಾರದ ಪೂಜೆ ಸೋಮವಾರ. ಅಮವಾಸ್ಯೆ ಹುಣ್ಣಿಮೆಯ ದಿನಕ್ಕೆ ಭಕ್ತರು ಅಭಿಷೇಕ ಮಾಡಿಸುತ್ತಾರೆ. ಶಿವರಾತ್ರಿ ಆಗಿ ಐದು ದಿನಕ್ಕೆ ರೇವಣಸಿದ್ಧನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಭಜನೆ, ಡೊಳ್ಳು, ನಂದಿಕೋಲು, ಕೋಲಾಟ ಇತ್ಯಾದಿ ವಾದ್ಯಗಳ ಮೂಲಕ ಮಾಡುತ್ತಾರೆ. ಬಸವಜಯಂತಿ ದಿವಸ ಪುರಾಣ, 9 ಅಥವಾ 11 ದಿವಸಗಳ ಕಾಲ ನಡೆಯುತ್ತದೆ. ಸಾಮೂಹಿಕ ವಿವಾಹಗಳು ನಡೆಯುತ್ತವೆ. ಈ ಗ್ರಾಮದಲ್ಲಿ ಕುರುಬರ ಸಂಖ್ಯೆ ಹನ್ನೊಂದು ಸಾವಿರ ಮತ್ತು ಒಡೆಯರ ಮನೆಗಳು ಇಪ್ಪತ್ತೈದು ಇರುವುದು ಕಂಡುಬರುತ್ತವೆ.
ಈ ಊರಿನಲ್ಲಿ `ಶ್ರೀ ಸಿದ್ಧಯ್ಯಸ್ವಾಮಿ ಒಡೆಯ’ ಎಂಬುವರ ಮನೆಯಲ್ಲಿ ಮೂರು ತಾಮ್ರಪತ್ರ ಹಾಗೂ ಎರಡು ತಾಮ್ರದ ಬಿಲ್ಲೆಗಳು ಇರುವುದು ಕಂಡುಬಂದಿದೆ. ಅವುಗಳನ್ನು ಸಮೀಕ್ಷೆ ಮಾಡಿದಾಗ ಕುರುಬರ ಗುರು ಪರಂಪರೆಗೆ ಒಡೆಯರು ಮತ್ತು ಕುರುಬರ ಮಧ್ಯೆ ನಡೆದ ವಾದವಿವಾದಗಳ ವಿವರ, ಒಡೆಯರಿಗೆ ದಾನ ನೀಡಿದ ಬಗ್ಗೆ ಇಂತಿಷ್ಟು ಕಾಣಿಕೆಯನ್ನು ಸಲ್ಲಿಸಬೇಕೆಂಬ ಕರಾರುಗಳನ್ನು ಹಾಗೂ ಇನ್ನಿತರ ಅನೇಕ ವಿಷಯಗಳನ್ನು ಈ ತಾಮ್ರಪತ್ರದಲ್ಲಿ ದಾಖಲಿಸಲಾಗಿದೆ.
3. ವಿಠಲಾಪುರ : ಈ ಗ್ರಾಮವು ಹೊಸಪೇಟೆ ಬಳ್ಳಾರಿ ಮುಖ್ಯರಸ್ತೆಯಲ್ಲಿ ಬರುವ ಕುಡುತಿನಿಯಿಂದ 23 ಕಿ.ಮೀ. ದೂರದಲ್ಲಿ ಸೊಂಡೂರು ತಾಲ್ಲೂಕಿನಲ್ಲಿದೆ. ಈ ಮಠ ಶ್ರೀ ಸಿದ್ಧಯ್ಯಸ್ವಾಮಿ ಒಡೆಯರು ಕಟ್ಟಿಸಿದ್ದು. ಸುಮಾರು 50 ವರ್ಷ ಆಗಿರಬಹುದು. ಈ ಮಠದ ಪಕ್ಕದಲ್ಲಿ ಅವರ ಜೀವಂತ ಸಮಾಧಿ ಇರುವುದು ಕಂಡುಬರುತ್ತದೆ. ಈ ಮಠದ ಪೂಜೆ ಆಚಾರ, ವಿಚಾರವನ್ನು ಒಡೆಯರು ಮಾಡುತ್ತಿದ್ದರು. ಇವರು ಕಾಲವಾದ ಮೇಲೆ ನಂತರದಲ್ಲಿ ವಂಶಜರು ಪಟ್ಟಣವನ್ನು ಸೇರಿದ್ದಾರೆ. ಈಗ ಕೆಲವು ವರ್ಷಗಳಿಂದ ಶ್ರೀಶೈಲದಿಂದ ಬಂದ ಜಂಗಮ `ಮಲ್ಲಿಕಾರ್ಜುನ ಸ್ವಾಮಿ’ ಅವರನ್ನು ನೇಮಿಸಿದ್ದಾರೆ. ಅವರು ಈ ಮಠಕ್ಕೆ ದಿನಕ್ಕೆರಡು ಬಾರಿ ಪೂಜೆ ಮತ್ತು ಸೋಮವಾರ ವಾರದ ಪೂಜೆ ಮಾಡುತ್ತಾರೆ. ಅಮವಾಸೆ, ಹುಣ್ಣಿಮೆಗೆ ಅನ್ನದಾಸೋಹ ಊರಿನ ಜನರು ನಡೆಸುತ್ತಾರೆ. ಈ ಮಠದ ಜಾತ್ರೆ ಉತ್ಸವ ಯುಗಾದಿ ಅಮವಾಸೆ ಆಗಿ ಒಂಭತ್ತು ದಿನಕ್ಕೆ ರಾಮನವಮಿ ದಿವಸ ನಡೆಯುತ್ತದೆ. ವಿವಾಹ ಸಹ ನಡೆಯುತ್ತದೆ. ರೇವಣಸಿದ್ಧನ ಮೂರ್ತಿಯ ಮುಂದೆ ನೂತನವಾಗಿ 2012ರಲ್ಲಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಊರಿನಲ್ಲಿ ಕುರುಬರ ಜನಸಂಖ್ಯೆ ನಾಲ್ಕು ಸಾವಿರ ಇದ್ದರೆ, ಒಡೆಯರ ಮನೆಗಳು ಕೇವಲ ಮೂರಿವೆ.
4. ಬಳ್ಳಾರಿ : ಈ ಊರಿನ ರೇವಣಸಿದ್ಧೇಶ್ವರ ಮಠ ಮಿಲ್ಲಾರ್‍ಪೇಟೆಯಲ್ಲಿದೆ. 22.5.1969ರಲ್ಲಿ ಸ್ಥಾಪನೆಯಾಗಿದೆ. ಈ ಮಠದ ಅಧಿಪತಿಯನ್ನು ಕುರುಬರ ಗುರು ಒಡೆಯರ ಶರಣಯ್ಯ ಸ್ವಾಮಿಗಳು ವಂಶಪರಂಪರೆಯಾಗಿ ನಡೆಯುತ್ತಾ ಬಂದಿದ್ದಾರೆ. ಈ ಮಠದಲ್ಲಿ ದಿನಕ್ಕೆ ಎರಡು ಸಲ ಪೂಜೆ, ವಾರದ ಪೂಜೆ ಸೋಮವಾರದಂದು ಭಜನೆ ನಡೆಯುತ್ತದೆ. ಪ್ರತಿ ಶ್ರಾವಣ ಮಾಸದಲ್ಲಿ ದಿನನಿತ್ಯ ಅಭಿಷೇಕ ಕೊನೆಗೆ ಅಖಂಡ ಭಜನೆ (ಬೆಳಗ್ಗೆ ಆರಂಭವಾದದ್ದು ಮರುದಿನ ಬೆಳಗ್ಗೆ ಮುಕ್ತಾಯವಾಗುತ್ತದೆ)ಯೊಂದಿಗೆ ಮುಗಿಯುತ್ತದೆ. ನಂತರ ಅನ್ನ ಗಣರಾಧನೆ ನಡೆಯುತ್ತವೆ. ವಿಜಯದಶಮಿಯಂದು ಪಲ್ಲಕಿ ಉತ್ಸವ, ಕಾರ್ತಿಕ ಮಾಸದಲ್ಲಿ ಸೋಮವಾರ ಕಾರ್ತಿಕೋತ್ಸವ ನಡೆಸುತ್ತಾರೆ.
ಫಾಲ್ಗುಣ ಶುದ್ಧ ಮಾಸ ತ್ರಯೋದಶಿ ರೇವಣಸಿದ್ಧರ ಹುಟ್ಟಿದ ದಿವಸ ಜಾತ್ರಾ ಉತ್ಸವ ಪುರಬೀದಿಗಳಲ್ಲಿ ಮೆರವಣಿಗೆ ನಡೆಯುತ್ತವೆ. ಸದ್ಭಕ್ತರೆಲ್ಲರೂ ತಮ್ಮ ತಮ್ಮ ಕಳಸಗಳ ಸಮೇತ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀಗುರು ರೇವಣಸಿದ್ಧನ ಕೃಪಾರ್ಶೀವಾದಕ್ಕೆ ಪಾತ್ರರಾಗುತ್ತಾರೆ.
5. ಓಬಳಾಪುರ : ಈ ಗ್ರಾಮ ಬಳ್ಳಾರಿಯಿಂದ ಸುಮಾರು 15 ಕಿ.ಮೀ. ಅಂತರದಲ್ಲಿದೆ. ಈ ಊರಿನಲ್ಲಿ ರೇವಣಸಿದ್ಧನ ಮೂರ್ತಿಯನ್ನು ವಂಶಪಾರಂಪರ್ಯವಾಗಿ ವಿರೂಪಾಕ್ಷಯ್ಯನವರ ಮನೆಯಲ್ಲಿಯೇ ಪೂಜಿಸುತ್ತಾ ಬಂದಿದ್ದರು. ಆದರೆ ಯಾವುದೋ ಕಾರಣದಿಂದ ತಮ್ಮ ತಮ್ಮಲ್ಲಿಯೇ ಕಲಹವುಂಟಾಗಿ ರೇವಣಸಿದ್ಧನಿಗೆ ಪ್ರತ್ಯೇಕವಾದ ಮಠವನ್ನು 2012ರ ಜನವರಿ 26ರಂದು ಸ್ಥಾಪನೆ ಮಾಡಿದ್ದಾರೆ. ಈ ಮಠಕ್ಕೆ ಒಬ್ಬ ಜಂಗಮನನ್ನು ತಿಂಗಳಿಗೆ ಮೂರು ಸಾವಿರ ಸಂಬಳ ಮಾತನಾಡಿ ಒಂದು ಮನೆಯನ್ನು ಕೊಟ್ಟು ಇರಿಸಿದ್ದಾರೆ. ಇವರು ಈ ಮಠದ ಪೂಜೆ ದಿನಕ್ಕೆ ಎರಡು ಸಲ, ವಾರದ ಪೂಜೆ ಸೋಮವಾರ ಮತ್ತು ಶುಕ್ರವಾರದಂದು ನಡೆಯುತ್ತದೆ. ಸೋಮವಾರ, ಅಮವಾಸೆ, ಹುಣ್ಣಿಮೆಗೆ ಭಜನೆ ನಡೆಯುತ್ತದೆ. ಶ್ರಾವಣಮಾಸದಲ್ಲಿ ಎಷ್ಟು ಸೋಮವಾರ ಬರುತ್ತವೆ ಅಷ್ಟು ವಾರ ಅಭಿಷೇಕ, ಮಹಾಮಂಗಳಾರತಿ, ಅನ್ನದಾನ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ, ವಿಜಯದಶಮಿಯ ದಿವಸ ಪಲ್ಲಕ್ಕಿ ಉತ್ಸವವನ್ನು ಊರು ತುಂಬಾ ಮೆರವಣಿಗೆಯ ಸಮೇತ ಬನ್ನಿಗಿಡಕ್ಕೆ ಹೋಗಿ ಮಂಗಳಾರತಿ ಮಾಡಿ  ಬರುತ್ತಾರೆ. ಈ ಊರಿನಲ್ಲಿರುವ ಕುರುಬರ ಮನೆಗಳು 120, ಒಡೆಯರ ಮನೆಗಳು 40. ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳನ್ನು ಸಮೀಕ್ಷೆ ಮಾಡಿದಾಗ ಕುರುಬರು ವಾಸಿಸುವಂತಹ ಗ್ರಾಮಗಳಲ್ಲಿ ಸಾಮಾನ್ಯವಾಗಿ ರೇವಣಸಿದ್ಧನ ಮಠಗಳು ಕಂಡುಬರುತ್ತವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಜನಪದ ಹಾಡು ಸ್ಪಷ್ಟಪಡಿಸುತ್ತದೆ.
ನಾಗುಳೊನ್ನೀಗೆ ಆದವು ಗುರುಮಠ | ನ್ಯಾಯಗಾರರು ಕುರುಬರು
ನ್ಯಾಯಗಾರರು ಕುರುಬರ ಕೇರ್ಯಾಗಿ | ಆದಾವು ರೇವಣ್ಣರ ಗುರುಮಠ
ಹೀಗೆ ಕುರುಬರ ಕೇರಿಗಳಲ್ಲಿ ಇರುವ ರೇವಣಸ್ವಾಮಿಯ ಮೇಲೆ ಕುರುಬರಿಗೂ ಮತ್ತು ಒಡೆಯರುಗಳಿಗೂ ಎಲ್ಲಿಲ್ಲದ ಭಕ್ತಿ ಭಾವ ಮತ್ತು ಶ್ರದ್ಧೆ. ಈ ದೈವದ ಮೇಲೆ ಅವರಿಗಿರುವ ಹಂಬಲವನ್ನು ಜನಪದರು ಈ ರೀತಿ ಹೇಳಿಕೊಂಡಿದ್ದಾರೆ.
ಈ ಮಠಗಳ ಒಡೆತನ ಕುರುಬರಿಗೆ ಸೇರಿದೆ. ಕುರುಬರ ಗುರುಗಳಾದ ಒಡೆಯರು ಈ ಮಠಗಳ ಅಧಿಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಕುರುಬರ ನಾಮಕರಣ, ದೀಕ್ಷೆ ಮದುವೆ, ಜಾತ್ರೆ, ಉತ್ಸವಗಳಂಥ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಈ ಒಡೆಯರು ಪೌರೋಹಿತ್ಯವನ್ನು ವಹಿಸುವರು. ಒಡೆಯರು ನಿಧನರಾದ ನಂತರ ಆ ಒಡೆಯರ ಹೆಂಡಂದಿರಿಗೆ ಗುರುತನ ಬರುವುದು. ಅವಳಿಗೆ ಒಡೆಯರಮ್ಮ. ಅಮ್ಮನೋರು ಎಂದು ಕರೆಯುವರು. ಮುತ್ತೈದೆಯ ಸಂಕೇತಗಳಾದ ಕರಿಮಣಿಸರ, ಕುಂಕುಮ ತೆಗೆಯುವುದಿಲ್ಲ. ಕೊರಳಲ್ಲಿ ಲಿಂಗವನ್ನು ಧರಿಸುತ್ತಾರೆ. ಕುರುಬರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಕೆ ಗುರುಸ್ಥಾನದಲ್ಲಿ ನಿಂತು ಮುನ್ನಡೆಸುವುದು ಕಂಡುಬಂದಿದೆ. ಇದು ರೇವಣಸಿದ್ಧ ಹಾಕಿಕೊಟ್ಟ ಆಚರಣೆಗಳು, ಸಂಪ್ರದಾಯಗಳು. ಎಷ್ಟೊಂದು ಔಚಿತ್ಯಪೂರ್ಣವಾಗಿದ್ದವು ಎಂಬುದನ್ನು ಗಮನಿಸಬಹುದು.
ಆದರೆ ಕೊಲ್ಲಿಪಾಕಿ ಶಿವಲಿಂಗದಲ್ಲಿ ಉದ್ಭವವಾದಂತೆ ವಿನ್ಯಾಸಗೊಂಡಿರುವ ರೇವಣಸಿದ್ಧನ ಪ್ರಾಚೀನ ಶಿಲ್ಪ ಒಂದೂ ಕಂಡುಬಂದಿಲ್ಲ. ಡಾ. ಎಂ.ಎಂ. ಕಲಬುರ್ಗಿ ಅವರು ಹೇಳುವಂತೆ ಬಹುಶಃ 19ನೆಯ ಶತಮಾನದಲ್ಲಿ ಮುದ್ರಿತ ಪುಸ್ತಕಗಳ ಮೂಲಕ ಶಿವಲಿಂಗದಲ್ಲಿ ಉದ್ಭವವಾದಂಥ ಚಿತ್ರವನ್ನು ಪ್ರಚಾರಕ್ಕೆ ತಂದು 20ನೆಯ ಶತಮಾನದಲ್ಲಿ ಪಂಚಾಚಾರ್ಯರ ಪವಾಡದಿಂದ ಹಳೆಯ ದೇವಾಲಯಗಳಲ್ಲಿ ಹೊಸ ಬಿಳಿಕಲ್ಲಿನ ಶಿಲ್ಪವನ್ನು ಸ್ಥಾಪಿಸುತ್ತ ನಡೆದಿದ್ದಾರೆ. ಹೀಗಾಗಿ ನಿಜರೇವಣಸಿದ್ಧನ ಶಿಲ್ಪ 13ನೆಯ ಶತಮಾನದಷ್ಟು ಪ್ರಾಚೀನ. 20ನೆಯ ಶತಮಾನದಷ್ಟು ಆಧುನಿಕ ಎಂದು ಹೇಳಬಹುದು. ಇದಕ್ಕಾಗಿ ಕೃತಕ ರೇವಣಸಿದ್ಧನ ಶಿಲ್ಪಗಳು ನಮಗೆ ಅಧಿಕ ಪ್ರಮಾಣದಲ್ಲಿ ಕಾಣಸಿಗುತ್ತವೆ.
ವೀರಶೈವ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದಂತಹ ರೇಣುಕಾಚಾರ್ಯನು ಕೊಲ್ಲಿಪಾಕಿ ಸೋಮನಾಥ ಲಿಂಗದಲ್ಲಿ ಉದ್ಭವಿಸಿ, ಭೂಲೋಕದಲ್ಲಿ 1400 ವರ್ಷಗಳವರೆಗೆ ಇದ್ದು, 700 ವರ್ಷ ಮನುಷ್ಯನ ರೂಪದಲ್ಲಿ ಮತ್ತು 700 ವರ್ಷಮೂರ್ತಿ ದೇವರಾಗಿ ಲೀಲೆಗಳನ್ನು ಮಾಡಿದ್ದಾರೆ. ಕೈಲಾಸದ ರೇಣುಕನೇ ದ್ವಾಪರಯುಗದಲ್ಲಿ ರೇಣುಕಾಚಾರ್ಯರೆಂದು, ಕಲಿಯುಗದಲ್ಲಿ ಶ್ರೀ ರೇವಣಸಿದ್ಧನೆಂದು ಅವತರಿಸಿದ್ದರು ಎಂಬುದು ತಿಳಿದಿರುವ ಸಂಗತಿ.

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಕುರುಬರ ಗುರು ಒಡೆಯರು ಸಾಂಸ್ಕøತಿಕ ಅಧ್ಯಯನ, ಲೇ. ಡಾ. ಬಿ.ಜಿ. ಬಿರಾದಾರ, ಪುಟ 193.
2. ಅದೇ., ಪುಟ 192.
3. ಹರಿಹರನ ರಗಳೆ ರೇವಣಸಿದ್ಧೇಶ್ವರ ರಗಳೆ, (ಸಂ) ಎಂ.ಎಂ. ಕಲಬುರ್ಗಿ, ಪುಟ 289.
4. ಮಾರ್ಗ ಸಂಪುಟ 4, (ಲೇ) ಎಂ.ಎಂ. ಕಲಬುರ್ಗಿ, ರೇವಣಸಿದ್ಧರ ಲೇಖನ, 2004, ಪುಟ 356.
5. ಅದೇ., ಪುಟ 356.
6. ಸಿದ್ಧರಾಮ ಶಿವಯೋಗಿಯಾದಿ ರೇವಣಸಿದ್ಧನನ್ನು ಶಿವಾಚಾರ್ಯ ಮಾಡಿದುದು, (ಲೇ) ಎಂ.ಎಂ. ಕಲಬುರ್ಗಿ, ಲಿಂಗಾಯ ಜೈಲೈ 1, 2006, ಪುಟ 3-5.

 3ನೇ ವಾರ್ಡ್, ಮರಿಯಮ್ಮನಹಳ್ಳಿ, ಹೊಸಪೇಟೆ, ತಾಲ್ಲೂಕು, ಬಳ್ಳಾರಿ-583 222. ಮೊಬೈಲ್ 99024 93435.

Sunday, July 20, 2014

ಐರಣಿ ಸಾಂಸ್ಕøತಿಕ ಅವಲೋಕನ


ಐರಣಿ ಸಾಂಸ್ಕøತಿಕ ಅವಲೋಕನ ಮತ್ತು ಇತಿಹಾಸ


ಐರಣಿ ಹನುಮಂತಪ್ಪ

ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ 22 ಕಿ.ಮೀ. ಹರಿಹರದಿಂದ 15 ಕಿ.ಮೀ. ಅಂತರದಲ್ಲಿದೆ. `ಐರಣಿ’ ಪದಕ್ಕೆ ತೊರವೆ ರಾಮಾಯಣದಲ್ಲಿ `ವಿವಾಹಗಳಲ್ಲಿ ಮಂಗಳ ಸೂಚಕವಾದ ಬಣ್ಣದಿಂದ ಬರೆದಿಡುವ ಕುಂಭ ಅಥವಾ ಗಡಿಗೆ ಎಂಬ ಅರ್ಥವಿದೆ. ಆದರೆ ಈ ಗ್ರಾಮಕ್ಕೆ ಆ ಹೆಸರು ಹೇಗೆ ಬಂತು ಎಂಬುದು ನಿಖರವಾಗಿ ತಿಳಿಯದು. ಆದರೆ ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕನ ನೀತಿಶಾಸ್ತ್ರ ಮತ್ತು ಶುಕ್ರನ ನೀತಿಸಾರದಲ್ಲಿ  `ಐರಣಿ’ಯೆಂಬುದು ಒಂದು ರೀತಿಯ ತಾಂತ್ರಿಕತೆಯನ್ನು ಅಳವಡಿಸಿ ಕಟ್ಟುವ ಒಂದು ವಿಧವಾದ ಕೋಟೆಯಾಗಿದ್ದು ಈ ಸ್ಥಳದಲ್ಲಿ ನಿರ್ಮಿಸಿರುವುದರಿಂದ ಕೋಟೆಯೊಂದಿಗೆ ಗ್ರಾಮ ಸ್ಥಾಪನೆಯಾದ ಈ  ಊರಿಗೆ ಐರಣಿಯೆಂಬ ನಿರ್ದಿಷ್ಟ ನಿರ್ಮಾಣವಾಚಿ ಬಂದಿದೆ. ಇದಕ್ಕೆ ಐರಾವತ ಕ್ಷೇತ್ರ ಎಂಬ ಹೆಸರಿದೆ.
ಪುರಾತನ ದೇವಾಲಯ: ಐರಾವತ ಕ್ಷೇತ್ರದಲ್ಲಿರುವ ಗುಹಾರಣ್ಯದಲ್ಲಿ ಪುರಾತನ ಹರಿಹರೇಶ್ವರ ಮತ್ತು ಅನಂತಶಯನ ದ್ವಿಕೂಟಾಚಲ ದೇವಾಲಯ ಬೇರೆ ಬೇರೆ ರೀತಿಯ ವಿಮಾನ ಗೋಪುರವುಳ್ಳ ದೇವಾಲಯ ನಾಲ್ಕು ಅಡಿ ಎತ್ತರವುಳ್ಳ ತಲ ನಲವತ್ತು ಅಡಿ ಉದ್ದ ಹನ್ನೆರಡು ಅಡಿ ಅಗಲವುಳ್ಳ ಸಾಮಾನ್ಯ ಸಭಾಮಂಟಪ, (ನವರಂಗವಿದ್ದು), ಗರ್ಭಗುಡಿಗಳು ಪ್ರತ್ಯೇಕವಾಗಿದ್ದು, ತೆರೆದ ಒಂದೇ ಸಭಾಮಂಟಪವಿದೆ. ಉತ್ತರ ದಿಕ್ಕಿನ ಗರ್ಭಗುಡಿಯಲ್ಲಿ ಒಂದೇ ಪೀಠ ಪ್ರಣಾಲದ ಮೇಲೆ ದ್ವಿಲಿಂಗವಿದೆ. ಗರ್ಭಗುಡಿಯಲ್ಲಿ ಗೂಢ ಮಂಟಪವಿದೆ. ಸಭಾಮಂಟಪದಲ್ಲಿ ಸುಂದರ ಕೆತ್ತನೆಯ ನಂದಿ ಇದ್ದು, ಮೇಲೆ ಕುಂಭಾಕಾರದ ವಿಮಾನ ಗೋಪುರವಿದೆ. ಬಾಗಿಲವಾಡದ ದ್ವಾರಬಂಧದ ಲಲಾಟಬಿಂಬದ ಮಧ್ಯದಲ್ಲಿ ಗಜಲಕ್ಷ್ಮಿ ಸಹಿತ ಎಡಬಲದಲ್ಲಿ ಕೆಳಮುಖ ವಾದ ಕಮಲದ ಮೊಗ್ಗು ಇದೆ. ದ್ವಾರಬಂಧದ ತೋಳುಗಳ ಎರಡು ಬದಿಗಳಲ್ಲಿ ಗಂಡಭೇರುಂಡ ಪಕ್ಷಿಗಳ ಮೇಲೆ ಋಷಿ ಚಿತ್ರವಿದ್ದು, ತೋಳುಗಳಲ್ಲಿ ಲತಾಬಳ್ಳಿ ತಳದಲ್ಲಿ ಶೈವ ಮತ್ತು ವೈಷ್ಣವ ದ್ವಾರಪಾಲಕ ಉಬ್ಬು ಚಿತ್ರಗಳು ಇವೆ.
ದಕ್ಷಿಣ ದಿಕ್ಕಿನ ಗರ್ಭಗೃಹದಲ್ಲಿ ಗೂಢಮಂಟಪ, ಗರ್ಭಗೃಹದ ಮಧ್ಯದಲ್ಲಿ ಪ್ರತ್ಯೇಕವಾದ ಚೌಕಾಕಾರದ ಶಿಲೆಯಲ್ಲಿ ಐದು ಹೆಡೆ ನಾಗನ ಮೇಲೆ ಪವಡಿಸಿದ ಅನಂತಶಯನ ಮೂರ್ತಿ ಹಾಗೂ ಲಕ್ಷ್ಮೀ ಸರಸ್ವತಿ ಸೇವೆ ಸಲ್ಲಿಸುತ್ತಿರುವ ಚಿತ್ರಗಳನ್ನು ಚಿತ್ರಿಸಿ ಅಧಿಷ್ಠಾನ ಮೇಲೆ ನಿಲ್ಲಿಸಲಾಗಿದೆ. ದ್ವಾರಬಂಧದ ಮೇಲೆ ಖಲ್ವ (ಹಿಂಚಾಚಿರುವ ಪಟ್ಟಿಯಲ್ಲಿ) ಚಿತ್ರಪಟವಿದ್ದು, ಅವುಗಳನ್ನು ಸರಿಯಾಗಿ ಗುರುತಿಸಲಾಗುವುದಿಲ್ಲ. ಬಾಗಿಲವಾಡದ ದ್ವಾರಬಂಧದ ತೋಳುಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ಆಯುಧ ಹಿಡಿದ ವಾಹನ, ಪರಶುರಾಮ, ಬಲರಾಮ ಶ್ರೀರಾಮ, ಕೃಷ್ಣವತಾರ ಮೂರ್ತಿ, ಜೈನ ದಿಗಂಬರ ಮೂರ್ತಿ, ವಾಹನ ಏರಿ ಹೊರಟ ಕಲ್ಕಿ ಉಬ್ಬು ಚಿತ್ರಗಳಿವೆ. ತಳದಲ್ಲಿ ವೈಷ್ಣವ ದ್ವಾರಪಾಲಕರು ಬಾಗಿಲುವಾಡದ ಮತ್ತೊಂದು ತೋಳುಪಟ್ಟಿಯಲ್ಲಿ ಹೂವಿನ ಚಿತ್ರಗಳಿವೆ. ದೇವಾಲಯ ನವರಂಗ ಐದು ಅಂಕಣದಲ್ಲಿ ಸುಮಾರು 40 ಅಡಿ ಉದ್ದ 12 ಅಡಿ ಅಗಲದ ತಳದ ಮೇಲೆ ಎರಡು ಗರ್ಭಗುಡಿ ಬಾಗಿಲುಗಳು, ಮೂರು ದೇವಕೋಷ್ಠಕಗಳಲ್ಲಿ ಉತ್ತರದ ಕೋಷ್ಟದಲ್ಲಿ ಪಾರ್ವತಿ, ಮಧ್ಯದ ಕೋಷ್ಟದಲ್ಲಿ ಪಾಂಡುರಂಗನ ಮೂರ್ತಿ, ಅದು ಸ್ಥಳಾಂತರ ಮಾಡಿರಬಹುದಾಗಿದೆ. ದಕ್ಷಿಣ ಕೋಷ್ಟದಲ್ಲಿ ವಿನಾಯಕ ಮೂರ್ತಿಗಳಿವೆ. ಸುತ್ತಲೂ ಗಚ್ಚು ಗಾರೆಗಳಿಂದ ಲೇಪಿತವಾದ ದೇವಾಲಯ ಬಹಳ ಸುಂದರವಾಗಿದ್ದು, ದೇವಾಲಯದ ಪೂರ್ವದಿಕ್ಕಿನಲ್ಲಿ ಸುಮಾರು 150 ಅಡಿ ಅಂತರದಲ್ಲಿ ತುಂಗಭದ್ರೆ ಉತ್ತರಾಭಿಮುಖವಾಗಿ ಹರಿಯುತ್ತಿದ್ದು, ಸಾಮಾನ್ಯ ನದಿ ಪಾತಳಿಯ ದಡದಲ್ಲಿ ಎರಡು ಕಲ್ಲು ಮಂಟಪಗಳು ಮೇಲೆ ಚಕ್ರವಿನ್ಯಾಸದ ಐದು ಸ್ಥಾವರದ ಮೆಟ್ಟಿಲು ಕಲ್ಲು ಮತ್ತು ಗಚ್ಚುಗಾರೆ ರಚನೆ ಮೇಲೆ ಕುಂಭ ಎರಡರಲ್ಲಿ ಒಂದು ಕಿರಿದಾದದ್ದು ಮತ್ತೊಂದು ಎತ್ತರವಾದದ್ದು ಭದ್ರಬುನಾದಿ ಕಲ್ಲು ಹಾಸುಗೆ ಕಂಬ ಬೊದಿಗೆಗಳು ಮಂಟಪ ಪ್ರವಾಹ ಹೆಚ್ಚಿದಾಗ ನದಿಯಲ್ಲಿ ಮುಳುಗುತ್ತವೆ. ದೇವಸ್ಥಾನದ ಪ್ರಾಂಗಣದಿಂದ ನದಿ ತಟದವರೆಗೂ 120-150 ಅಡಿ ಅಗಲವಾಗಿ ಪಾವಟಿಗಳು ಇದ್ದವು. ಇತ್ತಿತ್ತಲಾಗಿ ಅವು ನಿರ್ಲಕ್ಷತನದಿಂದಾಗಿ ಕಾಣೆಯಾಗಿವೆ. ದ್ವಿಕೂಟಾಚಲ ದೇವಾಲಯದ ಅನತಿ ಸಮೀಪದಲ್ಲಿ ಬ್ರಾಹ್ಮಣರ ಅಗ್ರಹಾರವಿದ್ದು ಅದು ಸಹ ಈಗ ಉಳಿದಿಲ್ಲ. ಅದು ಕೃಷಿ ಭೂಮಿಯಾಗಿದೆ.
ರಕ್ಷಣಾ ಕೋಟೆ: ವಿಜಯನಗರ ಅರಸ ಒಂದನೇ ದೇವರಾಯನ ಕಾಲಕ್ಕೆ (ಕ್ರಿ.ಶ.1406-1422) ಬಂಕಾಪುರ ಯುದ್ಧದಲ್ಲಿ ಬಹಮನಿ ಅರಸರಿಂದ ಸೋಲುಂಡ ಕಹಿ ನೆನಪು ಅವನಿಗೆ ಬಾಧಿಸುತ್ತಿತ್ತು. ಅದಕ್ಕೆ ಈ ಭಾಗದಲ್ಲಿ ರಕ್ಷಣಾ ಮತ್ತು ಶೇಖರಣಾ ಕೋಟೆ ಅವಶ್ಯಕವಾಗಿತ್ತು. ಅದಕ್ಕಾಗಿ ಈ ಸ್ಥಳ ಸೂಕ್ತವೆಂದು ಭಾವಿಸಿ ರಕ್ಷಣಾ ಕೋಟೆ ನಿರ್ಮಿಸಿರಬಹುದಾಗಿದೆ. ಹೊನ್ನಾವರ, ಬನವಾಸಿ, ಬಂಕಾಪುರ, ರಾಣೇಬೆನ್ನೂರು ಹರಪನಹಳ್ಳಿಗಳಿಂದ ವಿಜಯನಗರದವರೆಗೆ ರಾಜಮಾರ್ಗವಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಆ ಮಾರ್ಗ ಐರಾವತ ಕ್ಷೇತ್ರ ಗುಹಾರಣ್ಯ ಮೂಲಕ ತುಂಗಭದ್ರಾ ನದಿ ದಾಟಲು ಸೂಕ್ತವಾಗಿದ್ದು ಅಲ್ಲಿ ಕಡವು ಎಂಬ ಸ್ಥಳವಿದ್ದು, ನದಿ ದಾಟಲು ದೋಣಿ ಹರಿಗೋಲು ತೆಪ್ಪದಿಂದ ಸೈನಿಕರನ್ನು ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ತಿಳಿದುಬರುತ್ತದೆ. (ಬಳ್ಳಾರಿ ಜಿಲ್ಲಾ ಸಾಂಸ್ಕøತಿಕ ಅಧ್ಯಯನ ಪುಟ 51, ಕುಂಬಾಸ) ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಬೇರ್ಪಡಿಸುವ ತುಂಗಭದ್ರೆ ದಡದಲ್ಲಿ ನಿರ್ಮಿಸಲಾಗಿದೆ. ಎತ್ತರವಾದ ಗುಡ್ಡಗಳುಳ್ಳ ದಟ್ಟ ಅಡವಿ, ತುಂಗಭದ್ರೆ ಅತಿ ವೇಗವಾಗಿ ಹರಿವ ಪ್ರವಾಹ ಕೋಟೆ ಸುತ್ತಲೂ ನಿಸರ್ಗದತ್ತವಾದಂತಹ ತಗ್ಗುಪ್ರದೇಶ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಕೋಟೆ ದ್ವೀಪವಾಗಿ ಪರಿಣಮಿಸುವಂತಹ ಈ ಒಂದು ಸ್ಥಳ ಆಯ್ಕೆ ಮಾಡಿ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ 15ರಿಂದ 20 ಎಕರೆ ಪ್ರದೇಶಗಳಲ್ಲಿ ಕೋಟೆ ನಿರ್ಮಾಣವಾಗಿದೆ. ಆದರೆ ಯಾವಾಗ, ಎಂದು, ಯಾರಿಂದ ನಿರ್ಮಾಣವಾಯಿತೆಂಬುದಕ್ಕೆ ಆಧಾರಗಳಿಲ್ಲ.
ಕೋಟೆ ರಚನಾ ವಿವರ: ಪೂರ್ವದಲ್ಲಿ ಉತ್ತರಣವಾಹಿನಿಯಾಗಿ ತುಂಗಭದ್ರೆ ನದಿ ಹರಿವ ಎತ್ತರದ ದಿಣ್ಣೆ ಅಥವಾ ಸಣ್ಣಗುಡ್ಡ ಉತ್ತರ ಪಶ್ಚಿಮ ಮತ್ತು ದಕ್ಷಿಣದಲ್ಲಿ ಒತ್ತೊತ್ತಾಗೆ ಬೆಳೆದ ಗಿಡಗಂಟಿಗಳಿಂದ ಕೂಡಿದ ತಗ್ಗುಪ್ರದೇಶ ಮಳೆಗಾಲದಲ್ಲಿ ನದಿ ಪ್ರವಾಹ ಸುತ್ತುವರಿಯುವುದು. ಬೇಸಿಗೆಯಲ್ಲಿಯೂ ಕೆಸರುಯುಕ್ತ ಭೂಮಿ. ಹೀಗೆ ನೈಸರ್ಗಿಕ ರಕ್ಷಣೆ ಹೊಂದಿರುವ ಗುಡ್ಡ ಒಳಮಾಡಿಕೊಂಡು 15.20 ಎಕರೆ ಪ್ರದೇಶದಲ್ಲಿ ಮೂರು ಸುತ್ತಿನ ಕೋಟೆ ನಿರ್ಮಿಸಲಾಗಿದೆ. ಮೊದಲ ಹೊರಸುತ್ತು ಕೋಟೆ ನದಿತಟಕದಲ್ಲಿಯ ಒಂದು ಕೊತ್ತಳದಿಂದ ದಿಣೆ ಸುತ್ತುವರಿದು ಪುನಃ ನದಿ ತಟಾಕದಲ್ಲಿರುವ ಕೊತ್ತಳದವರೆಗೆ ಸ್ಥಳೀಯ ಕಲ್ಲು ಮಣ್ಣು ಮತ್ತು ಕಂದಕ ತೋಡಿ ಹೊರಹಾಕಿದ ಪರಿಕರಗಳಿಂದ ಸುಮಾರು ತಳದಲ್ಲಿ 10-12 ಅಗಲ ಮೇಲೆ ಹೋದಂತೆ ಅಗಲ ಕಿರಿದಾಗುವಂತೆ ಸುಮಾರು 2500 ಅಡಿ ಉದ್ದ ನಿರ್ಮಿಸಿದ್ದು ಅದು ಸ್ಥಳೀಯರಿಂದ ಇತ್ತಿತ್ತಲಾಗಿ ನಾಶವಾಗಿ ದಿಬ್ಬಿ ಉಳಿದಿದೆ. ಅದರ ಒಳಸುತ್ತು ಕಂದಕ ಸುಮಾರು 60 ಅಡಿಗಿಂತ ಹೆಚ್ಚು ಅಗಲ 25-30 ಅಡಿ ಆಳ ಕಂದಕ ನದಿ ಪಾತಳಿಯಿಂದ ಪ್ರಾರಂಭವಾಗಿ ಪುನಃ ನದಿಯವರೆಗೆ ಸದಾ ನೀರು ಹರಿವಂತೆ ಕಂದಕವಿದ್ದು, ಕಂದಕಕ್ಕೆ ನೈಸರ್ಗಿಕವಾಗಿ ನೀರು ಹರಿಯುವಂತೆ ನದಿಯಲ್ಲಿ ಸುಮಾರು 50 ಅಡಿ ಉದ್ದ 10 ಅಡಿ ಅಗಲ 25-30 ಅಡಿ ಎತ್ತರದ ಅತೀ ಭಾರವಾದ ಶಿಲೆಗಾರೆಗಚ್ಚು ಉಪಯೋಗಿಸಿ ತಡೆಗೋಡೆ ನಿರ್ಮಿಸಲಾಗಿದ್ದು ಇಂದಿಗೂ ಭದ್ರವಾಗಿ ಉಳಿದಿದೆ. ಕಂದಕ ಅನುಸರಿಸಿ ಮತ್ತೊಂದು ಬದಿಗೆ ಮತ್ತೊಂದು ಮಧ್ಯದ 3ನೇ ಕೋಟೆ ಗೋಡೆ ಸ್ಥಳೀಯ ಪರಿಕರಗಳಿಂದ ನಿರ್ಮಿಸಲಾಗಿದ್ದು, ಅದು ಹಾಳಾಗಿದೆ. ಆದರೆ 2ನೇ ಒಳಸುತ್ತು ಕೋಟೆ ಗೋಡೆ ಅಳುವೇರಿ ಭಾರವಾದ ದೊಡ್ಡ ಗಾತ್ರದ ಕಲ್ಲುಗಚ್ಚು ಗಾರೆಯಿಂದ ಗುಡ್ಡ ದಿಣ್ಣೆ ಸುತ್ತಲೂ ನದಿದಂಡೆ ಸಹಿತ ಆಯಾತಾಕಾರದಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇತರೆ ಕೋಟೆ ದಿಡ್ಡಿ ಬಾಗಿಲುಗಳಿಗಿಂತ ಉತ್ತರ ದಿಶೆ ದಿಡ್ಡಿ ಬಾಗಿಲು ಎತ್ತರದಲ್ಲಿ ಅಗಲದಲ್ಲಿ ದೊಡ್ಡದಾಗಿದ್ದು, ಪುಲಿಯೋಗ ಎತ್ತರ, ಅಗಲದಲ್ಲಿ ದೊಡ್ಡದಾಗಿದ್ದು ದಕ್ಷಿಣ ಆಸೆ ಬಾಗಿಲು ಎಲ್ಲಾ ಕೋಟೆ ಬಾಗಿಲಿನಂತಿದೆ. ಈ ಸುತ್ತಾ ಕೋಟೆಗೆ ಆರು ಕೊತ್ತಲುಗಳು ಉಬ್ಬು ಅರ್ಧ ಚಂದ್ರಾಕೃತಿ ಯಲ್ಲಿವೆ. ಈ ಕೋಟೆಗೋಡೆಗಳ ಮೇಲೆ ಬಟ್ಟದೆನೆ ಅವುಗಳ ಮೇಲೆ ಅಂಬಗಂಡಿ ಬಟ್ಟದೆನೆಯಲ್ಲಿ ವಿವಿಧೆಡೆ ಗುರಿಯಿಟ್ಟು ಶಸ್ತ್ರಾಸ್ತ್ರ ಮದ್ದುಗುಂಡು ಉಪಯೋಗಕ್ಕಾಗಿ ಕಿಂಡಿಗಳನ್ನು ನಿರ್ಮಿಸಲಾಗಿದೆ. ಕೋಟೆಯ ಮಧ್ಯದಲ್ಲಿ ತಲ ಅಂತಸ್ತು ಮತ್ತು ಮೇಲಂತಸ್ತಿನ ಅರಮನೆ ಕಟ್ಟಿಗೆ ಕಂಬ ತೊಲೆಗಳು ಕಲ್ಲು ಹಾಸಿಗೆ, ಗಾರೆ ಗಚ್ಚು ಲೇಪನ ಮಾಡಲಾಗಿವೆ. ಆದರೆ ಅವು ಸ್ಥಳೀಯರಿಂದ ಕಟ್ಟಡ ಸಾಮಗ್ರಿಗಳು ಸ್ಥಳಾಂತರಗೊಂಡು ಹಾಳಾಗಿದೆ. ಗೋಡೆಗಳು ಇನ್ನು ಉಳಿದಿವೆ ಆದರೂ ಸಹ ಮೇಲ್ಮಹಡಿಗೆ ಹೋಗಲು ಪ್ರತ್ಯೇಕ ವ್ಯವಸ್ಥೆಯಿದ್ದು ಮೆಟ್ಟಿಲುಗಳುಳ್ಳ ಅಂಕುಡೊಂಕಾದ ಗೂಡಿನಂತಹ ಪ್ರತ್ಯೇಕ ಮನೆ ಇದ್ದು ಅರಮನೆಗಿಂತ ಎತ್ತರವಾಗಿದೆ ಇದರಲ್ಲಿ ಮೇಲೆ ಹೋಗಿ ಸುತ್ತಲೂ ವೀಕ್ಷಿಸಿದಾಗ 10-15 ಕಿ.ಮೀ. ಸುತ್ತಣ ಪ್ರದೇಶ ಕಾಣಿಸುತ್ತದೆ. ಈಗಲೂ ನದಿ ಪ್ರವಾಹ ನೋಡಲು ಜನರು ಅದನ್ನು ಹತ್ತಿ ವೀಕ್ಷಿಸುತ್ತಾರೆ. ಅರಮನೆ ಪಕ್ಕದಲ್ಲಿ ಶಸ್ತ್ರಾಗಾರ, ಮದ್ದುಗುಂಡು ಅರೆವ ಒರಳು, ಕಲ್ಲುಗಳುಳ್ಳ ದೊಡ್ಡದಾರ ಮನೆ, ಕಾಳು ಕಣಜಗಳು ಇವೆ ಆದರೆ ಸೈನಿಕ ವಸತಿಗಾಗಿ ನಿವೇಶನಗಳಿಲ್ಲ ನೀರಿಗಾಗಿ ಸೈನಿಕರಿಗೆ, ಆನೆ ಕುದುರೆಗಳಿಗೆ ನದಿ ತಟದಲ್ಲಿ ತಡೆಗೋಡೆ ಪಕ್ಕದಲ್ಲಿ ಒಂದು ಬಾಂಡ್ಲಿ ತರಹದ ಬಾವಿ ಇದ್ದು ಅಲ್ಲಿ ನೀರು ಕುಡಿದು ಬರಲು ಕೋಟೆಯಲ್ಲಿ ಪ್ರತ್ಯೇಕ ಬಾಗಿಲುಗಳಿವೆ. ಕಾವಲು ಸೈನಿಕರಿಗಾಗಿ ಬೇರೆ ಕಡೆಯಿಂದ ರಜಪೂತ ಆರೇರು (ಮರಾಠ) ಸೈನಿಕರನ್ನು ನೇಮಿಸಿದ್ದು, ಅವರಿಗೆ ಕೋಟೆ ಹೊರಗಡೆ ವಸತಿ ಕಲ್ಪಿಸಿದ್ದು, ಕೋಟೆ ಪಕ್ಕದಲ್ಲಿ ಹೊಸವೂರು (ಐರಣಿ) ಮತ್ತು ಅರೇಮಲ್ಲಾಪುರ ಗ್ರಾಮಗಳಾಗಿ ಪರಿವರ್ತಿತವಾಗಿವೆ.
ರಾಜಕೀಯ ಚರಿತ್ರೆ: ಕೋಟೆ ಕಟ್ಟುವವರೆಗೆ ಈ ಪ್ರದೇಶ ಅರಣ್ಯಮಯ ವಾಗಿದ್ದು ಗ್ರಾಮವಿರಲಿಲ್ಲ. ಕದಂಬರ ಬಂಧುಗಳು ಗುಪ್ತ ಸಾಮ್ರಾಟರ ವಂಶಜರು ಆದ ಗುತ್ತವೊಳಲಗುತ್ತರು ತಮ್ಮನ್ನು ಉಜ್ಜೈನಿ ಸಾಮ್ರಾಟ ಚಂದ್ರಗುಪ್ತನ ವಂಶಜರೆಂದು ಹೇಳಿಕೊಂಡಿದ್ದು ಬನವಾಸಿ 12000ದ ಉತ್ತರದಲ್ಲಿ ಹಾವೇರಿ ರಾಣೆಬೆನ್ನೂರು ತಾಲ್ಲೂಕುಗಳ ಕೆಲಭಾಗ ಸೇರಿಸಿ ತುಂಗಭದ್ರಾ ನದಿವರೆಗಿನ ಪ್ರದೇಶದಲ್ಲಿ ಪುಟ್ಟ ರಾಜ್ಯ ಕಟ್ಟಿಕೊಂಡು (ಕೆಲಕಾಲ ವ್ಯಾಪ್ತಿ ಮೀರಿ ಆಡಳಿತ ಮಾಡಿದ್ದಾರೆ) ಆಳಿದ್ದು ಅದಕ್ಕೆ ಗುತ್ತವೊಳಲು ರಾಜ್ಯವೆಂದು ಹೆಸರಿದ್ದು ಕ್ರಿ.ಶ.7ನೇ ಶತಮಾನದಿಂದ 13ನೇ ಶತಮಾನದವರೆಗೆ ರಾಜ್ಯವಾಳಿದ್ದಾರೆ. ಈ ಪರಿಸರದ ಐರಾವತ ಕ್ಷೇತ್ರ ಗುತ್ತಳ ರಾಜ್ಯ ಮತ್ತು ಬನವಾಸಿ 12000ರ ಗಡಿಯಾಗಿ ಅರಣ್ಯವಿದ್ದಿತು. ಈ ಅರಣ್ಯ ಗುತ್ತವೊಳಲ ರಾಜ್ಯದಲ್ಲಿಯ ಪ್ರದೇಶವಾಗಿತ್ತು ಎಂಬುದು ಈ ಪ್ರದೇಶ ವ್ಯಾಪ್ತಿಯ ಗ್ರಾಮ ರಾಣೆಬೆನ್ನೂರು ತಾಲ್ಲೂಕು, ಹಿರೇಬಿದರಿಯ 7ನೇ ಶತಮಾನದ ಬಾದಾಮಿ ಚಲುಕ್ಯರ ವಿನಯಾದಿತ್ಯ ಕಾಲದ ಶತಮಾನ, ರಾಷ್ಟ್ರಕೂಟ ಶುಂಭತುಂಗ (2ನೇ ಕೃಷ್ಣ ಕಾಲದ ಕ್ರಿ.ಶ.878-79 ಶಾಸನ ಮತ್ತು ಸೇವುಣ ರಾಮಚಂದ್ರನ ಕಾಲದ ಕ್ರಿ.ಶ.1283 ಶಾಸನದಿಂದ ಗುತ್ತರ ಆಳ್ವಿಕೆ ಬಗ್ಗೆ ತಿಳಿದುಬರುತ್ತದೆ. ಗುತ್ತರು ಅಧೀನರಾಜರಾಗಿ ಕೆಲಕಾಲ ಸ್ವತಂತ್ರವಾಗಿ ಅಧಿಕಾರ ನಡೆಸಿದ್ದು ಮುಂದೆ ಕ್ರಿ.ಶ. 1296ರ  ಅಲ್ಲಾವುದ್ದೀನ ಖಿಲ್ಜಿ ದಾಳಿಯಿಂದಾಗಿ ಆ ವಂಶದ ಆಳ್ವಿಕೆ ಕೊನೆಗೊಂಡು ಕುಮ್ಮಟದುರ್ಗದ ಸಿಂಗೇಯನಾಯಕನು ಆಳಿದ್ದು, ದೆಹಲಿ ಸುಲ್ತಾನರು ದಾಳಿಯಿಂದಾಗಿ ಆ ವಂಶ ನಾಶವಾಗಿ ಮುಂದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ ಬಂಕಾಪುರ ಉಪರಾಜಧಾನಿ ಅಧೀನದಲ್ಲಿ (ಹಾವನೂರು) ಭುಜಂಗನಗರ ಗುತ್ತಲ ನಾಡಿನಲ್ಲಿ ಗುತ್ತಳ ದೇಸಾಯಿ ಆಡಳಿತದಲ್ಲಿ ಮುಂದುವರೆದು ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ವಿಜಾಪುರ ಆದಿಲ್‍ಶಾಹಿ ವಂಶಜರ ಆಡಳಿತದಲ್ಲಿ ವಿಜಾಪುರ ಸುಲ್ತಾನರು ಅವರ ವಂಶಜನಾದ ಸಿಕಂದರ ಸುಲ್ತಾನ ಕಾಲಕ್ಕೆ ಕ್ರಿ.ಶ.1686ರಲ್ಲಿ ಔರಂಗಜೇಬ ವಿಜಾಪುರ ವಶಪಡಿಸಿಕೊಂಡು ಸುಲ್ತಾನರ ಸಮಸ್ತ ಅಧಿಕಾರವನ್ನು ವಿಜಾಪುರ ಸುಲ್ತಾನನ ಅಧಿಕಾರಿಯಾಗಿದ್ದ ಅಬ್ದುಲ್ ರವೂಪಾನನಿಗೆ ಕೊಟ್ಟು ಕರ್ನಾಟಕ ಸುಬಾ (ಪ್ರಾಂತ)ದ ಮುನಸುಬಾದರಿನನ್ನಾಗಿ ಮಾಡಿದೆ, ಕರ್ನಾಟಕ ಸುಭ (ಪ್ರಾಂತ) ಬಿಜಾಪುರ ಸುಲ್ತಾನ ಎರಡನೇ ಆದಿಲ್‍ಷಾನು ಆಡಳಿತ ಸುಧಾರಣೆಗಾಗಿ ಕರ್ನಾಟಕ ಸುಭಾ ಎಂದು ಮೂರು ಸರ್ಕಾರ ಹಾಗೂ 22 ಮಹಲು ಮಹಲುಗಳನ್ನೊಳಗೊಂಡ ಸುಭಾ ರಚಿಸಿದ್ದ ಅದಕ್ಕೆ ಬಂಕಾಪುರ ಆಡಳಿತ ಕೇಂದ್ರವಾಗಿದ್ದು ಆ 22 ಮಹಲುಗಳಲ್ಲಿ 1 ದುಮಾಳ + 17 ಗ್ರಾಮ ಒಟ್ಟು 18 ಗ್ರಾಮಗಳನ್ನೊಳಗೊಂಡ ಮಹಲು (ಚಿಕ್ಕ ಆಡಳಿತ ಕೇಂದ್ರ ದೇಹಾತ್ ಖಿಲಾ ಐರಣಿ ಒಂದಾಗಿತ್ತು. ಕ್ರಿ.ಶ.1707ರಲ್ಲಿ ಔರಂಗಜೇಬ ತೀರಿಕೊಂಡ ನಂತರ ಮೊಗಲ್ ಸಾಮ್ರಾಜ್ಯ ಪತನವಾಗಿ ರವೂಫಖಾನ ಸ್ವತಂತ್ರನಾಗಿ ಅಲ್ಲಿಂದ ಸವಣೂರ ನವಾಬರ ಅಧೀನದಲ್ಲಿ ಉಳಿದು ಮರಾಠ ಪೇಶ್ವೆ ನವಾಬರ ಸಹ ಆಡಳಿತ ಸುಮಾರು ಕ್ರಿ.ಶ.1800ರವರೆಗೆ ಮುಂದುವರೆಯಿತು. ದೋಂಡಿಯ ವಾಘನನ್ನು ಗಲ್ಲಿಗೇರಿಸಿದ ನಂತರ ಬ್ರಿಟಿಷರ ಆಡಳಿತ ಪ್ರಾರಂಭವಾಗಿ ಸ್ವಾತಂತ್ರದವರೆಗೆ ಬ್ರಿಟಿಷ್ ಮುಂಬೈ ಸರಕಾರದಲ್ಲಿ ಮುಂದುವರಿದು 1947ರಲ್ಲಿ ಸ್ವತಂತ್ರವಾದ ನಂತರ ಮುಂಬೈ ರಾಜ್ಯದಲ್ಲಿ ಸೇರ್ಪಡೆಯಾಗಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ಕ್ರಿ.ಶ.1956 ನವೆಂಬರ್ 2 ರಿಂದ ಮೈಸೂರು/ಕರ್ನಾಟಕ ರಾಜ್ಯದಲ್ಲಿ ಹಳೇ ಧಾರವಾಡ ಜಿಲ್ಲೆ ಪುನರಚನೆ ನಂತರ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯ್ತಿ ಕೇಂದ್ರವಾಗಿ ಮುಂದುವರೆದಿದೆ.

 ವಕೀಲರು, ದೇವರಾಜ ಅರಸ್ ಬಡಾವಣೆ, `ಬಿ’ ಬ್ಲಾಕ್, 10ನೇ ಕ್ರಾಸ್, ನಂ. 300, ದಾವಣಗೆರೆ-577006.

Thursday, July 17, 2014

ವೆಂಗಿಮಂಡಳ


`ವೆಂಗಿವಿಷಯ, ವೆಂಗಿಮಂಡಳ, ವೆಂಗಿಪಳು’ :
ಒಂದು ವಿಚಾರ
ಶಾಶ್ವತಸ್ವಾಮಿ ಮುಕ್ಕುಂದಿಮಠ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಗೂ ಕರ್ನಾಟಕ ಇತಿಹಾಸದಲ್ಲಿ `ವೆಂಗಿಲಮಂಡಲ’ದ ವಿಚಾರ ಹಲವಾರು ಬಾರಿ ಪ್ರಸ್ತಾಪವಾಗುತ್ತದೆ.1 ಹತ್ತನೆಯ ಶತಮಾನದ ಕೆಲವು ಕವಿಗಳ ಸ್ಥಳ ವೆಂಗಿಯಾಗಿತ್ತು. ಆದಿಕವಿ ಪಂಪ, ನಾಗವರ್ಮ, ದುರ್ಗಸಿಂಹ ಮೊದಲಾದ ಕವಿಗಳು ವೆಂಗಿಮಂಡಲದವರೆಂದು ಅದರ ಕಾವ್ಯದಿಂದ ತಿಳಿದುಬರುತ್ತದೆ. ಈ ವೆಂಗಿಮಂಡಳವು 7ನೆಯ ಶತಮಾನದಿಂದ 12ನೆಯ ಶತಮಾನದವರೆಗೆ ಆರು ಶತಮಾನಗಳ ಕಾಲ ಕನ್ನಡರಸರು ಆಳಿದ ಪ್ರದೇಶ. ಅಲ್ಲಿ ಕನ್ನಡ ರಾಜರು ನಿರಂತರವಾಗಿ ಸಾಮ್ರಾಜ್ಯವನ್ನು ಸ್ಥಾಪಿಸಿ, ಕನ್ನಡದ ಪ್ರಭುತ್ವವನ್ನು ಸಾಧಿಸಿದ್ದು ಇತಿಹಾಸದಿಂದ ಗೊತ್ತಾಗುತ್ತವೆ. ದಕ್ಷಿಣ ಭಾರತದ ಇತಿಹಾಸದಲ್ಲಿ ವೆಂಗಿಮಂಡಳ ಪ್ರಮುಖ ಆಡಳಿತ ಭಾಗವಾಗಿತ್ತು. ಇದರ ಮೇಲೆ ತಮ್ಮ ಸಾರ್ವಭೌಮತ್ವವನ್ನು ಸಾಧಿಸಲು ದಕ್ಷಿಣ ಭಾರತದಲ್ಲಿದ್ದ ಕಂಚಿಯ ಪಲ್ಲವರು ಮತ್ತು ತಂಜಾವೂರಿನ ಚೋಳರು ಚಾಳುಕ್ಯರ ಮೇಲೆ ಕೆಲವು ಸಲ ಯುದ್ಧ ಮಾಡಿದ ವಿಚಾರ ಇತಿಹಾಸದಲ್ಲಿ ಉಲ್ಲೇಖವಾಗಿದೆ.2 ಇಷ್ಟೊಂದು ಚಾರಿತ್ರ್ಯಿಕ ಮಹತ್ತ್ವ ಹೊಂದಿದ ವೆಂಗಿವಿಷಯ ಮಂಡಲವು ಇದ್ದ ಪ್ರದೇಶದ ಮೇರೆ, ವಿಸ್ತಾರ ಇತ್ಯಾದಿ ವಿಚಾರಗಳ ಬಗೆಗೆ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಇತಿಹಾಸ ಕಾರರಲ್ಲಿಯೂ ಒಮ್ಮತದ ಅಭಿಪ್ರಾಯ ಕಂಡುಬರುವುದಿಲ್ಲ. ಕನ್ನಡ ಕಾವ್ಯ, ಶಾಸನ ಹಾಗೂ ಇತಿಹಾಸಗಳು ನೀಡುವ ಆಧಾರದ ಮೇಲೆ ದಕ್ಷಿಣ ಭಾರತದಲ್ಲಿ ಕಳಿಂಗದಿಂದ ಪಶ್ಚಿಮಕ್ಕೆ ಮತ್ತು ಕನ್ನಡನಾಡಿನ ಪೂರ್ವಕ್ಕೆ ಹಬ್ಬಿಕೊಂಡ ವಿಶಾಲವಾದ ಪ್ರದೇಶ ವೆಂಗಿವಿಷಯವಾಗಿತ್ತು ಎಂದು ತಿಳಿದುಬರುತ್ತದೆ. ದಕ್ಷಿಣದ ಕೃಷ್ಣಾನದಿ ಉತ್ತರದ ಗೋದಾವರಿ ನದಿಗಳು ಇದರ ಪೂರ್ವೋತ್ತರ ಗಡಿಯಾಗಿದ್ದವು. ಆದರೆ ಈ ಸೀಮೆ ರಾಜಕೀಯ ಬದಲಾವಣೆಯೊಂದಿಗೆ ಬದಲಾಗುತ್ತ ಬಂದಿರುವುದು ತಿಳಿದುಬರುತ್ತದೆ.
ವೆಂಗಿ ಚರಿತ್ರೆ : ಶಾತವಾಹನರ (ಕ್ರಿ.ಶ.1-3 ಶತಮಾನ) ಆಳ್ವಿಕೆಯ ಕಾಲದಲ್ಲಿ ವೆಂಗಿ ಮತ್ತು ಕಳಿಂಗ ದೇಶಗಳು ಅವರ ಪ್ರಭುತ್ವಕ್ಕೆ ಒಳಪಟ್ಟಿದ್ದವು. ಆ ಕಾಲದಲ್ಲಿ ವೆಂಗಿ ಮತ್ತು ಕಳಿಂಗದ ಭಾಷೆ ತೆಲುಗು ಭಾಷೆಯಾಗಿತ್ತಲ್ಲದೆ ವೆಂಗಿಮಂಡಳ ಕಳಿಂಗ ದೇಶದಲ್ಲಿ ಅಂತರ್ಗವಾಗಿತ್ತೆಂದು ಇತಿಹಾಸ ಹೇಳುತ್ತವೆ.3 `ಆಂಧ್ರಭೃತ್ಯರು’ ಎಂದು ಕರೆದುಕೊಂಡ ಚಟುಕಲಾನಾಂದ ಹೆಸರಿನ ಒಂದು ವಂಶ ಶಾತವಾಹನರ ಕೈಕೆಳಗಿನ ಪಂಗಡವರು ಆಂಧ್ರಭಾಷೆಯ ಮೂಲಪುರುಷರೆಂದು ಡಿ.ವಿ. ಕೃಷ್ಣರಾವ್ ಅಭಿಪ್ರಾಯಪಡುತ್ತಾರೆ.4 ನಂತರ ಮಧುರೆಯ ಪಾಂಡ್ಯರು (ಕ್ರಿ.ಶ.5-6ನೆಯ ಶತಮಾನ) ದಕ್ಷಿಣಭಾರತದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸಿ, ಬಲಾಢ್ಯ ರಾಜ್ಯವಾಗಿ ಆಳುತ್ತಿರುವ ಕಾಲದಲ್ಲಿ ವೆಂಗಿ ಪಲ್ಲವ ರಾಜ್ಯದ ಒಂದು ಮಂಡಲವಾಗಿತ್ತು. ತರುವಾಯ ಬಾದಾಮಿಯ ಚಾಳುಕ್ಯರು (ಕ್ರಿ.ಶ.450-735) ಪಲ್ಲವರನ್ನು ಯುದ್ಧಲ್ಲಿ ಸೋಲಿಸಿ ದಕ್ಷಿಣ ಭಾರತದಲ್ಲಿ ರಾಜ್ಯ ಪ್ರಭುತ್ವವನ್ನು ಸ್ಥಾಪಿಸಿದರು. ಆಗ ವೆಂಗಿ ಬಾದಾಮಿ ಚಾಳುಕ್ಯರ ವಶವಾಯಿತು. ಅಂದಿನಿಂದ ಆರು ಶತಮಾನಗಳ ದೀರ್ಘಕಾಲ (ಕ್ರಿ.ಶ.630-1140) ವೆಂಗಿ ಕನ್ನಡ ಅರಸು ಮನೆತನಗಳ ನಿರಂತರ ಆಡಳಿತಕ್ಕೆ ಒಳಪಟ್ಟಿತ್ತು. ಬಾದಾಮಿ ಚಾಳುಕ್ಯರು, ಮಳಖೇಡದ ರಾಷ್ಟ್ರಕೂಟರು ಹಾಗೂ ಕಲ್ಯಾಣದ ಚಾಳುಕ್ಯ ಮನೆತನಗಳು ನಿರಂತರವಾಗಿ ವೆಂಗಿಯ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದವು. ಅಷ್ಟು ಸುದೀರ್ಘ ಕಾಲಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಆಳಿದ ಮತ್ತಾವ ರಾಜಮನೆತನಗಳು ಕನ್ನಡ ಅರಸುಮನೆತನಗಳ ವಶದಲ್ಲಿದ್ದ ವೆಂಗಿಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂಬುದು ಮಹತ್ತ್ವದ ಸಂಗತಿ. 10ನೆಯ ಶತಮಾನದ ಪ್ರಾರಂಭದಲ್ಲಿ ತಂಜಾವೂರಿನ ಚೋಳರು ವೆಂಗಿಯ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಒಂದೆರಡು ಸಲ ಪ್ರಯತ್ನಪಟ್ಟದ್ದು ಗೊತ್ತಾಗುತ್ತದೆ.
ಒಂದನೆಯ ಪರಾಂತಕ ಚೋಳ (ಕ್ರಿ.ಶ.907-953) ರಾಷ್ಟ್ರಕೂಟ ಮೂರನೆಯ ಕೃಷ್ಣ (ಕ್ರಿ.ಶ.939-967)ನೊಂದಿಗೆ ಮಾಡಿದ `ತಕ್ಕೊಲಂ’ ಕಾಳಗದಲ್ಲಿ ಚೋಳಪರಾಂತಕನು ಸಂಪೂರ್ಣ ಸೋತುಹೋದನು. ಕೃಷ್ಣನ ಸಹೋದರಿಯ ಗಂಡನಾದ ಗಂಗರ ಬೂತುಗನು ಈ ಯುದ್ಧದಲ್ಲಿ ಪರಾಕ್ರಮವನ್ನು ಮೆರೆದು ರಾಷ್ಟ್ರಕೂಟರಿಗೆ ವಿಜಯವನ್ನು ಸಂಪಾದಿಸಿಕೊಟ್ಟನು. ಕನ್ನಡ ಅರಸರು ಚೋಳರನ್ನು ಸೋಲಿಸಿ ಹಿಮ್ಮೆಟ್ಟಿಸಿದ `ತಕ್ಕೊಲಂ’ ಕಾಳಗ ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಸಿದ್ಧಿ ಪಡೆಯಿತು. ಕ್ರಿ.ಶ.1118ರಲ್ಲಿ ಒಮ್ಮೆ ವೆಂಗಿ ಚೋಳರ ವಶವಾಗುತ್ತದೆ. ಕ್ರಿ.ಶ.1126ರಲ್ಲಿ ವೆಂಗಿಯನ್ನು ಚೋಳರಿಂದ ಕಲ್ಯಾಣ ಚಾಳುಕ್ಯರು ತಮ್ಮ ಅಧೀನಕ್ಕೆ ತೆಗೆದುಕೊಂಡರು.5 ಅಲ್ಲಿಗೆ ವೆಂಗಿಯ ರೋಚಕ ಇತಿಹಾಸ ಮುಕ್ತಾಯವಾಗುತ್ತದೆ.
ವೆಂಗಿಯ ಪೂರ್ವ ಚಾಳುಕ್ಯ ಮನೆತನ: ವೆಂಗಿಯನ್ನು ವಿಷಯ ಮಂಡಲವೆಂದು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲು ಗುರುತಿಸಿ ಕಾಣಿಸಿ ಅದಕ್ಕೆ ಸ್ಥಾನ-ಮಾನವನ್ನು ಗಳಿಸಿಕೊಟ್ಟವರು ಬಾದಾಮಿ ಚಾಲುಕ್ಯರು. ಬಾದಾಮಿ ಚಾಲುಕ್ಯರ ಮನೆತನವೊಂದು ವೆಂಗಿಮಂಡಲದಲ್ಲಿ `ಪೂರ್ವ ಚಾಳುಕ್ಯ’ ಹೆಸರಿನಿಂದ ರಾಜ್ಯಭಾರ ಮಾಡಿತು. ಇದೇ ಹೆಸರಿನ ಮನೆತನ ಆರು ಶತಮಾನಗಳ ಕಾಲ ವೆಂಗಿಯಲ್ಲಿ ನಿರಂತರ ಆಳ್ವಿಕೆ ಮಾಡಿ ಪ್ರಸಿದ್ಧವಾಯಿತು.6
ಬಾದಾಮಿ ಚಾಲುಕ್ಯರ ಪ್ರಸಿದ್ಧ ಅರಸು ದಕ್ಷಿಣಪಥ್ಯೇಶ್ವರ, ಪರಮೇಶ್ವರ ಮುಂತಾದ ಬಿರುದುಗಳನ್ನು ಪಡೆದ ಪ್ರಸಿದ್ಧ ಇಮ್ಮಡಿ ಪುಲಕೇಶಿಯು (ಕ್ರಿ.ಶ.6002-642) ದಕ್ಷಿಣ ಭಾರತವನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ವೆಂಗಿ ಆತನ ಸ್ವಾಧೀನವಾಯಿತು. ದಕ್ಷಿಣ ಭಾರತದ ಮೇಲೆ ತನ್ನ ರಾಜ್ಯಪ್ರಭುತ್ವವನ್ನು ನಿಯಂತ್ರಿಸಲು ಪುಲಿಕೇಶಿಯು ಆಯಕಟ್ಟಿನ ಸ್ಥಳವಾದ ವೆಂಗಿಯನ್ನು ತನ್ನ ಸಾಮ್ರಾಜ್ಯದ ಉಪ ಆಡಳಿತ ವಿಭಾಗವಾಗಿ ಮಾಡಿ, ಅಲ್ಲಿ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಉತ್ತಮ ಆಡಳಿತಗಾರನಾಗಿದ್ದ ಆತನು ವೆಂಗಿಯಲ್ಲಿ `ಪೂರ್ವಚಾಳುಕ್ಯ’ ಮನೆತನಕ್ಕೆ ಆಸ್ತಿಭಾರ ಹಾಕಿದನು.7 ವೆಂಗಿ ಪೂರ್ವ ಚಾಳುಕ್ಯ ಮನೆತನವು 12ನೆಯ ಶತಮಾನದವರೆಗೆ ನಿರಂತರ ರಾಜ್ಯಭಾರ ಮಾಡಿತು. ರಾಜಕೀಯ ಸ್ಥಿತ್ಯಂತರಗಳಿಂದ ರಾಜಮನೆತನಗಳ ಆಡಳಿತದ ಹಸ್ತಾಂತರವಾದರೂ ವೆಂಗಿಯಲ್ಲಿ ಚಾಳುಕ್ಯರ ಅಧಿಕಾರಕ್ಕೆ ಯಾವ ಬಾಧಕವಾಗಲಿಲ್ಲ. ಬಾದಾಮಿಯ ಚಾಲುಕ್ಯರ ನಂತರ ಆಳಿದ ಮಳೇಖೇಡದ ರಾಷ್ಟ್ರಕೂಟ ಮನೆತನದ ಅಧಿಕಾರದಲ್ಲಿ (ಕ್ರಿ.ಶ.735-933) ವೆಂಗಿಯ ಚಾಳುಕ್ಯರು ರಾಷ್ಟ್ರಕೂಟರ ಸಾಮಂತರಾಗಿ ರಾಜ್ಯಭಾರ ಮಾಡುತ್ತಿದ್ದರು.
ಇದೇ ಕಾಲಾವಧಿಯಲ್ಲಿ ಪಂಪಕವಿಯ ಆಶ್ರಯ ದೊರೆ ಎರಡನೆಯ ಅರಿಕೇಸರಿ (ಕ್ರಿ.ಶ.927-962) ರಾಷ್ಟ್ರಕೂಟರ ಸಾಮಂತ ಅರಸನಾಗಿದ್ದ. ಈತ ವೇಮುಲವಾಡ ಶಾಸನವನ್ನು (ಕ್ರಿ.ಶ.927) ಸಂಸ್ಕøತದಲ್ಲಿ ಬರೆಯಿಸಿದನು. ಈತನ ಕಾಲದಲ್ಲಿ ಪಂಪಕವಿಯ ತಮ್ಮ ಜಿನವಲ್ಲಭನು ಬೊಮ್ಮಲಮ್ಮನಗುಡ್ಡದಲ್ಲಿ ಪಂಪನ ಹೆಸರಿನ ಕನ್ನಡ ಶಿಲಾಶಾಸನವೊಂದನ್ನು (ಕ್ರಿ.ಶ.945) ಬರೆಯಿಸಿದನು. ಅದು ಗಂಗಾಧರಂ ಶಾಸನವೆಂದು ಹೆಸರು ಪಡೆಯಿತು. ಈತನ ನಂತರ ಮೂರನೆಯ ಅರಿಕೇಸರಿ (ಕ್ರಿ.ಶ.963-976) ರಾಷ್ಟ್ರಕೂಟರ ಸಾಮಂತನಾಗಿ ಆಡಳಿತ ಮಾಡಿದನು. ಈತನನ್ನು ಕುರಿತ ಪರಭಣಿ ಸಂಸ್ಕøತ ಶಾಸನ (ಕ್ರಿ.ಶ.966) ಉತ್ತೀರ್ಣಗೊಂಡಿತು. ಆಗಲೇ ಒಂದನೆಯ ಅರಿಕೇಸರಿಯು ಕೋಲಪಾಕ (ಕ್ರಿ.ಶ.790)ರಲ್ಲಿ ಸಂಸ್ಕøತ ಶಾಸನವನ್ನು ಬರೆಯಿಸಿದನು. ರಾಷ್ಟ್ರಕೂಟರ ನಂತರ ಕಲ್ಯಾಣ ಚಾಳುಕ್ಯರು (ಕ್ರಿ.ಶ.933-1140) ನಾಡಿನ ರಾಜ್ಯಸೂತ್ರವನ್ನು ಹಿಡಿದರು. ಇವರ ಕಾಲದಲ್ಲಿ ವೆಂಗಿಯಲ್ಲಿ ಆಳುತ್ತಿದ್ದ ರಾಜಮನೆತನ ಸಾಮಂತ ಅರಸೊತ್ತಗಿಯನ್ನು ಕಿತ್ತೊಗೆದು ಸ್ವತಂತ್ರವಾಗಿ ಕಲ್ಯಾಣ ಚಾಳುಕ್ಯರ ರಾಜಪ್ರತಿನಿಧಿಗಳಾಗಿ ರಾಜ್ಯಭಾರ ಮಾಡಿದರು. ಕಲ್ಯಾಣದಲ್ಲಿ ತ್ರಿಭುವನಮಲ್ಲ ಜಯಸಿಂಹನು (ಕ್ರಿ.ಶ.1004-1016) ಆಳುತ್ತಿದ್ದಾಗ ವೆಂಗಿಯಲ್ಲಿ ವಿನಯಾದಿತ್ಯ ಚಾಳುಕ್ಯನು ಚಾಳುಕ್ಯರ ರಾಜಪ್ರತಿನಿಧಿಯಾಗಿದ್ದನು. ಇದೇ ಸಮಯದಲ್ಲಿ ರಾಜರಾಜ ಚೋಳನು (ಕ್ರಿ.ಶ.925-1014) ಚಾಳುಕ್ಯರ ಮೇಲೆ ಯುದ್ಧ ಸಾರಿದನು. ಈ ಯುದ್ಧದಲ್ಲಿ ಜಯಸಿಂಹನಿಗೆ ಸೋಲಾಯಿತು. ಉಭಯರಲ್ಲಿ ಒಪ್ಪಂದ ಏರ್ಪಟ್ಟು ಎರಡು ರಾಜ್ಯಗಳ ಗಡಿ ತುಂಗಭದ್ರಾ ನದಿಯೆಂದು ನಿರ್ಣಯ ವಾಯಿತು.8 ರಾಜರಾಜ ಚೋಳನು ವೆಂಗಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವ ಸಂಬಂಧವಾಗಿ ಕಲ್ಯಾಣ ಚಾಳುಕ್ಯ ಜಯಸಿಂಹನಿಗೂ ಮತ್ತು ವೆಂಗಿಯ ವಿನಯಾದಿತ್ಯನಿಗೂ ನಡುವೆ ವೈಮನಸ್ಸು ಹುಟ್ಟಿಸಲು ರಾಜರಾಜ ಚೋಳನು ವೆಂಗಿಯ ವಿಜಯಾದಿತ್ಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು. ಇದರಿಂದ ವಿನಯಾದಿತ್ಯನು ಚೋಳರಿಗೆ ನಿಷ್ಠನಾಗಿ ನಡೆದುಕೊಂಡನು.9
ರಾಜೇಂದ್ರಚೋಳನ ಮಗ ರಾಜರಾಜಚೋಳನಿಗೂ ಮತ್ತು ಚಾಳುಕ್ಯರ ಒಂದನೆಯ ಸೋಮೇಶ್ವರನಿಗೂ (ಕ್ರಿ.ಶ.1040-1060) ನಡೆದ `ಕುಪ್ಪಂ’ ಯುದ್ಧದಲ್ಲಿ ರಾಜರಾಜ ಚೋಳನು ಸೋತು ಮರಣ ಹೊಂದಿದನು. ಕಲ್ಯಾಣ ಚಾಳುಕ್ಯರ ಬಗೆಗೆ ವೆಂಗಿ ಚಾಳುಕ್ಯರಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ನಿವಾರಿಸಲು ಸೋಮೇಶ್ವರನು ವಿಜಯಾದಿತ್ಯನ ಮಗ ಶಕ್ತಿವರ್ಮನಿಗೆ ವೆಂಗಿಯ ಪಟ್ಟ ಕಟ್ಟಿದನು.10 ಆದರೆ ಈ ಸಮಾಧಾನ ತಾತ್ಕಾಲಿಕವಾಗಿತ್ತು. ಶಕ್ತಿವರ್ಮನ ನಿಷ್ಠೆ ಚೋಳರ ಪರವಾಗಿದ್ದುದರಿಂದ ವೆಂಗಿ ಮತ್ತು ಕಲ್ಯಾಣ ಚಾಳುಕ್ಯ ನಡುವಿನ ಬಾಂಧವ್ಯ ಹಳಸಿ ಮುರಿದು ಬಿದ್ದಿತು. ಸ್ವಲ್ಪ ಕಾಲದಲ್ಲಿ ವೆಂಗಿ ಚೋಳರ ವಶವಾಗಿತ್ತು. ಕಲ್ಯಾಣ ಚಾಳುಕ್ಯರ 6ನೆಯ ವಿಕ್ರಮಾದಿತ್ಯನು (ಕ್ರಿ.ಶ.1070-1126) ಚೋಳರ ಒಂದನೆಯ ಕುಲತ್ತುಂಗನೊಂದಿಗೆ ಯುದ್ಧ ಮಾಡಿದ. ಆ ಯುದ್ಧದಲ್ಲಿ ಕುಲತ್ತುಂಗ ಚೋಳನು ಸಂಪೂರ್ಣವಾಗಿ ಸೋತನು. ವಿಕ್ರಮಾದಿತ್ಯನು ವೆಂಗಿಮಂಡಲವನ್ನು ಮತ್ತೆ ಚೋಳರಿಂದ ಕಸಿದುಕೊಂಡು ಚಾಳುಕ್ಯರಾಜ್ಯಕ್ಕೆ ಸೇರಿಸಿದನು.11
ಕ್ರಿ.ಶ.1183ರಲ್ಲಿ ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಪತನವಾಗುತ್ತಿದ್ದಂತೆ ವೆಂಗಿಮಂಡಲದಲ್ಲಿ ಕನ್ನಡ ಅರಸರ ಅಧಿಪತ್ಯ ಮುಕ್ತಾಯವಾಯಿತು. ಕನ್ನಡ ಭಾಷೆಯ ಪ್ರಭಾವ ಕಡಿಮೆಯಾಗುತ್ತಾ ನಡೆಯಿತು. ಮುಂದೆ ವಾರಂಗಲ್ಲಿನ ಕಾಕತೀಯರಿಂದಾಗಿ ವೆಂಗಿಯಲ್ಲಿ ತೆಲುಗು ಭಾಷೆಯ ಪ್ರಭಾವ ಸಹಜವಾಗಿಯೇ ಹೆಚ್ಚಿತು. ಅದೇ ಕಾಲದಲ್ಲಿ ದಕ್ಷಿಣ ಭಾರತದ ಮೇಲೆ ಮುಸ್ಲಿಂರ ದಾಳಿಯ (ಕ್ರಿ.ಶ.1310) ಪರಿಣಾಮ ವೆಂಗಿಯ ಸ್ವರೂಪ ಮತ್ತು ಅದರ ಗಡಿಗಳಲ್ಲಿ ಬದಲಾವಣೆಗಳಾದವು. ಕಾಲಕ್ರಮೇಣ ತೆಲುಗು ಭಾಷೆ ಅಲ್ಲಿ ತನ್ನ ಪ್ರಭಾವ ಬೀರಿತು. ವಿಜಯನಗರ ಸಾಮ್ರಾಜ್ಯ (ಕ್ರಿ.ಶ.1336-1565) ದಕ್ಷಿಣ ಭಾರತದಲ್ಲಿ ವ್ಯಾಪಿಸಿಕೊಂಡಾಗ ವೆಂಗಿ ಮಂಡಳ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅದೃಶ್ಯವಾಯಿತು. ಇಲ್ಲಿಗೆ ಅದರ ಇತಿಹಾಸವೂ ಮುಗಿದಂತಾಯಿತು.
ವೆಂಗಿಮಂಡಳದ ಗಡಿಸೀಮೆ-ಪರಿಕಲ್ಪನೆ: ಅಂದಿನ ವೆಂಗಿಮಂಡಳದ ಗಡಿಸೀಮೆಯನ್ನು ಗುರುತಿಸುವುದು ಈಗ ಕಷ್ಟದ ಕೆಲಸ. ಅದರ ವಿಸ್ತಾರ, ವ್ಯಾಪ್ತಿ ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತಿರುದ್ದುದು ಇದಕ್ಕೆ ಕಾರಣ. ಈ ಹಿಂದೆ ವಿವರಿಸಿದ ಇತಿಹಾಸ ಹಾಗೂ ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿರುವ ವಿವರಗಳು ಹಾಗೂ ಶಾಸನಗಳ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡ ಅರಸರು ಆಳಿದ ವೆಂಗಿಯ ಗಡಿ ಸೀಮೆಯನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಆದಿಕವಿ ಪಂಪ ವಿಕ್ರಮಾರ್ಜುನ ವಿಜಯಕಾವ್ಯದಲ್ಲಿ ವೆಂಗಿಯನ್ನು ವರ್ಣಿಸಿದ ಪದ್ಯ ಹೀಗಿದೆ :
ಆಮಲಯಾಚಲ ಹಿಮಗಿರಿ
ಸೀಮಾವನಿತಳ (ಕೆ) ವೆಂಗಿಮಂಡಳದೊಳ್ ಚೆ |
ಲ್ವಮಾಗೆಯೆ ತನಗೊಂದೂರು
ನಾಮದೊಳಂ ವೆಂಗಿಪಳು ಕರಂ ಸೊಗಯಿಸುಗಂ ||12
``ಮಲಯಾಚಲ ಮೊದಲುಗೊಂಡು ಹಿಮಗಿರಿ ಸೀಮೆಯ ಭೂಭಾಗದವರೆಗಿನ ವೆಂಗಿಮಂಡಳದೊಳಗೆ ತನಗೆ ಯಾವ ಪ್ರಾಂತದಲ್ಲಿಯೂ `ಚಲ್ವು’ ಪಸರಿಸುತ್ತಿರುವ ವೆಂಗಿಪಳು ಶೋಭಿಸುತ್ತದೆ’ ಎಂಬುದು ಈ ಕಂದಪದ್ಯದ ಭಾವಾರ್ಥ. ದಕ್ಷಿಣದ ಮಲಯಪರ್ವತ ಮತ್ತು ಉತ್ತರದ ಹಿಮಾಲಯ ಪರ್ವತಗಳು ವೆಂಗಿಮಂಡಲದ ಗಡಿಗಳೆಂದೂ ಅದು ಅಲ್ಲಿಯವರೆಗೆ ವಿಸ್ತಾರವಾಗಿ ಹಬ್ಬಿದ ವಿಶಾಲವಾದ ಪ್ರದೇಶವಾಗಿತ್ತೆಂದೂ ಭಾವಿಸಬೇಕಾಗುತ್ತದೆ. ಕೇರಳದ ಕರಾವಳಿಯಿಂದ ಉತ್ತರದ ಹಿಮಾಲಯದವರೆಗೆ ವ್ಯಾಪಿಸಿದ ಈ ಪ್ರದೇಶ ಭರತಖಂಡದಲ್ಲಿ ಬಹುವಿಸ್ತಾರ ಪ್ರದೇಶವೆಂದೆನಿಸುತ್ತದೆ. ಆದರೆ ಇದು ಇತಿಹಾಸಕಾರರಿಗೆ, ವಿದ್ವಾಂಸರಿಗೆ ನಂಬಿಕೆಯುಂಟಾಗುವುದು ಕಷ್ಟವೆಂದು ಮುಳಿಯ ತಿಮ್ಮಪ್ಪಯನವರು ಪಡುವ  ಸಂದೇಹ ಒಪ್ಪುವಂತಹದ್ದು.13
ಪಂಪಕವಿಯು ವರ್ಣಿಸಿದ ಪದ್ಯದ ಅರ್ಥವನ್ನು ಕೊಡುವ ಅದೇ ಕಾಲದಲ್ಲಿ ಬರೆಯಿಸಿದ ಎರಡನೆಯ ಅರಿಕೇಸರಿಯ ವೇಮುಲವಾಡ ಶಾಸನ (ಕ್ರಿ.ಶ.927) ನಮ್ಮ ಗಮನ ಸೆಳೆಯುತ್ತದೆ.
ತಸ್ಯಾತ್ಮಜೋ ದಕ್ಷಿಣ ಬಾಹುದಂಡ
ಚಂಡಸಿಧಾರಹತ ವೈರಿಷಂಡಃ |
ಒಳದೃಹಿತಾಖಿಳ ವೆಂಗಿದೇಶಃ
ಪಾತಿ ಸ್ಮಪೃಥ್ವೀಮರಿಕೇಸರೀಶಃ ||14
‘ಒಳದ್ಗ್ಯಹಿತಾಖಿಳ ವೆಂಗಿದೇಶಃ’ ಎಂಬ ವಾಕ್ಯವು ಪಂಪಕವಿಯ ‘ಅವನೀತಳಕೆ ವೆಂಗಿಮಂಡಳದೊಳ್ ಚೆಲ್ವುಮಾಗೆ’ ಎಂಬ ಪದ್ಯವಾಕ್ಯಕ್ಕೆ ಸಮನಾಂತರ ಅರ್ಥ ಸ್ಪುರಿಸುತ್ತದೆ. ಪಂಪಕವಿಯ ಆಶ್ರಯ ದೊರೆ ಅರಿಕೇಸರಿ ಬರೆಯಿಸಿದ ಈ ಸಂಸ್ಕøತ ಶಾಸನ ಹಾಗೂ ಪಂಪಕವಿಯ ಮೇಲಿನ ಪದ್ಯಗಳಿಂದ ವೆಂಗಿಮಂಡಲದ ಸ್ಥಾನ ಹಾಗೂ ಅದರ ಮೇರೆಯ ಗುರುತನ್ನು ಅರಿಯಲು ಪ್ರಮುಖ ಸಾಧನವಾಗಿದೆ. ಅಂತಹದ್ದೇ ಮತ್ತೊಂದು ಅತಿ ಪ್ರಮುಖ ಶಾಸನ ಪಂಪನ ತಮ್ಮ ಜಿನವಲ್ಲಭನು ಕ್ರಿ.ಶ.945 ಬರೆಯಿಸಿದ ಶಾಸನ15. ಪಂಪಕವಿಯ ಪ್ರಶಸ್ತಿಗಾಗಿ ಬರೆಯಿಸಿದ್ದು. ಪಂಪಕವಿ ನಿಧನನಾದ ಕೆಲವು ದಿನಗಳಲ್ಲಿ ಈ ಶಾಸನ ಬರೆಯಿಸಿದಂತೆ ಕಾಣುತ್ತದೆ. ಕವಿಯ ತಾಯಿ ಅಪ್ಪಣ್ಣಬ್ಬೆ, ಆಕೆಯ ತಂದೆ ಜೋಯಿಸರ ಸಿಂಗ, ಊರು ಅಣ್ಣಿಗೆರೆ, ಕಮ್ಮೆಬ್ರಾಹ್ಮಣ, ವತ್ಸಗೋತ್ರ ಇತ್ಯಾದಿ ಪಂಪನ ವಿಚಾರಗಳು ಇಲ್ಲಿ ತಿಳಿಯುತ್ತದೆ. ``ಸ್ವಸ್ತಿ ಸಕಳಕಳಾಪ ಪ್ರವೀಣಂ ಭವ್ಯರತ್ನಾಕರಂ ಗುಣಪಕ್ಷ ಪಾತಿ ವೆಂಗಿನಾಡ ಸಪ್ತಗ್ರಾಮಗಳೊಳಗಣ ವೆಂಗಿಪಳು ಕಮ್ಮೆ ಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀಮದ್ವತ್ಸಗೋತ್ರ’’ ಎಂದು ಶಾಸನ ಉಲ್ಲೇಖಿಸುತ್ತದೆ.16 `ಗಂಗಾಧಂ’ ಶಾಸನವು ವೇಮುಲವಾಡು ವೆಂಬುಳಪಾಟ ಸಮೀಪದಲ್ಲಿಯ ಬೊಮ್ಮಲಮ್ಮನ ಗುಡ್ಡದ ಮೇಲಿದೆ. ಈ ವೇಮುಲವಾಡು ಮತ್ತು ಬೊಮ್ಮಲಮ್ಮನ ಗುಡ್ಡಗಳು ಈಗ ಆಂಧ್ರಪ್ರದೇಶದ ಕರಿಂನಗರ ಜಿಲ್ಲೆಯ ಬೋಧನಸ್ಥಳದಲ್ಲಿವೆ. ಅಂದು ಇವು ವೆಂಗಿಮಂಡಲದಲ್ಲಿದ್ದವು.
`ವೆಂಗಿ’ನಾಡ ಸಪ್ತಗ್ರಾಮಗಳೊಳಗಣ ವೆಂಗಿಪಳು ಎಂಬ ಶಾಸನೋಕ್ತ ಸಪ್ರಗ್ರಾಮಗಳಲ್ಲಿ ವೆಂಗಿಪಳು ಎಂಬುದು ಒಂದು ಸ್ಥಳವಾಗಿತ್ತು. ಬಹುಶಃ ಇದು ವೆಂಗಿನಾಡಿನ ರಾಜಧಾನಿಯಾಗಿತ್ತೆಂದು ಕಾಣುತ್ತದೆ. ಈ ವೆಂಗಿಪಳು ಈಗ ಎಲ್ಲಿದೆ ಯೆಂದು ತಿಳಿಯುವುದು ಕಷ್ಟ. ಈಗಿನ ವಿಜಯವಾಡ ಕೃಷ್ಣಾ ಜಿಲ್ಲೆಯಲ್ಲಿ ಪರ್ರ’ ಹೆಸರಿನ ಗ್ರಾಮವಿದೆ. ಇದೇ `ವೆಂಗಿಪಳು’ ಆಗಿತ್ತು ಎಂದು ಖ್ಯಾತ ಶಾಸನ ವಿಶಾರದ ಶ್ರೀ ಸೀತಾರಾಮ ಜಾಗೀರದಾರ್ ಅವರು ಅಭಿಪ್ರಾಯಪಡುತ್ತಾರೆ17. ಕ್ರಿ.ಶ.950ರಲ್ಲಿ ಮೂರನೆಯ ಅರಿಕೇಸರಿ ಬರೆಯಿಸಿದ ಪರಭಣಿ ಶಾಸನವು18 ವೆಂಗಿಯ ಸ್ಥಳ ನಿರ್ದೇಶನ ಮಾಡುವ ಅತಿ ಮಹತ್ತ್ವದ ಶಾಸನವಾಗಿದೆ.
ಸ ಕಲಿಂಗತ್ರಯಾಂ ವೆಂಗಿಂ ಯೋಶವತಿ ಸ್ಮ ಪರಾಕ್ರಮಾತ್
ಪುತ್ರೋಜಯಶ್ರಿಯಃ ಪಾತ್ರಂ ತಸ್ಕಾಸೀದರಿಕೇಸರೀ
ಎಂಬ ಶಾಸನೋಕ್ತ `ಸಕಲಿಂಗತ್ರಯ’ ಪದ ಕಳಿಂಗದೇಶವನ್ನು ಸೂಚಿಸುತ್ತದೆ. ಈಗಾಗಲೇ ಕಳಿಂಗ ಮತ್ತು ವೆಂಗಿಗಳು ಪ್ರತ್ಯೇಕ ವಾಗಿ ವೆಂಗಿ ಸ್ವತಂತ್ರ ಆಡಳಿತಭಾಗವಾದುದು ವೇದ್ಯವಾಗಿದೆ. ಶಾತವಾಹನರ ಕಾಲದಲ್ಲಿ ವೆಂಗಿ ಮಂಡಳ ಕಳಿಂಗನಾಡಿನಲ್ಲಿ ವಿಲೀನವಾಗಿತ್ತು. ಅದು 7ನೆಯ ಶತಮಾನದಲ್ಲಿ ಕಳಿಂಗದಿಂದ ಬೇರ್ಪಟ್ಟಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಬಾದಾಮಿಯ ಚಾಲುಕ್ಯರು ವೆಂಗಿಮಂಡಲವನ್ನು ಸ್ವಾಧೀನಪಡಿಸಿಕೊಂಡು ಅದನ್ನು ತಮ್ಮ ಆಡಳಿತದ ಒಂದು ಭಾಗವಾಗಿ ಮಾರ್ಪಡಿಸಿದ್ದರೆಂದು ಇತಿಹಾಸದಿಂದ ತಿಳಿಯುತ್ತದೆ. ಇದರಿಂದ ವೆಂಗಿಮಂಡಲವು ಕಳಿಂಗದೇಶದ ಗಡಿಗೆ ಹೊಂದಿಕೊಂಡಿದ್ದುದು ಗೊತ್ತಾಗುತ್ತದೆ. ಕಳಿಂಗವು ದಕ್ಷಿಣಭಾರತದ ಪೂರ್ವ-ಉತ್ತರದಿಕ್ಕಿಗೆ ಹಬ್ಬಿಕೊಂಡ ದೇಶ. ಈಗಿನ ಓಡಿಸಾ (ಓಢ್ರಾದೇಶ) ಅಂದಿನ ಕಲಿಂಗದೇಶವೆಂದು ಭಾವಿಸಲಾಗುತ್ತದೆ. ಓಡಿಸಾ ರಾಜ್ಯದ ಪಶ್ಚಿಮದಿಕ್ಕಿನ ಗಡಿಗೆ ಹೊಂದಿಕೊಂಡು ವೆಂಗಿಮಂಡಲ ವಿಶಾಲವಾಗಿ ಹಬ್ಬಿತು. ಅದು ಇಂದಿನ ಆಂಧ್ರಪ್ರದೇಶವಾಗಿತ್ತೆಂದು ಗುರುತಿಸಲು ಸಾಧ್ಯತೆಗಳಿವೆ.
ವೆಂಗಿಮಂಡಳ ಮತ್ತು ಕನ್ನಡನಾಡು : ವೆಂಗಿಮಂಡಳ ಎಂದೂ ಕನ್ನಡನಾಡಿನ ಭಾಗವಾಗಿರಲಿಲ್ಲವೆಂಬುದು ಸ್ಪಷ್ಟ. ಕ್ರಿ.ಶ.9ನೆಯ ಶತಮಾನದ ಕವಿರಾಜಮಾರ್ಗಕಾರ ಹೇಳುವ
ಕಾವೇರಿಯಿಂದ ಮಾ ಹೋ |
ದಾವರಿ ವರಟುರ್ದ ನಾಡದಾ ಕನ್ನಡದೊಳ್ ||
ಭಾವಿಸಿದ ಜನಪದಂ ವಸು |
ಧಾವಲತು ವಿಲೀನ ವಿಶದ ವಿಷಯ ವಿಶೇಷಂ ||19
ಕನ್ನಡನಾಡಿನ ವಿಸ್ತಾರ ಸೀಮೆಯ ವಿಷಯಗಳಲ್ಲಿ ವೆಂಗಿ ವಿಷಯವನ್ನು ಪ್ರಸ್ತಾಪಿಸದೆ ಇರುವುದರಿಂದ ವೆಂಗಿ ಕನ್ನಡ ನಾಡಿನ ವಿಲೀನ ಪ್ರದೇಶವಾಗಿರಲಿಲ್ಲವೆಂದು ಗೊತ್ತಾಗುತ್ತದೆ. ಆದರೆ ವೆಂಗಿ ಪ್ರತ್ಯೇಕವಾದ ಒಂದು ಪ್ರದೇಶವಾಗಿದ್ದರೂ ಕನ್ನಡ ಅರಸುಮನೆತನಗಳು ಇಲ್ಲಿ ನಿರಂತರವಾಗಿ ಆರು ಶತಮಾನ ಗಳ ಕಾಲ ಆಳಿದ್ದರಿಂದ ವೆಂಗಿ ಕನ್ನಡದ ವಸಾಹತು ಪ್ರದೇಶವಾಗಿ ಮೆರೆಯಿತು. ಇದರಿಂದ ಇಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಕಲೆಗಳು ಗಾಢವಾಗಿ ಪರಿಣಾಮ ಬೀರಿದವು. ಇಲ್ಲಿ ತೆಲುಗು ಸಾಮಾನ್ಯ ಜನರಾಡುವ ಭಾಷೆಯಾದರೂ ಕನ್ನಡ ರಾಜಭಾಷೆಯಾಗಿ ಜನರ ಮೇಲೆ ವಿಜೃಂಭಿಸಿತು. ಅನೇಕ ಕನ್ನಡ ಕುಟುಂಬಗಳು ನೆಲೆಯೂರಿದವು. ಕನ್ನಡದ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ವಾಸಸ್ಥಳಗಳು, ಅಗ್ರಹಾರಗಳು ನೆಲೆನಿಂತವು. ಎಲ್ಲಿ ನೋಡಿದರೂ ಕನ್ನಡದ ಪ್ರಭಾವ ಕಾಣುವಂತಾಯಿತು. ತೆಲುಗುಭಾಷೆಯ ವೆಂಗಿ ಮಂಡಳವು ಕನ್ನಡ ಭಾಷೆ-ಸಂಸ್ಕøತಿಗಳ ಪ್ರಭಾವದಿಂದ ಕರ್ನಾಟಕ ಭೂಮಂಡಲದ ತಿಲಕದಂತೆ ಶೋಭಿಸುತ್ತಿತ್ತು ಎಂದು ಕನ್ನಡ ಕವಿಗಳು ಅಭಿಮಾನದಿಂದ ವರ್ಣಿಸಿದ್ದಾರೆ. ಕನ್ನಡ ಪ್ರಭಾವಕ್ಕೆ ವಶವಾದ ವೆಂಗಿಯು ಹಲವು ಕವಿಗಳಿಗೆ ಆಶ್ರಯವಾಯಿತು. ಪಂಪಕವಿ, ನಾಗವರ್ಮ ದುರ್ಗಸಿಂಹ ಮೊದಲಾದ ಕವಿಗಳು ವೆಂಗಿಪ್ರದೇಶದವರು. ಪೆÇನ್ನಕವಿ ತನ್ನನ್ನೂ ವೆಂಗಿ ವಿಷಯ ನಾಡಿನವನೆಂದು ಹೇಳಿಕೊಂಡಿದ್ದಾನೆ.20 ಇಲ್ಲಿಯ ಕಿಸುಕಾಡು, ಅಗ್ರಹಾರ, ಸೈವಡಿ ಪ್ರದೇಶಗಳು ಅಚ್ಚಗನ್ನಡದ ಪ್ರದೇಶಗಳಾಗಿದ್ದವು. ಅಂತೆಯೆ, ದುರ್ಗಸಿಂಹ ತನ್ನ `ಕರ್ನಾಟಕ ಪಂಚತಂತ್ರಂ’ ಕಾವ್ಯದಲ್ಲಿ ವೆಂಗಿಮಂಡಲವನ್ನು `ಕರ್ಣಾಟಕ ಧಾತ್ರೀ ತಿಳಕಮಖಿಲ ಜನವಿಖ್ಯಾತಂ ಕಿಸುಕಾಡುನಾಡು ಆ ನಾಡೊಳ್ ಅಗ್ರಹಾರಂ ಸೈವಡಿ’ ಎಂದು ವರ್ಣಿಸಿರುವುದು ವೆಂಗಿ ಕನ್ನಡಮಯವಾಗಿದ್ದ ಬಗೆಗೆ ನಮಗೆ ತಿಳಿಯುತ್ತದೆ. ಪಂಪಕವಿ ತನ್ನ `ವಿಕ್ರಮಾರ್ಜುನ ವಿಜಯಂ’ ಮಹಾಕಾವ್ಯವನ್ನು ವೆಂಗಿಯಲ್ಲಿಯೇ ರಚಿಸಿದ ವಿಷಯ ರೋಮಾಂಚನಗಳಿಸುತ್ತದೆ. ಆಂಧ್ರ ಸಾಹಿತ್ಯಚರಿತ್ರೆರಾದರೂ ಪಂಪನ ಕುಟುಂಬವನ್ನು ಆಂಧ್ರ ಬ್ರಾಹ್ಮಣರೆಂದು ಅಭಿಮಾನದಿಂದ ಹೇಳುತ್ತಾರೆ. ಆದರೆ ಪಂಪನ ಕುಟುಂಬ ಎಂದೂ ಆಂಧ್ರ ಬ್ರಾಹ್ಮಣರಾಗಿರಲಿಲ್ಲವೆಂಬುದು ಸತ್ಯ.21
ವೆಂಗಿಮಂಡಳದ ಕನ್ನಡ ಕವಿಗಳಿಗೆ ಆಂಧ್ರಭಾಷೆ ಮತ್ತು ಸಂಸ್ಕøತಿಯ ಪರಿಚಯವಿತ್ತೆಂದು ಕಾಣುತ್ತದೆ. ಅವರ ಕಾವ್ಯಗಳಲ್ಲಿ ಆಂಧ್ರಸಂಸ್ಕøತಿಯ ಸೊಗಡು ವ್ಯಕ್ತವಾಗಿವೆ. ಆಂಧ್ರದ ಪ್ರಮದೆಯರ ಶೃಂಗಾರ ವರ್ಣನೆಗಳನ್ನು ಅವರ ಕಾವ್ಯಗಳು ಬಹುಸ್ವಾರಸ್ಯಕರವಾಗಿ ವರ್ಣಿಸಿವೆ. ಪಂಪಕವಿ ತನ್ನ ಭಾರತದಲ್ಲಿ ಆಂಧ್ರ ಸ್ತ್ರೀಯರ ಯೌವನ ಶೃಂಗಾರವನ್ನು `ಆಂಧ್ರ ನಿರೀಂದ್ರಿಯರ್’ ಎಂದು ವರ್ಣಿಸಿದ್ದಾನೆ. ಆ ಕಾಲದ ತೆಲುಗು ಕವಿಗಳ ಮೇಲೆ ಕನ್ನಡ ಕವಿಗಳ ಪ್ರಭಾವವಾಯಿತೆಂದು ಕವಿಚರಿತ್ರೆಕಾರರು ಹೇಳುತ್ತಾರೆ. ತೆಲುಗು ಮಹಾಭಾರತಂ ಕಾವ್ಯ ರಚಿಸಿದ ನನ್ನಯ ಭಟ್ಟನ ಕಾವ್ಯದ ಮೇಲೆ ಪಂಪಕವಿಯ ಕಾವ್ಯ ಪ್ರಭಾವವಾಗಿದೆಯೆಂದು ಪರಿಭಾವಿಸುತ್ತಾರೆ. ವೆಂಗಿಮಂಡಳದ ಕನ್ನಡದ ಪ್ರಭಾವ ಆಂಧ್ರ ಸಾಹಿತ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ `ಆಂಧ್ರಸಾಹಿತ್ಯ ಚರಿತ್ರೆ’ಯ ವಿಭಾಗ ಕ್ರಮದಲ್ಲಿ ತೆಲುಗು ಸಾಹಿತ್ಯದ ಆರಂಭವು ಚಾಳುಕ್ಯ ರಾಜಯುಗದಿಂದ ಪ್ರಾರಂಭವಾಗುತ್ತದೆ22 ಚಾಳುಕ್ಯರ ಕಾಲ ಆಂಧ್ರಸಾಹಿತ್ಯ ಚರಿತ್ರೆಯಲ್ಲಿ ಬಹು ಪ್ರಮುಖ ಘಟ್ಟ.
ಇಂದಿನ ದಕ್ಷಿಣಭಾರತ ಭೂಪಟದಲ್ಲಿ ವೆಂಗಿಮಂಡಲದ ರೂಪರೇಷೆ: ಇಲ್ಲಿಯವರೆಗೂ ವೆಂಗಿವಿಷಯ ಮಂಡಲದ ಬಗೆಗೆ ವಿಶದವಾಗಿ ಚರ್ಚಿಸಿದ ಆಧಾರದ ಮೇಲೆ ಇಂದಿನ ಭಾರತದ ಭೂಪಟದಲ್ಲಿ ವೆಂಗಿಪ್ರದೇಶವನ್ನು ಗುರುತಿಸುವುದು ಈ ಲೇಖನದ ಮುಖ್ಯ ಉದ್ದೇಶ. ಕಳಿಂಗದ ಉತ್ತರಕ್ಕೆ ಮಹೇಂದ್ರಗಿರಿ, ದಕ್ಷಿಣಕ್ಕೆ ಗೋದಾವರಿನದಿ ನಾಡುಗಳ ನಡುವೆ ಹಬ್ಬಿದ ಕಳಿಂಗದ ಸೀಮೆಗೆ ಹೊಂದಿದ ವೆಂಗಿಮಂಡಳ, ದಕ್ಷಿಣಕ್ಕೆ ಕೃಷ್ಣಾನದಿ ಮತ್ತು ಉತ್ತರಕ್ಕೆ ಗೋದಾವರಿ ನದಿಗಳು ಗಡಿಯಾಗುತ್ತವೆ. ಇವೆರಡು ನದಿಗಳ ನಡುವಣ ಪ್ರದೇಶ ವೆಂಗಿವಿಷಯ, ಮಂಡಲ ಮತ್ತು ಪಳು ಎಂದು ಈಗಾಗಲೇ ಪರಿಭಾಷಿಸಲಾಗಿದೆ. ಬಾದಾಮಿಯ ಪಶ್ಚಿಮ ಚಾಳುಕ್ಯರ ಆಳ್ವಿಕೆಗೆ ಒಳಪಟ್ಟ ವೆಂಗಿಯಲ್ಲಿ ಅವರ ಶಾಸನಗಳು ಆಡಳಿತದ ಕುರುಹುಗಳು ವೆಂಗಿಪ್ರದೇಶದ ಗುರುತಿಸಲು ಸಾಧನವಾಗಿವೆ. ಒಂದನೆಯ ಅರಿಕೇಸರಿಯ ಪರಭಣಿ ಶಾಸನ, ಎರಡನೆಯ ಅರಿಕೇಸರಿಯ ವೇಮುಲವಾಡು (ವೆಂಬುಳಪಾಡು) ಶಾಸನ, ಮೂರನೆಯ ಅರಿಕೇಸರಿಯ ಕೋಲಿಪಾರ (ಕೊಲ್ಲಿಪಾಕ) ಶಾಸನ ಮತ್ತು ಜಿನವಲ್ಲಭನ ಗಂಗಾಧರಂ ಶಾಸನಗಳಿರುವ ಸ್ಥಳಗಳು ಇಂದಿನ ಆಂಧ್ರಪ್ರದೇಶದಲ್ಲಿವೆ ವೇಮುಲವಾಡು ಮತ್ತು ಗಂಗಾಧರಂ ಬೊಮ್ಮಲಮ್ಮನ ಕುರಿಕ್ಯಾಲ ಸ್ಥಳಗಳು ಈಗಿನ ಕರೀನಗರ ಜಿಲ್ಲೆಗಳಲ್ಲಿವೆ. ಕೋಲಪಾರ ಸ್ಥಳ ನಲಗೊಂಡ ಜಿಲ್ಲೆಯಲ್ಲಿದೆ. ವೆಂಗಿಪಳು ಇಂದಿನ ಕೃಷ್ಣಾ ಜಿಲ್ಲೆ ಎಂದು ಗುರುತಿಸಲಾಗಿದೆ. ಪರಭಣಿಕೆಯು ಇಂದು ಮಹಾರಾಷ್ಟ್ರಕ್ಕೆ ಸೇರಿದರೂ ಹತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದ ದಕ್ಷಿಣ ಪೂರ್ವ ಭಾಗಗಳ ವೆಂಗಿಮಂಡಲ ವಾಗಿತ್ತು. ಮರಾಠಿ ಭಾಷೆಯ ಪ್ರಭಾವವಿಲ್ಲದೆ ಈ ಪ್ರದೇಶ ಕನ್ನಡವೇ ಆಗಿತ್ತು. `ಫರಭಣಿ’ಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೋ ತಿಳಿದುಬರುವುದಿಲ್ಲ. ಅಂದು ಫರಭಣಿ ಹೆಸರನ್ನು ಬೇರೆ ಹೆಸರಿನಿಂದ ಕರೆಯುತ್ತಿರಬೇಕು.
ಹೀಗೆ ದಕ್ಷಿಣದ ಕೃಷ್ಣಾನದಿಯಿಂದ ಉತ್ತರದ ಗೋದಾವರಿ ನದಿಯ ದಂಡೆಗೆ ದಕ್ಷಿಣೋತ್ತರ ದಿಕ್ಕಿನವರೆಗೆ ಹಾಗೂ ಪಶ್ಚಿಮದ ಕಡಪ ಕರ್ನೂಲ ಜಿಲ್ಲೆಗಳಿಂದ ಪೂರ್ವದ ನಲಗೊಂಡ ಕೋಲಪಾಕರದವರೆಗಿನ ಪಶ್ಚಿಮ-ಪೂರ್ವ ದಿಕ್ಕಿನವರೆಗೆ ವೆಂಗಿಮಂಡಲ ಹಬ್ಬಿತ್ತೆಂದು ಪರಿಭಾವಿಸಲಾಗಿದೆ. ಈ ವೆಂಗಿಮಂಡಳವನ್ನು `ತೆಲುಗುದೇಶ’ ಎಂದು ಕರೆಯಲಾಗುತ್ತಿತ್ತು. ಕೃಷ್ಣ ನದಿಯ ದಕ್ಷಿಣಕ್ಕೆ ಚಾಚಿದ ಪ್ರದೇಶ ಆಂಧ್ರನಾಡು ಎಂದೆನಿಸಿತ್ತು. ವೆಂಗಿಯ ಪಶ್ಚಿಮ ಗಡಿ ಇಂದಿನ ಕರ್ನಾಟಕ ರಾಜ್ಯವಾಗಿತ್ತು. ಇದರ ಪೂರ್ವದ ಗಡಿ ಇಂದಿನ ವಿಜಯವಾಡ ಗುಂಟೂರು ಜಿಲ್ಲೆಗಳು.
ಇಂದಿನ ಆಂಧ್ರಪ್ರದೇಶದಲ್ಲಿ ವೆಂಗಿಮಂಡಲದ ಜಿಲ್ಲಾ ಪ್ರದೇಶಗಳೂ ಇಂದಿಗೂ ಕನ್ನಡಮಯ. ಕನ್ನಡಿಗರು ವಾಸಿಸುವ ತಾಣ. ಇಲ್ಲಿ ಕನ್ನಡ ಸಾಹಿತ್ಯ ಸಂಸ್ಕøತಿಗಳನ್ನು ಗಾಢವಾಗಿ ಪ್ರಭಾವ ಬಿಂಬಿಸುವ ಪ್ರದೇಶ. ಕರ್ನಾಟಕದ ಪೂರ್ವ ದಿಕ್ಕಿನಲ್ಲಿರುವ ಆಂಧ್ರಪ್ರದೇಶದ ಕಡಪ, ಕರ್ನೂಲ, ಅನಂತಪುರ, ಮೆಹಬೂಬ್‍ನಗರ, ಕರೀಂನಗರ, ಹೈದ್ರಾಬಾದ, ಆದಿಲಾಬಾದ್ ಜಿಲ್ಲೆಗಳಲ್ಲಿ ಕನ್ನಡ ಭಾಷಿಕರು ಗಣನೆಯ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕನ್ನಡ ಭಾಷೆ ಸಾಕಷ್ಟು ಪ್ರಮಾಣದಲ್ಲಿ ಜನಬಳಕೆಯಲ್ಲಿದೆ. ಕನ್ನಡ ಸಾಹಿತ್ಯ ಸಂಸ್ಕøತಿಗಳು ನಡೆಯುತ್ತವೆ. ಇಲ್ಲಿಯ ಕನ್ನಡಿಗರು ಕನ್ನಡ ಭಾಷೆಯನ್ನು ಮರೆತಿಲ್ಲ. ದಾಸಸಾಹಿತ್ಯದ ಬಯಲಾಟಗಳು ಪ್ರಭಾವ ಬೀರಿವೆ. ಇಲ್ಲಿ ವಿಶೇಷವಾಗಿ ದಾಸಸಾಹಿತ್ಯದ ರಚನೆಯಾಗಿರುವುದು ವಿಶೇಷ. ಮೆಹಬೂಬ್ ನಗರ ಮತ್ತು ಕರ್ನೂಲ್ ಜಿಲ್ಲೆಗಳು ಕನ್ನಡದ ಪ್ರಭಾವಕ್ಕೆ ಒಳಗಾದ ಪ್ರದೇಶಗಳು. ಮೆಹಬೂಬ್‍ನಗರ ಜಿಲ್ಲೆಯಲ್ಲಿರುವ ಗದ್ವಾಲ ಮತ್ತು ಆಲಂಪೂರ ತಾಲ್ಲೂಕುಗಳಲ್ಲಿ ಇಂದಿಗೂ ಕನ್ನಡದ ಪ್ರಭಾವವನ್ನು ಕಾಣುತ್ತೇವೆ. ವಿಶೇಷವಾಗಿ ಗದ್ವಾಲ ತಾಲ್ಲೂಕಿನ ಐಜಿ, ವೇಣಿ ಸೋಮಪುರ, ಐಕೂರು, ಮೊದಲಕಲ್, ದರೂರು ಮುಂತಾದವು ಕನ್ನಡ ಸಾಹಿತ್ಯ ಸಂಸ್ಕøತಿಗಳ ಆಗರಸ್ಥಳ. ಇಲ್ಲಿ ಮೂರನೆಯ ಹಂತದ ದಾಸಸಾಹಿತ್ಯ ಬಹು ಹುಲುಸಾಗಿ ರಚನೆಯಾಗಿದೆ. ಗೋಪಾಲದಾಸರು, ಮೊದಲಕಲ್ ಶೇಷದಾಸರು ಮೊದಲಾಗಿ ಶ್ರೇಷ್ಠ ಹರಿದಾಸರು ಇಲ್ಲಿ ಆಗಿಹೋದರು. ಕನ್ನಡದ ಬಯಲಾಟಗಳು ಇಂದಿಗೂ ಜನಪ್ರಿಯ ಮನರಂಜನೆಯ ಕಲೆಗಳಾಗಿವೆ. ಆಲಂಪೂರಿನಲ್ಲಿ ಬಾದಾಮಿ ಚಾಲುಕ್ಯರು ನಿರ್ಮಿಸಿದ 8ನೆಯ ಶತಮಾನದ ದೇವಾಲಯಗಳಿವೆ.
ಹಾಗೆಯೆ, ಕಡಪ ಕರ್ನೂಲ ಜಿಲ್ಲೆಯ ಆದವಾನಿ, ಆಲೂರು ತಾಲ್ಲೂಕಿನಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ದ್ದಾರೆ. ಕನ್ನಡ ಶಾಲೆಗಳು ಗಣನೀಯ ಸಂಖ್ಯೆಯಲ್ಲಿವೆ. ಹೊಳಗುಂದಿ, ಗೂಳ್ಯಂ, ಹಾಲರವಿ (ಹಾಲವಿ) ಹರಿವಾಣ, ಕೌತಾಳಂ, ಬದನೆಹಾಳು ಮುಂತಾದ ಊರುಗಳಲ್ಲಿ ಕನ್ನಡ ಶಾಲೆಗಳಿದ್ದು, ಕನ್ನಡ ಭಾಷೆ ಸಂಸ್ಕøತಿಗಳು ಇಂದಿಗೂ ಪ್ರಬುದ್ಧವಾಗಿದೆ. ಕನ್ನಡ ಉತ್ಸವಗಳು ಸಂಭ್ರಮದಿಂದ ನಡೆಯುತ್ತವೆ. ಇಲ್ಲಿ ಪ್ರಸಿದ್ಧ ಮತ್ತು ಯೋಗಿಗಳು ಅವರಿಸಿ ಈ ಭೂಮಿಯನ್ನು ಪವಿತ್ರಗೊಳಿಸಿದ್ದಾರೆ. ಶ್ರೀದೇವಿ ಪುರಾಣ, ಜ್ಞಾನಸಿಂಧು ಮುಂತಾದ ಹಲವು ಗದ್ಯ-ಕಾವ್ಯಗಳನ್ನು ರಚಿಸಿದ ಯೋಗಿ ಚಿದಾನಂದ ಅವಧೂತರು ಹಿರಿಯ ಹರಿವಾಣದವರು. ಅದರಂತೆ, ಅನಂತಪುರ ಜಿಲ್ಲೆಯ ರಾಯದುರ್ಗ, ಗುತ್ತಿಗಳಲ್ಲಿ ಕನ್ನಡ ಪ್ರಭಾವವಿದೆ. ಪ್ರಸಿದ್ಧ ಸಾಯಿಬಾಬಾರ ಸುಕ್ಷೇತ್ರವಾದ ಪುಟಪರ್ತಿ ಕನ್ನಡ ಪ್ರಭಾವಿತ ಸ್ಥಳ.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಂ ಕ್ಷೇತ್ರ ವೆಂಗಿಮಂಡಲದಲ್ಲಿದ್ದ ದೊಡ್ಡ ಕ್ಷೇತ್ರ. ಮಂತ್ರಾಲಯಂ, ಹಾಲವಿಗಳಲ್ಲಿರುವ ಧಾರ್ಮಿಕ ಮಠಗಳು ಇದೇ ಪ್ರದೇಶಕ್ಕೆ ಸಂಬಂಧಿಸಿವೆ. ನಲಗೊಂಡ ಜಿಲ್ಲೆಯ (ಕೋಲಪಾರ) ಕೊಲ್ಲಿಪಾಕ 11ನೆಯ ಶತಮಾನದಲ್ಲಿ ಚಾಳುಕ್ಯರ ಒಂದನೆಯ ಸೋಮೇಶ್ವರನ ರಾಜಧಾನಿಯಾಗಿತ್ತು. ವೆಂಗಿಮಂಡಳದಲ್ಲಿರುವ ಹಲವು ದೇವಾಲಯಗಳು, ಪುಣ್ಯಕ್ಷೇತ್ರಗಳು, ಯಾತ್ರಾಸ್ಥಳಗಳು ಆಂಧ್ರಪ್ರದೇಶದ ಕೊಡುಗೆಗಳು.
ಇಂದಿನ ಆಂಧ್ರಪ್ರದೇಶದಲ್ಲಿ ವೆಂಗಿಮಂಡಲವು ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಹಂಚಿಹೋಗಿದೆ. ವೆಂಗಿಪ್ರದೇಶದ ಬಹುಭಾಗ ತೆಲಂಗಾಣದಲ್ಲಿ ವಿಲೀನವಾಗಿದೆ. ಇಂದಿನ ಈಶಾನ್ಯ ಕರ್ನಾಟಕ (ಹೈದರಾಬಾದ ಕರ್ನಾಟಕ) ಜಿಲ್ಲೆಗಳು ವೆಂಗಿಮಂಡಲದ ಪ್ರದೇಶವಾಗಿದ್ದವು. ಈ ಲೇಖನದಲ್ಲಿ ಪರಿಭಾವಿಸಿದ ವೆಂಗಿವಿಷಯ, ವೆಂಗಿಮಂಡಳ, ವೆಂಗಿಪಳು ನನ್ನ ಪರಿಕಲ್ಪನೆಯ ರೂಪಸೂತ್ರ. ಈ ಪರಿಕಲ್ಪನೆಯಲ್ಲಿ ಕೆಲವು ಬಿಟ್ಟುಹೋಗಿರಬಹುದು; ಕೆಲವು ಸೇರಿಸಲು ಆಗಿರಲಿಕ್ಕಿಲ್ಲ; ಮತ್ತೆ ಕೆಲವನ್ನು ತಪ್ಪಾಗಿ ಸೇರಿರಬಹುದು.
ಆಂಧ್ರಪ್ರದೇಶವನ್ನು ಬಹುಭಾಗ ವ್ಯಾಪಿಸಿಕೊಂಡಿದ್ದ, ಕನ್ನಡದ ವಸಾಹತುವಾಗಿದ್ದ ನನ್ನನ್ನು ಸದಾ ಕಾಡುತ್ತಿದ್ದ, ವಿದ್ವಾಂಸರ, ಚರಿತ್ರೆಕಾರರಿಗೆ ಜಿಜ್ಞಾಸೆಯ ವಿಷಯವಾಗಿದ್ದು, `ವೆಂಗಿ’ ಮಂಡಲದ ಒಂದು ಸ್ವರೂಪವನ್ನು ತಂದುಕೊಡುವುದು ನನ್ನ ಈ ಲೇಖನ ಮೊದಲ ಪ್ರಯತ್ನ.
[ಈ ಲೇಖನದಲ್ಲಿ ಪ್ರತಿಪಾದಿಸಲಾದ ಎಲ್ಲ ಅಂಶಗಳೂ ಈಗಾಗಲೇ  ಜಿ.ಎಸ್. ಗಾಯಿ, ಎನ್. ಲಕ್ಷ್ಮೀನಾರಾಯಣರಾವ್, ಮುಳಿಯ ತಿಮ್ಮಪ್ಪಯ್ಯ, ಸೀತಾರಾಮ ಜಾಗೀರ್‍ದಾರ್ ಮುಂತಾದ ವಿದ್ವಾಂಸರ ಬರಹಗಳಲ್ಲಿ ಚರ್ಚಿತವಾಗಿದ್ದು ಈ ಲೇಖನದಲ್ಲಿನ ಹಲವಾರು ಮಾಹಿತಿಗಳು ದೋಷಗಳಿಂದ ಕೂಡಿವೆ. -ಸಂ.]
ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಕರ್ನಾಟಕ ಇತಿಹಾಸ, ಆರ್.ಎಸ್. ಪಂಚಮುಖಿ, ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳ, ಧಾರವಾಡ.
2. ಅದೇ.,
3. ಪ್ರಾಚೀನ ಭಾರತದ ಇತಿಹಾಸ, ಎಂ.ಎಚ್. ಕೃಷ್ಣ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
4. ಇಚಿಡಿಟಥಿ ಊisಣoಡಿಥಿ oಜಿ ಂಟಿಜhಡಿಚಿ Pಡಿಚಿಜesh, ಆ.ಗಿ. ಏಡಿishಟಿಚಿಡಿಚಿo.
5. ಕರ್ನಾಟಕ ಇತಿಹಾಸ, ಆರ್.ಎಸ್. ಪಂಚಮುಖಿ.
6. ಅದೇ.,
7. ಅದೇ.,
8. ಅದೇ.,
9. ಪ್ರಾಚೀನ ಭಾರತದ ಇತಿಹಾಸ, ಎಂ.ಎಚ್. ಕೃಷ್ಣ.
10. ಅದೇ.,
11. ಅದೇ.,
12. ಪಂಪನ ವಿಕ್ರಮಾರ್ಜುನ ವಿಜಯಂ, ಮೈಸೂರು ವಿಶ್ವವಿದ್ಯಾಲಯ, 14-40.
13. ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ, ಕನ್ನಡ ಮತ್ತು ಸಂಸ್ಕøತ ಇಲಾಖೆ.
14. ಎouಡಿಟಿಚಿಟ oಜಿ ಣhe ಂಟಿಜhಡಿಚಿ ಊisಣoಡಿiಛಿಚಿಟ ಖeseಚಿಡಿಛಿh Soಛಿieಣಥಿ, ಗಿo 1,  ಗಿI ಠಿಚಿಡಿಣ 3-4 ಠಿಠಿ 11.
15. ಪ್ರಬುದ್ಧ ಕರ್ನಾಟಕ, ಡಾ. ಜಿ.ಎಸ್. ಗಾಯಿ, ಸಂಪುಟ 50, ಸಂಚಿಕೆ-2, ಪುಟ 80-83.
16. ಜಿನವಲ್ಲಭನ ಗಂಗಾಧರಂ ಶಾಸನ.
17. ದೂರವಾಣಿಯ ಮೂಲಕ ನನಗೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
18. ಎouಡಿಟಿಚಿಟ oಜಿ ಣhe ಂಟಿಜhಡಿಚಿ ಊisಣoಡಿiಛಿಚಿಟ ಖeseಚಿಡಿಛಿh Soಛಿieಣಥಿ, ಗಿo 1, ಗಿI ಠಿಚಿಡಿಣ 3-4 ಠಿಠಿ 11.
19. ಕವಿರಾಜಮಾರ್ಗಂ, ಎಂ.ವಿ. ಸೀತಾರಾಮಯ್ಯ, ಕರ್ನಾಟಕ ಸಂಘ, ಸರಕಾರದ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು, 1-36.
20. ಶಾಂತಿಪುರಾಣಂ, ಪೆÇನ್ನ.
21. ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ.
22. ಆಂಧ್ರ ಸಾಹಿತ್ಯ ಚರಿತ್ರಮು, ಕಂದೂರಿ ವೀರೇಶಲಿಂಗಂ ಪಂತಲು.

 ವಿಶ್ರಾಂತ ಪ್ರಾಂಶುಪಾಲರು, ಪಟೇಲವಾಡಿ, ಸಿಂಧನೂರು-584 128.

Tuesday, July 15, 2014

ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಿಂದ ಇತಿಹಾಸ ಕಡೆಗಣನೆ



 ಇತಿಹಾಸಕ್ಕೆ ಅಪಚಾರವಾಗುವ ಈ ಕ್ರಮವನ್ನು  ಎಲ್ಲ ಇತಿಹಾಸ ಪ್ರೇಮಿಗಳೂ ಪ್ರತಿಭಟಿಸುವುದು ಅಗತ್ಯ.  ಅಂಚಯ ಮೂಲಕ ಪ್ರತಿಭಟನೆ ಸೂಚಿಸಿ


ಇವರಿಗೆ
ಉಪಕುಲಪತಿಗಳು
ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ,
ಹುಬ್ಭಳಿ ,

ಇತಿಹಾಸವನ್ನು ಮೈನರ್‌ ವಿಷಯವಾಗಿರುವುದನ್ನು ಪ್ರತಿಭಟಿಸುವೆ .
ನಿಮ್ಮ ವಿಳಾಸ  -
ಎಂಬ ಒಕ್ಕಣೆ ಇದ್ದರೆ ಸಾಕು.
- ಈ ವಿಳಾಸಕ್ಕೆ ಒಂದು ಸಾಧಾರಣ ಅಂಚೆ ಕಾರ್ಡ್‌ ಕಳುಹಿಸಿ.


ಹೆಚ್ಚು ಹೆಚ್ಚು ಸದಸಸ್ಯರು ಭಾಗವಹಿಸುವರೆಂದು ನಂಬಿದೆ
 





Saturday, July 12, 2014

ಚನ್ನಪಟ್ಟಣ ತಾಲ್ಲೂಕಿನ ಐತಿಹಾಸಿಕ ನೆಲೆಗಳು


ಚನ್ನಪಟ್ಟಣ ತಾಲ್ಲೂಕಿನ ಐತಿಹಾಸಿಕ ಮಹತ್ವದ ನೆಲೆಗಳು

ಎ.ಎಸ್. ಮಹೇಂದ್ರಕುಮಾರ್ ಅಕ್ಕೂರ
ಚನ್ನಪಟ್ಟಣ
ಚನ್ನಪಟ್ಟಣವೂ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಪ್ರಮುಖ ಐತಿಹಾಸಿಕ ಮಹತ್ವ ಪಡೆದ ನಗರವಾಗಿದೆ. 1873’ರಲ್ಲಿ ಚನ್ನಪಟ್ಟಣವೂ ಕ್ಲೋಸ್ ಪೇಟೆ (ಇಂದಿನ ರಾಮನಗರ) ತಾಲ್ಲೂಕಿನ ಉಪತಾಲ್ಲೂಕು ಆಗಿತ್ತು. ನಂತರದ ಬೆಳವಣಿಗೆಯಲ್ಲಿ ಚನ್ನಪಟ್ಟಣವು 1892ರಲ್ಲಿ ಪೂರ್ಣ ತಾಲ್ಲೂಕು ಆಗಿ ರೂಪುಗೊಂಡಿದ್ದಲ್ಲದೆ ಇಂದಿನ ರಾಮನಗರ ತಾಲ್ಲೂಕು, ಚನ್ನಪಟ್ಟಣದ ಉಪ ತಾಲ್ಲೂಕು ಆಗಿ ಮಾಡಲಾಯಿತು. ಚನ್ನಪಟ್ಟಣಕ್ಕೆ ಮೊದಲಿದ್ದ ಹೆಸರು `ಚಂದದ ಪಟ್ಟಣ’, `ಚಂದಾಪುರ’ ಎಂದು ಕರೆಯುತ್ತಿದ್ದರು ಎಂದು ಇತಿಹಾಸದ ದಾಖಲೆಯಿಂದ ತಿಳಿದುಬರುತ್ತದೆ. ಈ ನಗರವನ್ನು ಕರ್ನಾಟಕದ ಪ್ರಸಿದ್ಧ ರಾಜವಂಶಗಳಾದ ಹೊಯ್ಸಳರು, ಗಂಗರಸರು, ಚೋಳರು, ವಿಜಯನಗರದ ಅರಸರು ಹಾಗೂ ಮೈಸೂರು ಅರಸರು, ಕೆಲವು ಸಮಯ ಮರಾಠರು, ಟಿಪ್ಪು ಮತ್ತು ಹೈದರಾಲಿಯ ಆಳ್ವಿಕೆಗೂ ಸೇರಿತು ಎಂದು ತಿಳಿದುಬರುತ್ತದೆ.
1534ರಲ್ಲಿ ತಿಮ್ಮಪ್ಪಯ್ಯ (1534-1670) ಇವರ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ತದನಂತರ 1580ರಲ್ಲಿ ಈ ವಂಶದ ಶ್ರೀ ಜಗದೇವರಾಯರು ಈ ನಗರಕ್ಕೆ ಕೋಟೆಯನ್ನು ಕಟ್ಟಿಸಿದರು. ಇವರು ವಿಜಯನಗರ ಅರಸರ ಸಾಮಂತರಾಗಿದ್ದು, 1630ರಲ್ಲಿ ಮೈಸೂರು ಅರಸು ಶ್ರೀ ಚಾಮರಾಜ ಒಡೆಯರ್ ಆಳ್ವಿಕೆಗೆ ಒಳಪಟ್ಟಿತು. ತದ ನಂತರದ ಸಮಯದಲ್ಲಿ ಮರಾಠರ ಶ್ರೀ ಗೋಪಾಲಹರಿಯ ಆಕ್ರಮಣಕ್ಕೆ ಒಳಗಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಹೈದರಾಲಿಯ ಈ ಒಂದು ಆಕ್ರಮಣವನ್ನು ಮುಕ್ತಗೊಳಿಸಿದನೆಂದು 1970ರಲ್ಲಿ ಟಿಪ್ಪು ಈ ನಗರವನ್ನು ಆಳ್ವಿಕೆಯ ಸಮಯದಲ್ಲಿ ಮದ್ದುಗುಂಡು ಸಂಗ್ರಹಿಸುವ ಆಯುಧಗಾರವಾಗಿ ಈ ನಗರವನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದೆ ಮೈಸೂರು ಅರಸರು ದಿವಾನ್ ಪೂರ್ಣಯ್ಯನವರ ಆಳ್ವಿಕೆಗೂ ಒಳಪಟ್ಟಿತು ಎಂದು ತಿಳಿದುಬರುತ್ತದೆ.
ತಿಮ್ಮಪ್ಪರಾಜೇ ಅರಸು ಅರಮನೆ ಎಂಬ ಒಂದು ಹಳೆಯ ಕಾಲದ ಅರಮನೆ ಇತ್ತು. ಈ ಕಟ್ಟಡವನ್ನು ತಾಲ್ಲೂಕಿನ ಕಚೇರಿ ಎಂದು ತಾಲ್ಲೂಕಿನ ಜನರು ಗುರುತಿಸುತ್ತಿದ್ದರು. ಈ ಕಟ್ಟಡಕ್ಕೆ ಸಂಬಂಧಿಸಿದ ಹಳೆಯ ಐತಿಹಾಸಿಕ ವಸ್ತುಗಳನ್ನು ಜನಪದ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ. ಹಿಂದೆ ಚನ್ನಪಟ್ಟಣ ವೀಣೆಯ ತಂತಿಯ ತಯಾರಿಕೆಯಲ್ಲಿ ಹಾಗೂ ಚಂದನದ ಗೊಂಬೆಯನ್ನು ತಯಾರಿಸುವ ಕೆಲಸದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು ಎಂದು `ಚಂದನದ ಗೊಂಬೆ’ಯ ತಯಾರಿಕೆ ಮಾರುತ್ತಿದ್ದುದರಿಂದ ಚನ್ನಪಟ್ಟಣ ಎಂದು ಹೆಸರು ಬರಲು ಮತ್ತೊಂದು ಕಾರಣ ಎಂಬ ಇತಿಹಾಸವಿದೆ. ಇದು ಸಹ ಸಾಂಪ್ರದಾಯಿಕ ಗೊಂಬೆಯ ಬದಲಾಗಿ ಇತರೆ ಕರಕುಶಲ ಗೊಂಬೆ ತಯಾರಿಕೆಯಲ್ಲಿ ವಿಶ್ವ ಭೂಪಟದಲ್ಲಿ ಅಗ್ರಗಣ್ಯವಾದ ಸ್ಥಾನವನ್ನು ಪಡೆದಿದ್ದು ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡು ಬರುತ್ತಿವೆ. ಚನ್ನಪಟ್ಟಣ ಶ್ರೀ ವರದರಾಜ ದೇವಾಲಯ, ಶ್ರೀ ಕೋಟೆಮಾರಮ್ಮನವರ ದೇವಸ್ಥಾನ, ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನಗಳು ಪ್ರಮುಖ ಸ್ಥಾನ ಪಡೆದಿರುತ್ತವೆ. ಶ್ರೀ ವರದರಾಜಸ್ವಾಮಿ ದೇವಾಲಯವು ವೈಷ್ಣವಮತ ಸ್ಥಾಪಕರಾದ ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ನಿರ್ಮಾಣವಾಗಿರಬಹುದೆಂದು ತಿಳಿದುಬರುತ್ತದೆ. ತದನಂತರದ ಸಮಯದಲ್ಲಿ ಕೆಲವು ಭಾಗಗಳನ್ನು ವಿಜಯನಗರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಯಿತು ಎಂದು ತಿಳಿದುಬರುತ್ತದೆ. ಸುಂದರವಾದ ಮುಖಮಂಟಪ ಸುಖಾಸೀನ ಗರ್ಭಗೃಹವನ್ನು ಹೊಂದಿದ್ದು, ಇದು ದ್ರಾವಿಡನ್ ಶೈಲಿಯನ್ನು ಹೊಂದಿದೆ. ದೇವಸ್ಥನದ ಕಂಬದ ಮೇಲೆ ಸುಂದರ ದಶಾವತಾರ ಚಿತ್ರಗಳು, ವಿಷ್ಣುಪುರಾಣದ ಚಿತ್ರಗಳನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ವಸಂತೋತ್ಸವ ಮಂಟಪ, ಕಲ್ಯಾಣ ಮಂಟಪ, ನಮ್ಮಳ್ವಾರ್ ಮಂಟಪಗಳು, ಶ್ರೀ ರಾಮಾನುಜಾಚಾರ್ಯರ ವಿಗ್ರಹ, ಎಡಕ್ಕೆ ಶ್ರೀ ಸೌಮ್ಯನಾಯಕಿ ಅಮ್ಮನವರ ಗುಡಿ ಸಹ ಇದೆ. ಈ ದೇವಾಲಯಕ್ಕೆ ಅನತಿ ದೂರದಲ್ಲಿ ಶ್ರೀ ಪ್ರಸನ್ನರಾಮ ದೇವಸ್ಥಾನವಿದೆ. ಈ ಮಂದಿರವು ಮೈಸೂರು ಅರಸರ ಶೈಲಿಯನ್ನು ಹೋಲುತ್ತದೆ.
ಸಮೀಪದಲ್ಲಿ ಇರುವ ಶ್ರೀ ವ್ಯಾಸರಾಜ ಮಠ, ಕುಂದಾಪುರ ಸಂಸ್ಥಾನಕ್ಕೆ ಒಳಪಟ್ಟಿದ್ದು, ಈ ಮಠವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ಮಠದಲ್ಲಿ ಶ್ರೀ ವ್ಯಾಸರಾಜರು ಶ್ರೀನಿವಾಸದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮಠದ ಒಳಭಾಗದಲ್ಲಿ ವಿಜಯನಗರ ಸಾಮ್ರಾಜ್ಯದ ಎರಡು ಧ್ರುವತಾರೆಗಳಾದ ಶ್ರೀ ವ್ಯಾಸರಾಯರಿಗಾಗಿ ಶ್ರೀ ಪುರಂದರದಾಸರು ತಮ್ಮ ನೆಚ್ಚಿನ ಗುರುಗಳಿಗಾಗಿ ಪೂಜಾಮಂಟಪ ಒಂದನ್ನು ತಮ್ಮ ಗೋಪಾಲವೃತ್ತಿಯಿಂದ ಅರ್ಜಿಸಿದ ಸಂಪತ್ತಿನಿಂದ ಒಂದು ಪೂಜಾಮಂಟಪ ಕಟ್ಟಿಸಿ ಕೊಟ್ಟಿದ್ದಾರೆ. ಇದನ್ನು ಪುರಂದರ ಮಂಟಪ ಎಂದು ಇಂದಿಗೂ ಸಹ ಕರೆಯುತ್ತಾರೆ. ಶ್ರೀ ವರದರಾಜಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಇರುವ ಶ್ರೀ ಆಂಜನೇಯ ಗುಡಿ ಇದ್ದು, 1553ರಲ್ಲಿ ರಚನೆಯಾದಂತೆ ಕಂಡುಬರುತ್ತದೆ. ಇಲ್ಲಿನ ಒಂದು ಶಾಸನವು ಸದಾಶಿವರಾಯನ ಬಗ್ಗೆ ತಿಳಿಸುತ್ತದೆ. ಇದಲ್ಲದೆ ಗರುಡಗಂಬ ಬೀದಿಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಮತ್ತು ಶ್ರೀ ನೀಲಕಂಠೇಶ್ವರ ದೇವಾಲಯವು ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವು ಜಗದೇವರಾಯನ ಕಾಲದಲ್ಲಿ ನಿರ್ಮಾಣವಾಯಿತು ಎಂದು ಐತಿಹ್ಯ ಹೇಳುತ್ತದೆ. ಶ್ರೀ ಸುಗ್ರೀವಸ್ವಾಮಿ ಮಂದಿರವು ಬಹಳ ಅಪರೂಪವಾದ ದೇವಾಲಯವಾಗಿದ್ದು ಈ ಹೆಸರಿನ ದೇವಾಲಯವು ಕಂಡುಬರುವುದು ವಿಶೇಷವಾಗಿದೆ. ಮತ್ತು ಶ್ರೀ ಕಾಳಿಕಾಂಬ ಮಂದಿರ ಹಾಗೂ ಶ್ರೀರಾಮಮಂದಿರಗಳು ಒಳಗೊಂಡಿವೆ. ಹಾಗೂ ಚನ್ನಪಟ್ಟಣ ನಗರಪ್ರದೇಶದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಹೈದರಾಲಿ ಕಾಲದಲ್ಲಿ ಬಂದು ನೆಲೆಸಿದ್ದಾರೆ ಎಂಬ ಅಂದಾಜಿದೆ. ನಗರದ ಪೂರ್ವಭಾಗದಲ್ಲಿ ದಾರೆಕೇರಿ, ಸೈಯದ್‍ವಾಡಿ, ಮಕಾನ್ ಮತ್ತು ಕೋಟೆಯ ಕೆಲವು ಪ್ರದೇಶದಲ್ಲಿ ಮಹಮದೀಯರು, ಶಿಯಾ, ಸುನ್ನಿ ಎಂಬ ಮಹಮದಿಯಾ ಪಂಗಡದವರು ನೆಲೆಸಿದ್ದಾರೆ.
ಮಸೀದಿ ಮತ್ತು ದರ್ಗಾಗಳು ಸೇರಿ ಸುಮಾರು 20 ಪ್ರಾರ್ಥನೆಯ ಮಂದಿರಗಳು ಇರುತ್ತವೆ. ಟಿಪ್ಪುಸುಲ್ತಾನರ ಗುರುವಿನ ಸಮಾಧಿಯು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಇದ್ದು, ಪ್ರತಿವರ್ಷ ಈ ಜಾಗದಲ್ಲಿ `ಉರುಸ್’ ನಡೆಯುತ್ತದೆ. ಸಾವಿರಾರು ಜನರು ಭಾಗವಹಿಸುತ್ತಾರೆ. ಈ ಒಂದು ನಗರದಲ್ಲಿ ಒಂದು ವೀರಶೈವ ಮಠ ಸಹ ಕುಡಿಯುವ ನೀರಿನ ಕಟ್ಟೆಯ ಹತ್ತಿರ ಇರುತ್ತದೆ. ಈ ಊರಿನ ಸಾಮೂಹಿಕ ಆಚರಣೆಯ ಹಬ್ಬವೆಂದರೆ `ಕಾಮನ ಹುಣ್ಣಿಮೆ’. ಈ ತಾಲ್ಲೂಕಿನ ಪ್ರಮುಖ ಉತ್ಸವವಾಗಿದ್ದು, ನಗರದಲ್ಲಿ 10 ದಿವಸಗಳ ಕಾಲ ಆಚರಿಸಲಾಗುತ್ತದೆ. ಈ ತಾಲ್ಲೂಕಿನ ಪ್ರಮುಖ ಉತ್ಸವವಾಗಿದ್ದು, ನಗರದಲ್ಲಿ 10 ದಿವಸಗಳ ಕಾಲ ಆಚರಿಸಲಾಗುತ್ತದೆ. ಈ ತಾಲ್ಲೂಕಿನ ಇತರೆ ಐತಿಹಾಸಿಕ ನೆಲೆಗಳನ್ನು ಪರಿಶೀಲಿಸೋಣ.
ದೇವರ ಹೊಸಹಳ್ಳಿ
ದೇವರ ಹೊಸಹಳ್ಳಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ವೈಷ್ಣವ ಕ್ಷೇತ್ರವಾಗಿದ್ದು, ವಿಜಯನಗರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನವೆಂದು ತಿಳಿದುಬರುತ್ತದೆ. ಮೊದಲಿಗೆ ಈ ದೇವಸ್ಥಾನಕ್ಕೆ ಪ್ರಸನ್ನ ಆಂಜನೇಯ ದೇವಸ್ಥಾನವೆಂದು ಕರೆಯುತ್ತಿದ್ದು, ಶ್ರೀ ವ್ಯಾಸರಾಯರು ಸ್ಥಾಪಿಸಿದ ದೇವಸ್ಥಾನ ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಹನುಮಂತ ಮೂರ್ತಿಯು ತುಂಬಾ ಸುಂದರವಾಗಿದ್ದು, ಸುಮಾರು 1.5 ಮೀಟರ್ ಎತ್ತರವಿದ್ದು, ಬಾಲದಲ್ಲಿ ಘಂಟೆ ಇರುವುದರಿಂದ ಶ್ರೀ ವ್ಯಾಸರಾಯರ ಸ್ಥಾಪನೆ ಎಂದು ತಿಳಿಯುತ್ತದೆ. ವಿಜಯನಗರ ಕಾಲದ ಲಾಂಛನವನ್ನು ಇಲ್ಲಿನ ದೇವಾಲಯದ ಕಂಬದ ಮೇಲೆ ಇಂದು ಸಹ ನೋಡಬಹುದಾಗಿದೆ. ಈ ಕ್ಷೇತ್ರದಲ್ಲಿ ಧ್ಯಾನ ಫಲಪ್ರದ ಮತ್ತು ಮಾನಸಿಕ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ರೂಪದಲ್ಲಿನ ತೀರ್ಥವು ಸಿದ್ಧೌಷಧಿಯಾಗಿದ್ದು, ಆದ್ದರಿಂದ ಈ ದೇವರಿಗೆ ಸಂಜೀವ ರಾಯಸ್ವಾಮಿ ಎಂದು ಹೆಸರು ಬಂದಿದೆ ಎಂದು ಇತಿಹಾಸ ಹೇಳುತ್ತದೆ. ಆಷಾಢ ಮಾಸದಲ್ಲಿ ನಡೆಯುವ ಜಾತ್ರೆಗೆ ಹೊಸದಾಗಿ ವಿವಾಹವಾದ ವಧು-ವರರು ಹೆಚ್ಚಾಗಿ ಬರುವುದು ಈ ಜಾತ್ರೆಯ ವಿಶೇಷವಾಗಿದೆ, ತಾಲ್ಲೂಕಿನ ಧಾರ್ಮಿಕ ಜಾಗೃತ ಕ್ಷೇತ್ರವಾಗಿದ್ದು ತನ್ನದೇ ಆದ ಬಹಳ ಪ್ರಸಿದ್ಧಿಯನ್ನು ಪಡೆದ ಕ್ಷೇತ್ರವಾಗಿದೆ ಹಾಗೂ ಈ ಮೂರ್ತಿಯನ್ನು ನೋಡಿದ ಪುರಂದರದಾಸರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕೆಳಗಿನ ಕೀರ್ತನೆಯನ್ನು ರಚಿಸಿದರೆಂಬ ಅಭಿಪ್ರಾಯವಿದೆ ``ಅಂಜಿಕೆ ಇನ್ನು ಏತಕ್ಕಯ ಭಯವು ಇನ್ನು ಯಾತಕಯ್ಯ ಸಂಜೀವರಾಯನ ನೆನೆದ ಮೇಲೆ’’ ಎಂಬ ಕೀರ್ತನೆ ರಚಿಸಿದ್ದಾರೆಂಬ ಹಾಗೂ ದೊಡ್ಡಮಳೂರಿನ ಶ್ರೀ ರಾಮಾಪ್ರಮೇಯ ಮತ್ತು ಅಂಬೆಗಾಲು ಕೃಷ್ಣನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲೇ ಇಲ್ಲಿಗೂ ಭೇಟಿ ಕೊಟ್ಟು ಮೇಲಿನ ಕೀರ್ತನೆಯನ್ನು ರಚಿಸಿದ್ದಾರೆಂಬ ಅಭಿಪ್ರಾಯವಿದೆ.
ದೊಡ್ಡ ಮಳೂರು
ದೊಡ್ಡ ಮಳೂರು ಮತ್ತೊಂದು ಪ್ರಸಿದ್ದಿ ಪಡೆದಿರುವ ವೈಷ್ಣವ ಕ್ಷೇತ್ರವೂ ಹೌದು. ಮತ್ತು ಶೈವಕ್ಷೇತ್ರವು ಆಗಿ ಐತಿಹಾಸಿಕವಾಗಿ ಮಹತ್ವಪೂರ್ಣ ಚೋಳರ ಕಾಲದಲ್ಲಿ ಪೆರಿಯಾ ಮಾಳೂರು ಎಂದು ಮಾಲಲೂರು, ಮೂಲವೂರು, ಮಾಳೆತೂರು, ರಾಜೇಂದ್ರ ಸಿಂಹಪುರ, ಚತುರ್ವೇದ ಮಂಗಳಪುರ, ಜ್ಞಾನಮಂಟಪಕ್ಷೇತ್ರ, ತೆಂಕಣಯೋಧ್ಯ, ಪಂಚಕೇಶನಗರ, ಭಕ್ತಿವೃದ್ದಿ ವಿಮಾನಪುರ, ಧರ್ಮವೃದ್ದಿ ಕ್ಷೇತ್ರ ಎಂಬ ಹೆಸರುಗಳಿಂದ ಕರೆಸಿಕೊಂಡಿರುವ ಕ್ಷೇತ್ರವಾಗಿದೆ.
ಚೋಳರ ಕಾಲದಲ್ಲಿ ಶ್ರೀ ಅಪ್ರಮೇಯಸ್ವಾಮಿ ಮಂದಿರ ನಿರ್ಮಾಣವಾಯಿತೆಂದು ತದನಂತರ ಹೊಯ್ಸಳರ ಅರಸರು ವಿಜಯನಗರದ ಅರಸರು ಈ ದೇವಾಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿ ದೇವಾಲಯವನ್ನು ಅಭಿವೃದ್ಧಿಪಡಿಸಿದರೆಂದು ತಿಳಿದುಬರುತ್ತದೆ. ಶ್ರೀ ರಾಮಾನುಜಾಚಾರ್ಯರು ಈ ದೇವಾಲಯದಲ್ಲಿ ಒಂದು ವಾರ ತಾತ್ಕಾಲಿಕ ವಾಸ್ತವ್ಯ ಇದ್ದಾರೆಂದು ಐತಿಹ್ಯ ಹೇಳುತ್ತದೆ. ಈ ದೇವಾಲಯದಲ್ಲಿ ಇರುವ ಸಾಲಿಗ್ರಾಮ ಶಿಲೆಯ ಅಂಬೆಗಾಲಿನ ಶ್ರೀ ಕೃಷ್ಣನ ಮೂರ್ತಿಯನ್ನು ಶ್ರೀ ವ್ಯಾಸರಾಯರು ಸ್ಥಾಪಿಸಿದರು ಎಂದು ಈ ಕೃಷ್ಣನ ಚೆಲುವನ್ನು ನೋಡಿ ಶ್ರೀ ಪುರಂದರದಾಸರು ಈ ದೇವಾಲಯಕ್ಕೆ ಭೇಟಿ ನೀಡಿ `ಆಡಿಸಿದಳೇ ಯಶೋಧೆ ಜಗದೋದ್ದಾರನ’ ಎಂಬ ಕೀರ್ತನೆಯನ್ನು ರಚಿಸಿದರು ಎಂದು ತಿಳಿದುಬರುತ್ತದೆ. ಶ್ರೀ ರಾಮಾಪ್ರಮೇಯಸ್ವಾಮಿಯ ಸುಂದರ ಭವ್ಯ ದೇವಾಲಯದ ನೆಲೆಯಲ್ಲಿ ಯಾಜ್ಞವಲ್ಕ್ಯ ಸ್ಮ ೃತಿಗೆ ವಿಜ್ಞಾನೇಶ್ವರನೆಂಬ ಕವಿಯು ಸಾಹಿತ್ಯ ರಚನೆಯು ಕನ್ನಡ ನೆಲದಲ್ಲಿ ನಡೆಯಿತು ಎಂಬ ಅಭಿಪ್ರಾಯವಿದೆ. ಇದಲ್ಲದೆ ಸಾರಂಗಧರ, ಕಣ್ವಮಹರ್ಷಿಗಳು ಈ ನೆಲದಲ್ಲಿ ಕನಕಪುರಂದರ ರಾಮಾನುಜರು, ವ್ಯಾಸರು ತುಳಿದು ಪಾವನಗೊಳಿಸಿದ್ದು ವೈಷ್ಣವ ಆರಾಧನ ಪದ್ಧತಿಗೂ ತನ್ನದೇ ಆದಂತಹ ಒಂದು ಭದ್ರ ಬುನಾದಿ ನೀಡಿದ ಕ್ಷೇತ್ರವೆಂದು ಹೇಳಬಹುದು. ಈ ಊರು ಶೈವಕ್ಷೇತ್ರವೂ ಹೌದು, ವೈಷ್ಣವ ಕ್ಷೇತ್ರವೂ ಹೌದು ಎಂಬುದಕ್ಕೆ. ಈ ಊರಿನಲ್ಲಿ ಶೈವ ಮಂದಿರಗಳಾದ ಶ್ರೀ ಕೈಲಾಸೇಶ್ವರ ದೇವಸ್ಥಾನ ಕ್ರಿ.ಶ.1000 ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಇದಲ್ಲದೆ ಕಲ್ಲಿನಾಥೇಶ್ವರ, ಶ್ರೀಮುಕ್ತನಾಥೇಶ್ವರ, ಶ್ರೀ ಜಲಕಂಠೇಶ್ವರ ದೇವಸ್ಥಾನಗಳೆಂದು ನಾಲ್ಕು ದಿಕ್ಕಿನಲ್ಲಿ ನಾಲ್ಕು ಸರೋವರಗಳನ್ನು ಹೊಂದಿದ್ದು, ಪುಣ್ಯಸ್ನಾನಕ್ಕೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ.
ಮಂಕುಂದ
ಗಂಗರ ರಾಜಧಾನಿ ನಗರವಾಗಿದ್ದು, ಈ ನೆಲಕ್ಕೆ ಮಾನ್ಯಪುರ ಎಂದು ಕರೆಯುತ್ತಿದ್ದರು ಎಂದು ಐತಿಹ್ಯವಿದೆ. ಈ ಸ್ಥಳದಲ್ಲಿ ಗಂಗರ ಭೂವಿಕ್ರಮ ಮತ್ತು ಶಿವಮಾರ ಇವರ ಆಳ್ವಿಕೆ ಕಾಲದಲ್ಲಿ ಮುಖ್ಯ ಪಟ್ಟಣವಾಗಿದ್ದ ಸ್ಥಳವಾಗಿದೆ.  ನಂತರ ಚೋಳರ ಆಳ್ವಿಕೆಯಲ್ಲಿ ಸರ್ವನಾಶವಾದ ಸ್ಥಳವಾಗಿದೆ.
ಈ ಸ್ಥಳದಲ್ಲಿ ಶ್ರೀ ವೀರಭದ್ರಸ್ವಾಮಿ, ಶ್ರೀ ಆಂಜನೇಯಸ್ವಾಮಿ ಶ್ರೀ ಸೋಮೇಶ್ವರ ದೇವರುಗಳ ಮಂದಿರಗಳಿವೆ. ಹಳೆಯ ಮೈಸೂರು ಮಾದರಿಯಲ್ಲಿ ವೀರಭದ್ರನ ದೇವಸ್ಥಾನವಿದ್ದು, ಇದೀಗ ನವೀಕರಿಸಲಾಗಿದೆ. ದೇವಸ್ಥಾನದ ಒಳಭಾಗದಲ್ಲಿ ಸೂರ್ಯನ ಮೂರ್ತಿಯಿದೆ. ದಂಡಮ್ಮನ ದೇವಸ್ಥಾನದ ಸಮೀಪ ಗಂಗರ ಕಾಲದ ಶಿಲಾಶಾಸನವಿದ್ದು, ಕ್ರಿ.ಶ.913 ಅದರಲ್ಲಿ ನೀತಿಮಾರ್ಗನ ಉಲ್ಲೇಖಿತವಾಗಿದೆ. ಇದಕ್ಕೆ ದೇಣಿಗೆಯಾಗಿ 2 ಹಳ್ಳಿಗಳಾದ ಕೂಡ್ಲೂರು ಹಾಗೂ ಬೊಲರಿಯಾರು ಕಂದಾಯವನ್ನು ಇಲ್ಲಿಗೆ ನೀಡುವಂತೆ ತಿಳಿಸಿರುವಂತೆ ದಾಖಲೆ ಇದೆ. ಸೋಮೇಶ್ವರ ದೇವಾಲಯದಲ್ಲಿ ಗರ್ಭಗೃಹ ಮತ್ತು ಚಿಕ್ಕದಾದ ಆರಾಧನಾ ಮಂಟಪವಿದ್ದು, ಬಸವನ ವಿಗ್ರಹವಿದೆ. ಮೂರು ವೀರಗಲ್ಲು ಒಂದು ಮಾಸ್ತಿಕಲ್ಲು ಈ ಗ್ರಾಮದಲ್ಲಿ ಕಂಡುಬರುವ ಐತಿಹಾಸಿಕ ದಾಖಲೆ ಆಗಿದೆ.
ಮಳೂರು ಪಟ್ಟಣ
ಈ ಐತಿಹಾಸಿಕ ಸ್ಥಳವು ಕಣ್ವ ನದಿಯ ದಂಡೆಯ ಮೇಲೆ ಇದ್ದು, ಮುಖ್ಯವಾದ ಅಗ್ರಹಾರವಾಗಿತ್ತು. ಹಿಂದೆ ಚೋಳರ ಕಾಲದಲ್ಲಿ ಚತುರ್ವೇದಿ ಮಂಗಲಪುರ ಎಂಬ ಹೆಸರು ತಮಿಳು ಭಾಷೆಯ ದಾಖಲೆಯಲ್ಲಿ ಕ್ರಿ.ಶ.1041 ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಸಿಕ್ಕುತ್ತದೆ. ಇಲ್ಲಿ ಹಲವಾರು ವೀರಗಲ್ಲುಗಳು ದೇವಸ್ಥಾನಗಳಿವೆ. ವಿಜಯನಗರ ಕಾಲಕ್ಕೆ ಸೇರಿದ ಹಲವಾರು ಬರಹಗಳನ್ನು ಕಾಣಬಹುದಾಗಿದೆ. 1763ರಲ್ಲಿ ಹೈದರಾಲಿಯು ಮಳೂರು ಪಟ್ಟಣವನ್ನು ಕಾಣಿಕೆಯಾಗಿ ತನ್ನ ಗುರು `ಫಕೀರಷಾಹಿ ಖಾದರ್’ಗೆ ನೀಡಿದ ದಾಖಲೆ ಸಿಗುತ್ತದೆ. ಈ ಸ್ಥಳದಲ್ಲಿ ಶ್ರೀ ನಾರಾಯಣಸ್ವಾಮಿ, ಶ್ರೀ ಅಮೃತೇಶ್ವರ, ಶ್ರೀ ವರದರಾಜ, ಶ್ರೀ ಚೌಡೇಶ್ವರಿ ಅಮ್ಮನವರ ಹಾಗೂ ಒಂದು ಶಿವ ದೇವಾಲಯವು ಇದ್ದು ಈ ದೇವಸ್ಥಾನಕ್ಕೆ ಶ್ರೀ ಅಮೃತೇಶ್ವರ ದೇವಸ್ಥಾನವೆಂದು ಕರೆಯುತ್ತಾರೆ ಈ ಮಂದಿರವನ್ನು ಗಂಗರ ಕಾಲದ ನಿರ್ಮಾಣದಂತೆ ಕಂಡುಬರುತ್ತದೆ. ಚೋಳ ದಾಖಲೆಯ ಪ್ರಕಾರ `ಆರು ಮಾಳೇದೇಶ್ವರಂ’ ಎಂದು ಇರುತ್ತದೆ. `ಆರು ಮಾಳಬರ ಉದಯನ್’ ಎಂದು ನಂತರ ಸ್ಥಳೀಯರ ಬಾಯಿಂದ ಅಮೃತೇಶ್ವರ ಎಂದು ಕರೆಯಲು ಪ್ರಾರಂಭಿಸಿದರು. ಈ ದೇವಸ್ಥಾನದ ಮುಂದಿನ ಭಾಗವನ್ನು ಹೊಯ್ಸಳರ ನರಸಿಂಹ ನಿರ್ಮಾಣ ಮಾಡಿಸಿದನು. ಈ ದೇವಸ್ಥಾನದ ಬಳಿ ಕ್ರಿ.ಶ.900ರಲ್ಲಿ ಕನ್ನಡದ ಒಂದು ಶಾಸನವಿದೆ. ಶ್ರೀ ಅಮೃತೇಶ್ವರ ದೇವಸ್ಥಾನದ ಹತ್ತಿರ ಇರುವ ಶ್ರೀ ನಾರಾಯಣಸ್ವಾಮಿ ಮಂದಿರದ ಬಳಿ ತಮಿಳು ಶಾಸನ ಇದೆ. ಈ ಶಾಸನವು ಕ್ರಿ.ಶ.1007ರಲ್ಲಿ ರಾಜರಾಜಚೋಳನು ದೇವಸ್ಥಾನದ ನಿರ್ವಹಣೆಗೆ ಬೇಕಾದ ಪೂಜೆಯ ವೆಚ್ಚಕ್ಕೆ ಬೇಕಾದ ಸವಲತ್ತಿನ ಬಗ್ಗೆ ತಿಳಿಸುತ್ತದೆ. ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ ಮತ್ತೊಂದು ಶಾಸನವಿದ್ದು, ಹಲವು ವೀರಕಲ್ಲುಗಳಿವೆ. ಕ್ರಿ.ಶ.1180ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನ ಕಾಲಕ್ಕೆ ಸಂಬಂಧಿಸಿದ್ದು ಎಂದು ತಿಳಿಸುತ್ತದೆ. ಈ ಚೌಡೇಶ್ವರಿ ದೇವಸ್ಥಾನವು ವಿಜಯನಗರ ಕಾಲದ ಶೈಲಿಯನ್ನು ಹೊಂದಿರುತ್ತದೆ. ಈ ದೇವಸ್ಥಾನದಲ್ಲಿ ಭೈರವದುರ್ಗಾ ಮತ್ತು ದ್ವಾರಪಾಲಕರು ಇದ್ದಾರೆ. ಶ್ರೀ ಚಾಮುಂಡಿ ಮೂರ್ತಿ ಸಹ ಈ ದೇವಾಲಯದಲ್ಲಿ ನೋಡಬಹುದಾಗಿದೆ. ಕ್ರಿ.ಶ.1437ರಲ್ಲಿ ದೇವರಾಯ ವಿಜಯನಗರ ಕಾಲದ ಆಳ್ವಿಕೆಗೆ ಸಂಬಂಧಿಸಿದ ವೀರಗಲ್ಲು ಮತ್ತು ಶಾಸನ ಇರುತ್ತದೆ.
ಕೆಂಗಲ್
ಚನ್ನಪಟ್ಟಣ ತಾಲ್ಲೂಕಿನ ಪ್ರಸಿದ್ಧ ವೈಷ್ಣವ ಕ್ಷೇತ್ರ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣದಿಂದ ಮೂರು ಕಿ.ಮೀ. ದೂರದಲ್ಲಿರುವ ಕ್ಷೇತ್ರವಾಗಿದೆ. ಕೆಂಗಲ್ ಆಂಜನೇಯ ಸ್ವಾಮಿಯ ಗುಡಿಯು ಈಗಿನದಾದರೂ ಆಂಜನೇಯಸ್ವಾಮಿ ಮತ್ತು ಈ ಜಾಗ ಪ್ರಾಚೀನವಾದುದೇ. ಕೆಂಪು ಕಲ್ಲಿನ ಬಂಡೆಯೊಂದರಲ್ಲಿ ಶ್ರೀ ವ್ಯಾಸರಾಜರು ಆಂಜನೇಯ ಚಿತ್ರ ಬರೆದು ಪೂಜಿಸಿದರಂತೆ. ವ್ಯಾಸರಾಜರ ಒಟ್ಟು 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಈ ರೇಖಾಚಿತ್ರವು ಶ್ರೀಯವರ ಮೂರ್ತಿಯಾಗಿ ರೂಪ ಪಡೆಯಿತು ಎಂದು ಐತಿಹ್ಯವು ತಿಳಿಸುತ್ತದೆ. ವಿಧಾನಸೌಧದಂತಹ ಅದ್ಭುತ ಕಲಾ ನೈಪುಣ್ಯದ ಭವನದ ನಿರ್ಮಾಣ ಕರ್ತೃ ಶ್ರೀ ಕೆಂಗಲ್ ಹನುಮಂತಯ್ಯನವರು ಈ ದೇವರ ವರಪ್ರಸಾದದಿಂದ ಜನಿಸಿದರು ಎಂದು ತಿಳಿಯುತ್ತದೆ. ಈ ದೇವಸ್ಥಾನದ ನಿರ್ಮಾಣಕ್ಕೆ ವಿಧಾನಸೌಧ ಕಟ್ಟಿದ ನಂತರ ಉಳಿದ ಕಲ್ಲಿನಿಂದ ನಿರ್ಮಾಣವಾಗಿರುವುದು ವಿಶೇಷವಾಗಿದೆ. ಹಾಗೂ ರಾಷ್ಟ್ರರತ್ನ ಶ್ರೀ ಕೆ. ಹನುಮಂತಯ್ಯನವರು ನಿಧನ ಹೊಂದಿದ ನಂತರ ಭೌತಿಕ ಶರೀರವನ್ನು ಈ ಜಾಗದಲ್ಲಿಯೇ ಸಮಾಧಿ ಮಾಡಲಾಗಿದೆ. ಹೀಗೆ ಐತಿಹಾಸಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಈ ಕ್ಷೇತ್ರವು ಬಹಳ ಪ್ರಮುಖವಾದ ಕ್ಷೇತ್ರವಾಗಿ ರೂಪುಗೊಂಡಿದೆ ಹಾಗೂ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್‍ರವರು ಬೆಂಗಳೂರಿಗೆ ಹೋಗುವಾಗ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು ಒಂದು ಬಾರಿ ಇಲ್ಲಿಯ ಹುಲ್ಲಿಮುತ್ತಿಗೆ ಅರಣ್ಯದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿ ಅಕ್ಕಪಕ್ಕದ ಗ್ರಾಮದ ಜನರಿಗೆ ತುಂಬಾ ತೊಂದರೆಯಾಗಿ ಅದರ ನಿಯಂತ್ರಣಕ್ಕೆ ಪರಿಹಾರ ಮಾರ್ಗ ಕಾಣದೆ ಈ ದೇವಾಲಯಕ್ಕೆ ಭೇಟಿ ನೀಡಿ ಅನನ್ಯವಾಗಿ ಪ್ರಾರ್ಥನೆ ಮಾಡಿದರೆಂದು ತದನಂತರ ಈ ಉಪದ್ರವವು ಕಡಿಮೆಯಾಯಿತೆಂದು ಇದರಿಂದ ಸಂತೋಷಗೊಂಡು ಹರಕೆಯ ರೂಪದಲ್ಲಿ ಬೆಳ್ಳಿಯ ನೇತ್ರವನ್ನು ಸ್ವಾಮಿಗೆ ಅರ್ಪಿಸಿದರೆಂಬ ಮಾಹಿತಿ ಹಿಂದೆ.
ಕೂಡ್ಲೂರು
ಗಂಗ, ಚೋಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಈ ಐತಿಹಾಸಿಕ ಸ್ಥಳವು ಅಗ್ರಹಾರವಾಗಿತ್ತು ಈ ಊರಿನಲ್ಲಿರುವ ಚೋಳರ ಕಾಲದ ಶಾಸನದ ಪ್ರಕಾರ ಈ ಗ್ರಾಮಕ್ಕೆ ಮೊದಲು ಇದ್ದ ಹೆಸರು `ರಾಜರಾಜಚತುರ್ವೇದಿ ಮಂಗಲಂ ಅಗ್ರಹಾರ’ ಈ ಗ್ರಾಮದಲ್ಲಿ ಇಂದು ಸುಮಾರು 25ಕ್ಕಿಂತ ಹೆಚ್ಚು ದೇವಾಲಯಗಳಿವೆ. ಮುಖ್ಯವಾಗಿ ಶ್ರೀ ಮಂಗಳೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮಹಾಬಲೇಶ್ವರ, ಶ್ರೀ ವೈದ್ಯನಾಥೇಶ್ವರ, ಶ್ರೀ ಮರಳೇಶ್ವರ ಎಂಬ ಪಂಚಲಿಂಗ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣ ಎಂದು ದಾಖಲೆಗಳು ತಿಳಿಸುತ್ತದೆ. ಈ ದೇವಾಲಯದ ಸಮೀಪದಲ್ಲೇ ಒಂದು ಕೊಳ ಇರುತ್ತದೆ. ಈ ದೇವಸ್ಥಾನಕ್ಕೆ ನೀಡಿದ ದಾನದತ್ತಿಗಳ ಬಗ್ಗೆ ಕ್ರಿ.ಶ.1200ರಲ್ಲಿ ಚೋಳರ ದಾಖಲೆಗಳು ತಿಳಿಸುತ್ತವೆ. ಕ್ರಿ.ಶ.1305ರಲ್ಲಿ ಹೊಯ್ಸಳರು ಈ ಮಂದಿರಕ್ಕೆ ಹಲವು ದಾನದತ್ತಿ ನೀಡಿದ ಬಗ್ಗೆ ದಾಖಲೆಯನ್ನು ಕಾಣಬಹುದಾಗಿದೆ.
ಮತ್ತೊಂದು ಐತಿಹಾಸಿಕ ಮಹತ್ವಪೂರ್ಣವಾದ ಮಂದಿರವೆಂದರೆ ಶ್ರೀರಾಮ ದೇವಾಲಯ ಈ ಮಂದಿರವನ್ನು ಐತಿಹ್ಯದ ಪ್ರಕಾರ ಕ್ರಿ.ಶ.1600 `ಗಂಗರಾಜ ವಿಜಯಪಾಲ’ ದೇವಸ್ಥಾನ ನಿರ್ಮಿಸಿದರು ಎಂದು ತಿಳಿದುಬರುತ್ತದೆ. ಈ ಮಂದಿರದ ವಿಶೇಷ ಜಟಾಯು ಪಕ್ಷಿಗೆ ಮುಕ್ತಿ ನೀಡಿ ಶ್ರೀ ವಿಷ್ಣುಮೂರ್ತಿ ರೂಪದಲ್ಲಿ ಕಾಣಿಸಿಕೊಂಡ ಪ್ರತೀತಿ ಇದೆ ಇದ್ದು ಸಹ ವಿಷ್ಣು ಮತ್ತು ಶ್ರೀರಾಮನ ರೂಪದ ಸಂಗಮವಾಗಿದ್ದು. ಅಭಯಹಸ್ತ, ಶಂಖಚಕ್ರ, ಕಟಿಹಸ್ತದಿಂದ ಕೂಡಿದೆ. ವಿಜಯನಗರ ಅರಸರು ಈ ವರದಿಯನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ಮೂರು ತಮಿಳು ಶಿಲಾಲೇಖನಗಳು ಗೋಡೆಗಳ ಮೇಲೆ ಕಂಡುಬರುತ್ತವೆ. ಮೊದಲನೇ ದಾಖಲೆಯು ಕ್ರಿ.ಶ.1232 ತಿರುಮಲ ಪಾಡಿಯ ರಾಜಸಿಂಗನು ಭೂಮಿಯನ್ನು ನೀಡಿದ ವಿಚಾರ ತಿಳಿಯುತ್ತದೆ. ಕ್ರಿ.ಶ.1180ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನು ಈ ದೇವಸ್ಥಾನಕ್ಕೆ ಕೆಲವು ಕಾಣಿಕೆ ನೀಡಿದ ವಿವರವನ್ನು ತಿಳಿಸುತ್ತದೆ. ಕ್ರಿ.ಶ.1288ರಲ್ಲಿ ಕನ್ನಡ ಶಾಸನ ಕನಕಹಳ್ಳಿಯ ಮಹಿಳೆಯೊಬ್ಬರು ತೆಂಗಿನ ತೋಟವನ್ನು ಈ ದೇವಸ್ಥಾನಕ್ಕೆ ನೀಡಿದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಶ್ರೀರಾಮ ನವಮಿಯಂದು ಇಲ್ಲಿ ಕಾರ್ಯಕ್ರಮಗಳು ನಡೆಯುತ್ತದೆ. ಇಂದು ಈ ದೇವಾಲಯವು ಮುಜರಾಯಿ ಇಲಾಖೆಯ ಆಳ್ವಿಕೆಗೆ ಒಳಪಡುತ್ತದೆ. ಈ ಸ್ಥಳದಲ್ಲಿ ಚೋಳರ ಕಾಲದ ಹಲವು ಗ್ರಾಮ ಶಾಸನಗಳು ನಟರಾಜ, ಶಿವ, ಪಾರ್ವತಿಯ ಪಂಚಲೋಹದ ವಿಗ್ರಹಗಳು ದೊರೆತಿದ್ದು, ಇವು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ವಶದಲ್ಲಿದೆ.
ಕೂರಣಗೆರೆಬೆಟ್ಟ (ನರಸಿಂಹಸ್ವಾಮಿ ಬೆಟ್ಟ)
ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಯೋಗಾ ನರಸಿಂಹಸ್ವಾಮಿಯ ಬೆಟ್ಟವಿದೆ. ಈ ಬೆಟ್ಟವು ಐತಿಹಾಸಿಕ ಮಹತ್ವಕ್ಕಿಂತ ಪ್ರಕೃತಿಪ್ರಿಯರ ತಾಣವಾಗಿ ಬಹಳ ಪ್ರಸಿದ್ಧಿ ಪಡೆದಿದ್ದು, ವಿಜಯನಗರ ಶೈಲಿಯ ಕಂಬದಲ್ಲಿ ನರಸಿಂಹದೇವರು ಉದ್ಭವವಾಗಿರುವ ರೂಪ ಕಂಡುಬರುತ್ತದೆ. ವ್ಯಾಸರಾಯರು ಈ ಸ್ಥಳದಲ್ಲಿ ಈ ಸ್ವಾಮಿಯನ್ನು ಅಸದೃಶ್ಯರೂಪದಲ್ಲಿ ಕಾಣಿಸಿಕೊಂಡ ಸ್ಥಳವೆಂದು ತಿಳಿದುಬರುತ್ತದೆ.
ಭೂಮಟ್ಟದಿಂದ 1000 ಅಡಿಗಳ ಎತ್ತರದಲ್ಲಿ ಈ ದೇವಸ್ಥಾನವಿದ್ದು, ಈ ಸ್ಥಳದಿಂದ ಮಾರ್ಚನಹಳ್ಳಿ ಕೆರೆ, ತಿಪ್ಪೂರು ಕೆರೆ, ನೂಣ್ಣೂರು ಬೆಟ್ಟ, ಗರಕಹಳ್ಳಿ ಬೆಟ್ಟಗಳು ಬಹಳ ಸುಂದರವಾಗಿ ಕಂಡುಬರುತ್ತವೆ. ಈ ಬೆಟ್ಟದಲ್ಲಿ ನರಿಗಳು, ನವಿಲುಗಳು, ಜಿಂಕೆಗಳು ಕಂಡುಬರುತ್ತವೆ. ಪ್ರತಿ ಶ್ರಾವಣ ಶನಿವಾರದಂದು ಬಹುದೊಡ್ಡ ಜಾತ್ರೆಯಂತೆ ಜನರು ಸೇರುತ್ತಾರೆ.
ಸೋಗಾಲ
ಸೋಗಾಲ ಎಂಬ ಹೆಸರು ಬಂದಿರುವ ಬಗ್ಗೆ ಈ ಗ್ರಾಮದ ಐತಿಹ್ಯದ ಪ್ರಕಾರ 500 ವರ್ಷಗಳ ಹಿಂದಿನ ಸೋಮೇಶ್ವರ ದೇವಸ್ಥಾನ ಈ ಊರಿನಲ್ಲಿದ್ದು, `ಗಾಲ’ ಎಂಬ ಋಷಿಯು ಈ ಜಾಗದಲ್ಲಿ ತಪಸ್ಸು ಮಾಡಿದ್ದರಿಂದ ಈ ಗ್ರಾಮದ ಹೆಸರು ಸೋಗಾಲ ಎಂದಾಯಿತು ಎಂದು ಐತಿಹ್ಯ ಕೇಳಿಬರುತ್ತದೆ.
ಸೋಮೇಶ್ವರ (ಈಶ್ವರ) ದೇವಸ್ಥಾನ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕಾಳಮ್ಮನವರ ದೇವಸ್ಥಾನ ಈ ಊರಿನಲ್ಲಿದೆ. ಈಶ್ವರನ ದೇವಾಲಯವು ವಿಜಯನಗರ ಕಾಲದ ಕೊಡುಗೆಯಾಗಿದೆ. ಗರ್ಭಗೃಹ, ಆರಾಧನಾ ಮಂಟಪ ಹೊಂದಿದ್ದು, ದ್ರಾವಿಡ ಶಿಖರವನ್ನು ಹೊಂದಿದೆ. ಈ ದೇವಾಲಯಕ್ಕೆ ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ಬಾಗಿಲು ಇದೆ. ಎರಡು ಕಡೆಯು ಚಿಕ್ಕ ಮುಖಮಂಟಪವಿದೆ. ಸೂರ್ಯ, ಗಣಪತಿ ಹಾಗೂ ಸಪ್ತಮಾತೃಕೆಯರ ಸುಂದರವಾದ ಶಿಲ್ಪಗಳನ್ನು ಒಳಗೊಂಡಿದೆ. ನವರಂಗದ ದಕ್ಷಿಣ ಪ್ರವೇಶದ್ವಾರದಲ್ಲಿ ವಿಜಯನಗರ ಅರಸರ ಕಾಲದ ಕಾಲಕ್ಕೆ ಬಳಕೆಗೆ ಬಾರದ ಕನ್ನಡ ಲಿಪಿಯ ಶಾಸನ ಇದೆ. ನವರಂಗದ ಪಶ್ಚಿಮದ ಬಾಗಿಲಲ್ಲಿ ದ್ವಾರಪಾಲಕರಿದ್ದಾರೆ. ದೇವಸ್ಥಾನದ ಬಳಿ ಒಂದು ವೀರಗಲ್ಲು ಹಾಗೂ ಎರಡು ಮಾಸ್ತಿಕಲ್ಲು ಇವೆ. ಈ ದೇವಸ್ಥಾನದ ಹಿಂದೆ ಕೆಲವು ವೀರಗಲ್ಲು ಇದ್ದು, ಒಬ್ಬ ರಾಜನು ಹುಲಿಯೊಂದಿಗೆ ಸೆಣಸುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ದೇವಸ್ಥಾನಕ್ಕೆ ಅನತಿ ದೂರದಲ್ಲಿ ಇನ್ನು ಹಲವು ವೀರಗಲ್ಲು ಕಂಡುಬರುತ್ತದೆ.
ಸಿಂಗರಾಜಿಪುರ
ಸಿಂಗರಾಜಿಪುರವು ಚನ್ನಪಟ್ಟಣದಿಂದ ಸಾತನೂರಿಗೆ ಹೋಗುವ ಮಾರ್ಗದಲ್ಲಿ ಸಿಗುವ ಸ್ಥಳವಾಗಿದ್ದು, ಸುಮಾರು 110 ಅಡಿ ಎತ್ತರದಲ್ಲಿ ಬೆಟ್ಟವಿದ್ದು, ಇದು ಶ್ರೀ ಗವಿರಂಗಸ್ವಾಮಿ ಬೆಟ್ಟವೆಂದು ಪ್ರಸಿದ್ಧಿ ಪಡೆದಿದೆ. `ಸಿಂಗರಾಜನು’ ಹೊಯ್ಸಳ ದೊರೆಯ ಆಳ್ವಿಕೆಗೆ ಸೇರಿದ್ದರೆಂದು ಈ ಗ್ರಾಮಕ್ಕೆ ಸಿಂಗರಾಜ ಪುರವೆಂದು ಬಂದಿರಬಹುದು ಎಂದು ಊಹಿಸಲಾಗಿದೆ. `ಸಿಂಗರಾಜಪುರ’ ಎನ್ನುವುದು ಶೃಂಗರಾಜಪುರ ಎನ್ನುವುದರಿಂದ ನಿಷ್ಪನ್ನವಾಗಿದೆ ಎಂದು ಹೇಳುತ್ತಾರೆ.
ಮತ್ತೊಂದು ಹೇಳಿಕೆಯ ಪ್ರಕಾರ ಋಷಿಶೃಂಗರು ಇಲ್ಲಿನ ಗವಿರಂಗಸ್ವಾಮಿ ಬೆಟ್ಟದ ಮೇಲೆ ಸ್ವಲ್ಪ ಸಮಯ ವಾಸ ಮಾಡಿದ್ದಕ್ಕಾಗಿ ಅವರ ಜ್ಞಾಪಕವಾಗಿ ಈ ಊರಿಗೆ `ಋಷಿಶೃಂಗ’ ಹೆಸರಿಗಾಗಿ ಸಿಂಗರಾಜಪುರವಾಗಿದೆ ಎಂದು ಐತಿಹ್ಯ ಇದೆ. ಈ ಗ್ರಾಮದಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದ್ದು, ವಿಜಯನಗರ ಶೈಲಿಯನ್ನು ಹೋಲುವಂತೆ ಇದೆ. ವಿಜಯನಗರ ಶೈಲಿಯ ಬಾಗಿಲಿನ ದ್ವಾರಪಾಲಕರ ಚಿತ್ರ ಕಂಡುಬರುತ್ತದೆ. ಈ ಊರಿಗೆ ಹೊಂದಿಕೊಂಡಿರುವ ಶ್ರೀ ಗವಿರಂಗಸ್ವಾಮಿ ಬೆಟ್ಟದ ರಸ್ತೆಯಲ್ಲೇ ಭೈರವ ಗುಹೆಯು ಇದೆ. ಗವಿರಂಗಸ್ವಾಮಿ ಶ್ರೀ ಗುಹೆಯಲ್ಲಿ ಇದ್ದು, ಲಿಂಗಾಕೃತಿಯಲ್ಲಿದೆ. ಸೀತೆಯು ಸ್ನಾನಕ್ಕಾಗಿ ಲಕ್ಷ್ಮಣನು ಬಾಣಪ್ರಯೋಗ ಮಾಡಿದ ಬಿಲ್ಲು ಸೊಣೆ ಇಲ್ಲಿದೆ. ಈ ಸೊಣೆಗೂ ಮುತ್ತತ್ತಿಯ ನದಿಗೂ ಸಂಬಂಧವಿದೆ. ಅಲ್ಲಿ ಪ್ರವಾಹ ಬಂದಾಗ ಇಲ್ಲಿ ನೀರು ಉಕ್ಕುತ್ತದೆ ಎಂದು ಹೇಳುತ್ತಾರೆ ಸ್ಥಳದಲ್ಲಿ ಋಷ್ಯಶೃಂಗ ಮುನಿ, ಮತಂಗಋಷಿ, ವಿಬಾಂಡಕ ಋಷಿ ತಪಸ್ಸು ಮಾಡಿದ್ದಾರೆ ಎಂದು ವಿಚಾರ ತಿಳಿದುಬರುತ್ತದೆ.
ಹೊಂಗನೂರು
ಹೊಂಗನೂರು ಐತಿಹಾಸಿಕ ಮಹತ್ವದ ಸ್ಥಳವಾಗಿದ್ದು, ಹೊಂಗನೂರಿಗೆ ಹಿಂದೆ `ಪುಂಗನೂರು’, `ಹುಂಗನೂರು’ ಎಂದು ಶಾಸನಗಳು ತಿಳಿಸುತ್ತವೆ. ಚೋಳರ ಕಾಲದಲ್ಲಿ ಅಗ್ರಹಾರವಾಗಿದ್ದು, ಅವರ ಕಾಲದಲ್ಲಿ ಈ ಗ್ರಾಮಕ್ಕೆ ಇದ್ದ ಮತ್ತೊಂದು ಹೆಸರು `ತ್ರಿಲೋಕ್ಯಮಾದೇವಿ-ಚತುರ್ವೇದಿ-ಮಂಗಳಂ’ ಎಂದು ಅನಂತರ ಈ ಸ್ಥಳವು ಕ್ರಿ.ಶ.1296ರ ಹೊಯ್ಸಳರ ದಾಖಲೆ ಪ್ರಕಾರ `ಹೊಂಗನೂರು’ ಎಂದು ಕಂಡುಬರುತ್ತದೆ.
ಗಂಗರ ಕಾಲದಲ್ಲಿ ಇದು `ಚಿಕ್ಕ ಗಂಗವಾಡಿ’ ಪ್ರಾಂತದ ಕೇಂದ್ರಸ್ಥಾನವೆಂತಲೂ, ಶಿಂಷಾ ನದಿಯ ಅಕ್ಕಪಕ್ಕದ ಊರುಗಳಿಗೆ ಕೇಂದ್ರಸ್ಥಾನವಾಗಿತ್ತು ಎಂದು ಮಳವಳ್ಳಿ ತಾಲ್ಲೂಕಿನ `ನಿಟ್ಟೂರಿನ ಶಾಸನ’ವು 1265ರ ಹೊಯ್ಸಳರ ದಾಖಲೆಯಲ್ಲಿ ಈ ಬಗ್ಗೆ ಪುರಾವೆ ಸಿಗುತ್ತದೆ. ಈ ಗ್ರಾಮದಲ್ಲಿ ಕೋಡಿಭೈರವ ಗುಡಿ, ಲಕ್ಷ್ಮಿ, ಗೋಪಾಲಕೃಷ್ಣ,
ಮಾರಮ್ಮ, ಈಶ್ವರ (ಹೊನ್ನಲೇಶ್ವರ) ಮುಂತಾದ ದೇವಸ್ಥಾನಗಳು ಇವೆ.
ಹೊಯ್ಸಳರ ಕಾಲದ ಕೋಢಿಭೈರವನ ವಿಗ್ರಹವಿದೆ. ಗೋಪಾಲಕೃಷ್ಣ ದೇವಸ್ಥಾನವು ಹೊಯ್ಸಳ ಮತ್ತು ವಿಜಯ ನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರ ಆಗಿರುವಂತೆ ಕಂಡುಬರುತ್ತವೆ. ಗೋಪಾಲಕೃಷ್ಣನ ಮೂರ್ತಿ ಮನೋಹರ ವಾಗಿದ್ದು, ವಿಜಯನಗರ ಶೈಲಿಯಂತೆ ಕಂಡುಬರುತ್ತದೆ. ಈ ದೇವಾಲಯದ ಪ್ರಾಕಾರದಲ್ಲಿ ಚೋಳರ ಕಾಲದ ಲಕ್ಷ್ಮಿ ದೇವಾಲಯವಿದ್ದು, 6 ಕಂಬಗಳ ಮಂಟಪವಿದ್ದು, ದೇವಿಯ ವಿಗ್ರಹ ವಿಜಯನಗರದ ಉತ್ತರ ಕಾಲಕ್ಕೆ ಸೇರಿದಂತೆ ಕಂಡುಬರುತ್ತದೆ. ರಾಜೇಂದ್ರ ಚೋಳ ಕ್ರಿ.ಶ.1081ರಲ್ಲಿ ಇವರ ಶಾಸನವು ಉದ್ನೆಯ ವಾಕ್ಯದಂತೆ ಪುಂಗನೂರು ತ್ರೈಲೋಕ್ಯಮಾದೇವಿ ಚತುರ್ವೇದಿಮಂಗಳಂ ಕಳಲೈ ನಾಡುವಿನಲ್ಲಿ ಮುಡಿಗೊಂಡ ಚೋಳ ಮಂಡಲದಲ್ಲಿದೆ ಎಂದಿದೆ. ಈ ಶಾಸನದ ಮೊದಲರ್ಧದಲ್ಲಿ ದೇವಕುಂದೈ ವನ್ನಾಗರ ಆಳ್ವಾರ್‍ಗೆ ಕೊಟ್ಟ ದತ್ತಿ ಸೋಮಸಿಂಗಾರ್ಯನ ಬಗ್ಗೆ ತಿಳಿಸುತ್ತದೆ. ಶ್ರೀ ಹೊನ್ನಾಳೇಶ್ವರ ದೇವಾಲಯವು ಚೋಳರಸರ ಮತ್ತೊಂದು ಕೊಡುಗೆ ಎತ್ತರವಾದ ಶಿವಲಿಂಗವಿದೆ. ಸಪ್ತಮಾತೃಕೆಯರ ಮೂರ್ತಿಗಳಿವೆ. ಕ್ರಿ.ಶ. 1155 ಎರಡನೇ ನರಸಿಂಹನು ಕೆತ್ತಿಸಿರುವ ಒಂದು ಶಾಸನದ ಪ್ರಕಾರ ಮಲ್ಲಿದೇವನಾಯಕ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತನೆಂದು ಅವನ `ನಾಗವ್ವೆ’ ಈ ವೀರಕಲ್ಲನ್ನು ನಿಲ್ಲಿಸಿದ್ದಾಳೆ.
ಹಾರೋಕೊಪ್ಪ
ಹಾರೋಕೊಪ್ಪವು ಸೋಗಾಲದಿಂದ 3 ಕಿ.ಮೀ. ಅಂತರದಲ್ಲಿ ಇರುವ ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿದೆ. ಈ ಗ್ರಾಮವು ಗುಡಿ-ಗೋಪುರಗಳಿಂದ ತುಂಬಿ ಹೋಗಿರುವ ಪ್ರದೇಶವಾಗಿದ್ದು, ಸುಮಾರು 20ಕ್ಕಿಂತ ಹೆಚ್ಚು ಸಣ್ಣ-ಪುಟ್ಟ ದೇವಾಲಯಗಳು ಇದ್ದು, ಹಲವಾರು ವೀರಗಲ್ಲು ಮತ್ತು ಮಾಸ್ತಿಕಲ್ಲುಗಳನ್ನು ಪಡೆದುಕೊಂಡ ಗ್ರಾಮವಾಗಿದೆ. ಹಿಂದೆ ಈ ಗ್ರಾಮದಲ್ಲಿ ಅಗ್ರಹಾರದ ಒಂದು ಭಾಗವಾಗಿತ್ತು ಎಂದು ಹಾಗಾಗಿ ಈ ಊರಿಗೆ ಹಾರೋ ಎಂದರೆ ಹಾರೂರು `ಬ್ರಾಹ್ಮಣ’ರು ವಾಸ ಮಾಡುತ್ತಿದ್ದ ಸ್ಥಳವಾಗಿತ್ತು ಎಂದು ಐತಿಹ್ಯ ತಿಳಿಸುತ್ತದೆ. ಶ್ರೀ ಭೈರವನ ದೇವಾಲಯ ಚಿಕ್ಕ ಕಲ್ಯಾಣಿ, ಶ್ರೀ ವೀರಭದ್ರ, ಶ್ರೀ ಹಟ್ಟಿ ಮಾರಮ್ಮ, ಶ್ರೀ ಚೌಡೇಶ್ವರಿ ಮುಂತಾದ ಗುಡಿಗಳಿವೆ.
ಅಬ್ಬೂರು
ಅಬ್ಬೂರಿಗೆ ಕರ್ನಾಟಕದ ಎರಡನೆಯ ಮಂತ್ರಾಲಯ ಎಂಬ ಹೆಗ್ಗಳಿಕೆ ಇದೆ. ಬ್ರಹ್ಮಣ್ಯತೀರ್ಥರ ಬೃಂದಾವನ ಇರುವ ಪ್ರದೇಶ ಅಬ್ಬೂರು ತಪಸ್ವಿಗಳು ತ್ರಿಕಾಲಜ್ಞಾನಿಗಳು ಆಗಿದ್ದ ಬ್ರಹ್ಮಣತೀರ್ಥರು ಸೂರ್ಯಂಶಸಂಭೂತರೆಂಬ ಪ್ರತೀತಿ ಇದೆ. ಈ ಯತಿಗಳು ಪವಾಡಪುರುಷರು ವಿಜಯನಗರದ ಶ್ರೀ ಕೃಷ್ಣದೇವರಾಯನ ಸಿಂಹಾಸನಕ್ಕೆ ಒದಗಿದ್ದ `ದುರ್ಯೋಗ’ವನ್ನು ದೂರ ಮಾಡಿದ ತನ್ನ ತಪಶಕ್ತಿಯನ್ನು ಧಾರೆ ಎರೆದ ಯತಿ ವ್ಯಾಸರಾಯನು ಈ ಬ್ರಹ್ಮಣ್ಯತೀರ್ಥರ ಶಿಷ್ಯರು ಶ್ರೀವ್ಯಾಸರಾಯರಿಗೆ ಗುರುಕಾಣಿಕೆಯಾಗಿ ಶ್ರೀಕೃಷ್ಣದೇವರಾಯನು ಅಬ್ಬೂರು ಗ್ರಾಮವನ್ನು 1523ರಲ್ಲಿ ದಾನ ಮಾಡಿದ ಒಂದು ಶಾಸನವಿದೆ ಈ ಸ್ಥಳಕ್ಕೆ ಮೊದಲು ವಯಾರಾಜ ಮಠ ಎಂದು ಕರೆಯುತ್ತಿದ್ದರು. ಶ್ರೀರಾಮ ತೀರ್ಥರು ಇಲ್ಲಿ ವಾಸಕ್ಕೆ ಬಂದ ಮೇಲೆ ಈ ಭಾಗದ ಹೆಸರು `ಅಪ್ಪಿಯಾರು’ (ತಮಿಳು) ಚೋಳ (ಕ್ರಿ.ಶ. 1060) ಆಯಿತು ಎಂದು ತಿಳಿದುಬರುತ್ತದೆ. ಇಲ್ಲಿ ಇತರೆ 8 ಸ್ವಾಮಿಗಳ ಬೃಂದಾವನವಿದೆ. ಅವುಗಳೆಂದರೆ ಶ್ರೀ ಲಕ್ಷ್ಮಿಧರತೀರ್ಥ ಬೃಂದಾವನ, ಶ್ರೀ ರಘುನಾಥತೀರ್ಥ, ಶ್ರೀ ಲಕ್ಷ್ಮಿನಾರಾಯಣತೀರ್ಥ, ಶ್ರೀ ಲಕ್ಷ್ಮಿಮನೋಹರತೀರ್ಥ, ಶ್ರೀ ಲಕ್ಷ್ಮಿಧರತೀರ್ಥ ಇವುಗಳು ಸುಸಂಬಂಧಗೊಳಿಸಿದವರು ಶ್ರೀ ಪುರುಷೋತ್ತಮನಂದತೀರ್ಥ ಎಂದು ತಿಳಿದುಬರುತ್ತದೆ. ಶ್ರೀ ವ್ಯಾಸತೀರ್ಥರ ವಿದ್ಯಾಗುರುಗಳಾದ ಶ್ರೀಪಾದರಾಯರು ಕನ್ನಡದ ಮೊದಲ ವಾಗ್ಗೇಯಕಾರರು. ಅವರು ಸಹ ಬಾಲ್ಯವೂ ಈ ಅಬ್ಬೂರಿನಲ್ಲಿ ಕಳೆದರೆಂಬ ಪ್ರತೀತಿ ಇದೆ ಈಗಲೂ ಈ ಸುತ್ತಿನ ಪ್ರದೇಶವು ತಪೆÇೀವನದಂತೆ ಕಾಣಿಸುತ್ತದೆ. ಭಾವುಕ ಭಕ್ತರಿಗೆ ಪುಣ್ಯಕ್ಷೇತ್ರವಾಗಿದೆ.
ಬೇವೂರು
ಬೇವೂರು ಒಂದು ಸಮಯದಲ್ಲಿ ಬಹಳ ಪ್ರಮುಖ ಜೈನಕೇಂದ್ರವಾಗಿತ್ತು. ಕ್ರಿ.ಶ.900ರಲ್ಲಿ ಈ ಜಾಗವನ್ನು `ನಿಂಬಗ್ರಾಮ’ ಎಂತಲೂ ಜೈನರು ಕರೆದಿದ್ದು ಉಂಟು ಆದರೆ ನಂತರದ ದಾಖಲಾತಿಗಳ ಪ್ರಕಾರ ಇದೇ ಜಾಗವನ್ನು ಕ್ರಿ.ಶ.1331ರಲ್ಲಿ ಹೊಯ್ಸಳರ ಬಲ್ಲಾಳರನ್ನು `ಬೇವೂರು’ ಎಂದು ಕರೆದನು ಮುಂದೆ ಇದೇ ಸ್ಥಳ ಮಣ್ಣಿನ ಮಡಿಕೆ ಮಾಡುವವರ ಸ್ಥಳವಾಗಿ ಹೆಸರು ಪಡೆಯಿತು. ನಂತರ ಸಣ್ಣ ಮಣ್ಣಿನ ಮಡಿಕೆ ಕಲಾಕೃತಿ ತಯಾರಿಕೆಗೆ ಕಾರಣವಾಗಿ `ಕುಡಿಕೆ ಬೇವೂರು ಆಯಿತು’. ಶ್ರೀ ತಿಮ್ಮಪ್ಪನ ಬೆಟ್ಟವು ಒಂದು ಕಾಲದಲ್ಲಿ ಜೈನರ ಕೇಂದ್ರವಾಗಿದ್ದು, ಅದನ್ನು `ಕೆರುಗುಂಡ’ ಎಂದು ಕರೆಯುತ್ತಿದ್ದರು ಎಂದು ಕ್ರಿ.ಶ.900ರ ಎರಡು ದಾಖಲೆಗಳು ಹೇಳುತ್ತವೆ ದಾಖಲೆಗಳ ಪ್ರಕಾರ ಹಲವು ಜೈನ ಮುನಿಗಳು ಅಂದರೆ ಸಿದ್ದಿ ಮತ್ತು ಚಂದ್ರಸೇನರು ಧರ್ಮಗುರುಗಳಾಗಿ ಆಳ್ವಿಕೆ ನಡೆಸಿದರು ಶಾಂತಿಸೇನ ಮತ್ತ ಅವನ ಗುರು ಶ್ರೀ ಸೇನರು ಸ್ನೇಹಿತರಾಗಿದ್ದರು ಎಂದು ಒಂದು ದಾಖಲೆ ಹೇಳುತ್ತದೆ. ನಂದಿ ಗ್ರಾಮದ ದಾಖಲೆ ತಿಳಿಸುತ್ತದೆ.
ಚಂದ್ರಸೇನನು ಈ `ಕಿರುಕುಂಡ’ ಬೆಟ್ಟದಲ್ಲಿ ಸಾಧು ರೂಪಕ್ಕೆ ತಂದನು ಎಂದು ತಿಳಿಸುತ್ತದೆ. ಆದರೆ ಒಂದು ಕಾಲದಲ್ಲಿ ಜೈನರ ಪವಿತ್ರ ಸ್ಥಳವಾಗಿದ್ದ ಯಾವುದೇ ಸ್ಮಾರಕವಾಗಲಿ ಕೀರ್ತಿ ಸ್ತಂಭಗಳಾಗಲಿ ಕಂಡುಬರುವುದಿಲ್ಲ ವೆಂಕಟ ಎಂಬುವನು ಕ್ರಿ.ಶ. 1579ರಲ್ಲಿ ದೇವಸ್ಥಾನವನ್ನು ತಿಮ್ಮಪ್ಪನ ಗುಡಿ ನಿರ್ಮಾಣದ ಬಗ್ಗೆ ದಾಖಲೆ ಮಾತ್ರ ಇದೆ.
ಇಗ್ಗಲೂರು
ಚನ್ನಪಟ್ಟಣ ತಾಲ್ಲೂಕು ಗಡಿ ಭಾಗದಲ್ಲಿ ಇರುವ ಈ ಸ್ಥಳವು ಐತಿಹಾಸಿಕವಾಗಿ ತನ್ನದೇ ಆದಂತಹ ಹಲವು ಅಮೂಲ್ಯವಾದ ದಾಖಲೆಯನ್ನು ಬಚ್ಚಿರಿಸಿಕೊಂಡಿದೆ. ಇಗ್ಗಲೋರು ಎಂಬ ಸ್ಥಳವನ್ನು ತಿಳಿಸುವ ಒಂದು ವೀರಗಲ್ಲು 12 ಶತಮಾನದ್ದು ಈ ಸ್ಥಳದ ಬಗ್ಗೆ ತಿಳಿಸುತ್ತದೆ. ಹಲವಾರು ಮಾಸ್ತಿಕಲ್ಲು ಮತ್ತು ವೀರಗಲ್ಲು ಹಾಗೂ ದೇವಸ್ಥಾನಗಳು ಇದೆ ಚೋಳ ಕಾಲಕ್ಕೆ ಸಂಬಂಧಿಸಿದ ಬಸವೇಶ್ವರ ದೇವಸ್ಥಾನವಿದೆ ಹಾಗೆಯೇ ವಿಜಯನಗರದ ಕಾಲಕ್ಕೆ ಸಂಬಂಧಿಸಿದ ಶ್ರೀ ಸೋಮೇಶ್ವರ ದೇವಸ್ಥಾನ ಶ್ರೀ ಸಿದ್ಧೇಶ್ವರ ದೇವಸ್ಥಾನ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಶ್ರೀ ಮಾರುತಿ ದೇವಸ್ಥಾನ ಬಳಿ ಇರುವ ಒಂದು ವೀರಗಲ್ಲು ಶಾಸನವು ಬುಕ್ಕರಾಯನ ಪ್ರಾರಂಭದ ಅವಧಿ ಮತ್ತು ಹರಿಯಪ್ಪ ಒಡೆಯರ್‍ರವರ ಆಳ್ವಿಕೆಯ ಬಗ್ಗೆ ಈ ಸ್ಥಳದ ಬಗ್ಗೆ ಹಲವು ಮಹತ್ವ ದಾಖಲೆಯನ್ನು ಒದಗಿಸುತ್ತದೆ. ಇಲ್ಲಿನ ಮತ್ತೊಂದು ಶಾಸನವು ಹೊಯ್ಸಳ ಕಾಲಕ್ಕೆ ಸೇರಿದ್ದಾಗಿದ್ದು ಕ್ರಿ.ಶ.1176 ಪ್ರಕಾರ ಹಲವು ನಾಯಕರು ಯುದ್ಧದಲ್ಲಿ ಸತ್ತರೆಂಬ ವಿಚಾರವನ್ನು ತಿಳಿಸುತ್ತದೆ ಒಂದು ಕಾಲದಲ್ಲಿ ರಾಜಕೀಯವಾಗಿ ಮಹತ್ವ ಪಡೆದಿದ್ದ ಸ್ಥಳವಾಗಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ.
ಗರಕಹಳ್ಳಿ
ಗರಕಹಳ್ಳಿಗೆ ಒಂದು ಕಾಲದಲ್ಲಿ `ದೇವರಾಯಪುರ’ವೆಂದು ಹೆಸರಿತ್ತು ಎಂದು ಕ್ರಿ.ಶ.1666 ದೇವರಾಜ ಒಡೆಯರ್‍ರವರ ಮಗ `ದೇವರಾಜ ಮಹಿಪಾಲರು’ ಈ ಊರನ್ನು ಅಗ್ರಹಾರವಾಗಿ ಮಾಡಿದ್ದಾರೆಂದು ಒಂದು ಶಿಲಾಶಾಸನದ ಪ್ರಕಾರ ತಿಳಿಯುತ್ತದೆ. ಶ್ರೀ ಕಣ್ಣೇಶ್ವರ ದೇವಾಲಯವು ಈ ಗ್ರಾಮದಲ್ಲಿ ಇದ್ದು ಹಿಂದೆ ಇಲ್ಲಿ ನೇರಳೆ ಮರಗಳ ಗುಂಪು ಇದ್ದುದರಿಂದ `ಜಂಬೂ ಕ್ಷೇತ್ರವೆಂದು’ ಕರೆಯುತ್ತಿದ್ದರು ಎಂದು ತಿಳಿಯುತ್ತದೆ. ಶ್ರೀ ಸಿದ್ಧೇಶ್ವರ ದೇವಾಲಯವು ಇದ್ದ ಚಿಕ್ಕ ಪುಟ್ಟ ಬೆಟ್ಟಗಳಿಂದ ಕೂಡಿದ ಇತಿಹಾಸ ಮಹತ್ವ ಪಡೆದ ಸ್ಥಳವಾಗಿತ್ತು ಎಂದು ತಿಳಿದು ಬರುತ್ತದೆ.
ನುಣ್ಣೂರು
ಈ ಊರಿನಲ್ಲಿ ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ಶ್ರೀ ವೈದ್ಯೇಶ್ವರ ದೇವಾಲಯವು ಇದ್ದು ಈ ಮಂದಿರದ ಗೋಡೆಯ ಒಳಭಾಗದಲ್ಲಿ ಪ್ರಚಾರಕ್ಕೆ ಬಾರದ ಲಿಪಿಯೊಂದರ ಶಾಸನವು ಕಂಡುಬರುತ್ತದೆ ಈ ಸ್ಥಳದಲ್ಲಿ  ಹಲವಾರು ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಕಂಡುಬರುತ್ತವೆ. ಅನತಿ ದೂರದಲ್ಲೇ `ಸವಣಪ್ಪನ ಗುಡ್ಡೆ’ ಎಂಬ ಗುಡ್ಡದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ ಶ್ರವಣನ ದಿಗಂಬರ ಮೂರ್ತಿಯನ್ನು ನೋಡಬಹುದಾಗಿದೆ. ಒಂದು ಕಾಲದಲ್ಲಿ ಮಲ್ಲಿಕಾಫರ್ ದಂಡೆಯಾತ್ರೆಯ ಸಮಯದಲ್ಲಿ ಸಂಪೂರ್ಣವಾಗಿ ನಾಶ ಹೊಂದಿದ್ದ ಈ ಜೈನ ಕೇಂದ್ರದ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳು ಸಿಗುವುದಿಲ್ಲ 15ನೇ ಶತಮಾನಕ್ಕಿಂತ ಹಿಂದೆ ನಡೆದ ಘಟನೆ ಆಗಿರಬಹುದೆಂದು ಊಹಿಸಲಾಗಿದೆ. ಇಂದಿಗೂ ಈ ಸ್ಥಳದಲ್ಲಿ ಮಕ್ಕಳ ಸಂತಾನಫಲ ಬಯಕೆ ಇರುವವರು ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸುವ ಪದ್ಧತಿಯು ಕಂಡುಬರುತ್ತದೆ.
ಹೀಗೆ ಚನ್ನಪಟ್ಟಣ ತಾಲ್ಲೂಕು ಹಲವಾರು ಐತಿಹಾಸಿಕ ವಿಚಾರಗಳನ್ನು ಐತಿಹ್ಯಗಳನ್ನು ತನ್ನ ಕಾಲಗರ್ಭದಲ್ಲಿ ಹುದುಗಿಸಿಕೊಂಡು ಮುಂದಿನ ಸಂಶೋಧಕರಿಗೆ ಸಂಶೋಧನೆ ಮಾಡಲು ಪ್ರೇರಣೆಯ ಕಣಜವಾಗಿದೆ ಎಂದೆನಿಸುತ್ತದೆ.

 ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೃಷ್ಣಾಪುರ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ-571501.

Tuesday, July 8, 2014

ಧಾರವಾಡ ತಾಲೂಕಿನ ಸ್ಥಳ ನಾಮಗಳು ಶಾಸನಗಳಲ್ಲಿ



ಧಾರವಾಡ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು

ವಿರೂಪಾಕ್ಷಗೌಡ ಪಾಟೀಲ

ಧಾರವಾಡ ತಾಲ್ಲೂಕು ಮಲೆನಾಡು, ಅರೆಮಲೆನಾಡು (ಗಡಿನಾಡು) ಮತ್ತು ಬಯಲುನಾಡು ಭೂ ಪ್ರದೇಶವನ್ನು ಹೊಂದಿದ ಸ್ಥಳೀಯ ಶಾಸನಗಳ ಆಧಾರದ ನೆಲೆಗಟ್ಟಿನ ಮೇಲೆ ‘ಧಾರವಾಡ ತಾಲೂಕಿನ ಸ್ಥಳನಾಮಗಳ ಅಧ್ಯಯನ’ ಮಾಡಲಾಗಿದೆ. ಸಾಮಾನ್ಯವಾಗಿ ಊರ ಹೆಸರುಗಳಿಗೆ ಮೂರು ಬಗೆಯ ನಿಷ್ಪತ್ತಿಗಳಿರುವುದು ಕಂಡುಬರುತ್ತದೆ. 1) ಪಾಮರ ನಿಷ್ಪತ್ತಿ 2) ಪಂಡಿತ ನಿಷ್ಪತ್ತಿ 3) ನಿಜ ನಿಷ್ಪತ್ತಿ. ಉದಾಹರಣೆಗೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಕುರಿತು ‘ಅಮೀನ್’ ಹೆಸರಿನ ಮುಸಲ್ಮಾನನೊಬ್ಬ ಬಾವಿ ಕಟ್ಟಿಸಿದ ಕಾರಣ ‘ಅಮ್ಮಿನ್‍ಬಾವಿ’ ಹೆಸರು ಬಂದಿತೆನ್ನುತ್ತಾರೆ. ಇನ್ನು ಕೆಲವರು ಅಮ್ಮನವರ ಹೆಸರಿನ ಜೈನ ಪದ್ಮಾವತಿ ಯಕ್ಷಿ ಹೆಸರಿನಿಂದಾಗಿ ಅಮ್ಮನವರಬಾವಿ>ಅಮ್ಮಿನಬಾವಿ ಆಗಿದೆಂದು ಹೇಳಲಾಗುತ್ತದೆ. ಇದು ಮುಸ್ಲಿಂ ಮತ್ತು ಜೈನ ಇವೆರಡು ಜಾತಿಯವರು ಆ ಊರಿನ ಮೇಲೆ ತಮ್ಮ ತಮ್ಮ ಹಕ್ಕು ಸಾಧಿಸಲು ಪ್ರಯತ್ನಿಸಿದ ಬಗೆಯನ್ನು ತಿಳಿಸುತ್ತದೆ. ಮೂಲತಃ ಇವೆರಡು ಪಾಮರ ನಿಷ್ಪತ್ತಿಗಳಾದರೂ ‘ಅಮೀನ್’ ಎಂಬ ಮುಸ್ಲಿಂರದು ಪಾಮರ ನಿಷ್ಪತ್ತಿ ಎಂದೂ, ‘ಅಮ್ಮನವರದು’ ಎಂಬ ಜೈನರ ಹೇಳಿಕೆಯು ಪಂಡಿತ ನಿಷ್ಪತ್ತಿ ಎನಿಸುತ್ತದೆ. ಇವೆರಡಕ್ಕಿಂತಲೂ ನಿಜ ನಿಷ್ಪತ್ತಿ ಬೇರೆನೇ ಆಗಿರುತ್ತದೆ. ಅಮ್ಮಯ್ಯನೆಂಬುವವನು ಭಾವಿಯನ್ನು ಕಟ್ಟಿಸಿದ್ದರ ನಿಮಿತ್ತ ‘ಅಮಿನಭಾವಿ’ ಹೆಸರು ಬಂದಿದೆಂದು ತಿಳಿದುಬರುತ್ತದೆ.1
ಆದ್ದರಿಂದ ಶಾಸನದಲ್ಲಿ ಅಮ್ಮಯನ ಬಾವಿ2, ಅಂಮೆನ ಬಾವಿ3 ಎಂಬ ರೂಪಗಳು ದೊರೆಯುತ್ತವೆ.  ಕಾಲಗರ್ಭದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಹೊಂದುತ್ತಾ ಸವಕಳಿರೂಪದಲ್ಲಿ ನಮ್ಮ ಮುಂದೆ ಚಲಾವಣೆಯ ರೂಪದಲ್ಲಿರುವ ಸ್ಥಳನಾಮಗಳನ್ನು ಶಾಸನದ ಹಿನ್ನೆಲೆಯಲ್ಲಿ ಗಮನಿಸಿ ಅಲ್ಲಿಯ ಮೂಲರೂಪವನ್ನು ಗುರುತಿಸಿ ಅದರಿಂದ ಅಲ್ಲಿಯು ಸಾಂಸ್ಕøತಿಕ ಮತ್ತು ಭೌಗೋಳಿಕ ಸಂಗತಿಗಳನ್ನು ಅರಿಯಬಹುದು. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನಗಳಲ್ಲಿ ದಾಖಲೆಯಾದ ಸ್ಥಳನಾಮಗಳನ್ನು ನಿಸರ್ಗವಾಚಿ ಮತ್ತು ಸಾಂಸ್ಕøತಿಕವಾಚಿ ಸ್ಥಳನಾಮಗಳೆಂದು ವಿಂಗಡಿಸಿಕೊಂಡು ವಿವೇಚಿಸಲಾಗಿದೆ.
1. ನಿಸರ್ಗವಾಚಿ ಸ್ಥಳನಾಮಗಳು:
ಮಾನವ ನಿಸರ್ಗದಲ್ಲಿ ಸಹಜವಾಗಿ ಬದುಕುತ್ತಿರುವಾಗ ಅಲ್ಲಿಯ ನೈಸರ್ಗಿಕ ಸ್ಥಿತಿಯನ್ನೇ ಹೆಸರಿಸಿಕೊಂಡು ತನ್ನ ವಸತಿಸ್ಥಳಗಳಿಗೆ ಹೆಸರಿಟ್ಟು ಕರೆದ. ಇದು ವಸತಿ ಸ್ಥಳಗಳಿಗೆ ಹೆಸರಿಡುವ ಮೊದಲ ಹಂತ. ಆಗ ನೈಸರ್ಗಿಕ ಅನ್ವರ್ಥಕ ನಾಮಗಳ ಬಳಕೆ ಸಹಜವಾಗಿತ್ತು. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನೋಕ್ತ ನಿಸರ್ಗವಾಚಿ ಸ್ಥಳನಾಮಗಳು ಇಂತಿವೆ.
‘ನರೇಂದ್ರ’ದ ಮೂಲ ಹೆಸರು ಕುಂದೂರು’4. ಕುಂದ+ಊರು=ಕುಂದೂರು ಅಂದರೆ ಬೆಟ್ಟದ ಮೇಲಿರುವ ಊರು. ಅದು ಪಲಸಿಗೆ 12,000 ನಾಡಿನ 500ರ ವಿಷಯವಾಗಿತ್ತು (500 ಇದೊಂದು ಆಡಳಿತ ಕೇಂದ್ರ). 12 ಶತಮಾನದ ನಂತರದಲ್ಲಿ ಕುಂದೂರು ನರೇಂದ್ರವಾಗಿ ಪರಿವರ್ತನೆಗೊಂಡಿತು. ಪ್ರಾಯಶಃ ಆಡಳಿತದವರು, ಅರಸ ಸಂಬಂಧಿಗಳು ಅಲ್ಲಿ ವಾಸವಾಗಿರುವುದರಿಂದ ಆಡಳಿತಗಾರರು ಮತ್ತು ಅರಸರು ದೇವತೆಗಳೆಂಬ ಮಧ್ಯಯುಗದ ಇತಿಹಾಸ ಕಲ್ಪನೆಯಂತೆ ನರೇಂದ್ರ ಎಂಬ ಹೆಸರು ಬಂದಿದೆ. ‘ಮುಗದ’ ಗ್ರಾಮನಾಮದ ಮೂಲರೂಪ ‘ಮುಗುಂದ’5. ಮೂರು+ಗುಂದ=ಮೂರುಗುಂದ> ಮುಗುಂದ> ಮುಗದ ಸೌಲಭ್ಯಾಕಾಂಕ್ಷೆಯಿಂದ ಬಿಂದು ಲೋಪವಾಗಿದೆ. ಮುಗುದ ಮೂರು ಬೆಟ್ಟಗಳ ಮೇಲಿದ್ದ ಊರೆಂಬುದನ್ನು ಅದು ಸಾಬಿತುಪಡಿಸುತ್ತದೆ. ‘ನಿಗದಿ’ ಗ್ರಾಮದ ಮೂಲರೂಪ ‘ನಿಗುಂದೆ’6 ನೀಳ+ಗುಂದೆ = ನೀಳ್‍ಗುಂದೆ> ನೀಗುಂದೆ> ನಿಗುಂದೆ> ನಿಗಂದೆ> ನಿಗದೆ> ನಿಗದಿ ಆಗಿದೆ. ಇಲ್ಲಿಯೂ ಸೌಲಭ್ಯಾಕಾಂಕ್ಷೆಯಿಂದ ಬಿಂದು ಲೋಪವಾಗಿದೆ. ಇದು ನೀಳ್ ಅಂದರೆ ನೀಡಿದಾದ ಬೆಟ್ಟವನ್ನು ಹೊಂದಿತ್ತೆಂದು ಹೇಳುತ್ತದೆ. ಮನಗುಂಡಿ ಗ್ರಾಮನಾಮದ ಮೂಲರೂಪ ಮಣಿಗುಂದ.7 ಮಣಿ+ಕುಂದ= ಮಣಿಕುಂದ> ಮಣಿಗುಂದ> ಮನಿಗುಂಡ > ಮನಿಗುಂಡಿ >ಮನಗುಂಡಿ ಆಗಿದೆ. ‘ಮಣಿ’ ಖನಿಜ ಲವಣಾಂಶಗಳನ್ನು ಉಳ್ಳ ಬೆಟ್ಟವನ್ನು ನೆನಪಿಸುತ್ತದೆ. ಅಥವಾ ಅದು ಮುತ್ತು, ರತ್ನ, ಮಣಿ-ಮಾಣಿಕ್ಯಗಳ ವ್ಯಾಪಾರದ ಕೇಂದ್ರ ನೆಲೆಯಾಗಿತ್ತೆಂದು ಅರ್ಥೈಸಲಿಕ್ಕೆ ಸಾಧ್ಯವಿದೆ.
‘ಗರಗ’ ಗ್ರಾಮದ ಮೂಲ ಹೆಸರು ‘ಬೆಳೊಟ್ಟಿಗೆ’8, ಅದು ಬೆಳ್+ಒಟ್ಟೆ+ಕೆಯ್= ಬೆಳೊಟ್ಟಿಕೆಯ್> ಬೆಳೊಟ್ಟಿಗೆ> ಬೆಳ್ಳಿಟ್ಟಿಗೆ ಎಂದಾಗಿತ್ತು. ಒಟ್ಟೆ ಅಂದರೆ ಕಾಡತುತ್ತಿ ಗಿಡ ಎಂಬ ಸಸ್ಯಮೂಲದ ಹೆಸರಾಗಿದೆ. ಅದು ಬಿಳಿ ಕಾಡತುತ್ತಿ ಆಗಿರುವುದರಿಂದ ಬೆಳೊಟ್ಟಿಗೆ ಎಂಬ ಹೆಸರನ್ನು ಹೊಂದಿದೆ. ಅದು ನಂತರದಲ್ಲಿ ಗರಗ ಎಂಬ ಹೆಸರನ್ನು ಪಡೆದುಕೊಂಡಿದೆ. ‘ಬಾವಿಹಾಳ’ ಮೂಲತಃ ಹಲ್ಗುಂಡಿ.9 ಹುಲ್ಲು+ಗುಂಡಿ = ಹಲ್ಗುಂಡಿ. ನಂತರದಲ್ಲಿ ಬಾವಿಹಾಳ (ಬಾವಿ+ಪಾಳ್ಯ) ಎಂಬ ಪರಿವರ್ತನೆ ನಾಮವನ್ನು ಹೊಂದಿದೆ. ನುಗ್ಗಿಯಹಳ್ಳಿ10 ನುಗ್ಗಿ ಸಸ್ಯವನ್ನು ನೆನಪಿಸುತ್ತದೆ. ನುಗ್ಗಿಯ+ಹಳ್ಳಿ= ನುಗ್ಗಿಹಳ್ಳಿ ಈ ಗ್ರಾಮ ಕೆರೆಯನ್ನು ಹೊಂದಿದಾಗ ಉತ್ತರ ಪದ ಹಳ್ಳಿಯಿಂದ ‘ಕೆರೆ’ ಪದಕ್ಕೆ ಬದಲಾಗಿ ನುಗ್ಗಿಕೆರೆ11 ಎಂಬ ನಾಮವನ್ನು ಹೊಂದಿದೆ. ಮುಗಳಿ ನಾಮವು ಒಂದು ಜಾತಿಯ ಮುಳ್ಳು ಮರವನ್ನು ಸೂಚಿಸುತ್ತದೆ. ಇಂದಿನ ದೇವರ ಹುಬ್ಬಳ್ಳಿ ಮೂಲತಃ ಹುಪ್ಪವಳ್ಳಿ.12 ಅದು ಪುಷ್ಟಪಳ್ಳಿ> ಪುಪ್ಪವಳ್ಳಿ> ಹುಪ್ಪವಳ್ಳಿ ಆಗುವ ಸಾಧ್ಯತೆ ಇದೆ. ನಂತರದಲ್ಲಿ ಹುಬ್ಬವಳ್ಳಿ> ಹುಬ್ಬಳ್ಳಿ ಆಗಿದೆ. ಸಮೀಪದಲ್ಲಿ ಮತ್ತೊಂದು ಹುಬ್ಬಳ್ಳಿ ಇದ್ದುದರಿಂದ ದೇವರ ಎಂಬ ವಿಶೇಷಣವನ್ನು ಹೊಂದಿ ದೇವರಹುಬ್ಬಳ್ಳಿ ಆಯಿತು. ‘ನವಲೂರು’ ಮೂಲತಃ ನವಿಲೂರು.13 ನವಿಲುಗಳನ್ನು ಹೊಂದಿರುವ ಊರು. ನವಿಲೂರು> ನವಲೂರು ಆಗಿದೆ. ನೀರುಸಾಗರ14 (ನೀರು+ ಸಾಗರ) ಬೃಹತ್ ನೀರನ್ನು ಹೊಂದಿರುವ ಸ್ಥಳವಾಗಿದೆ. ಹಳ್ಳವನ್ನು ಹೊಂದಿರುವ ಊರಿಗೆ ಹಳ್ಳಂಗೆರೆ15 >ಹಳ್ಳಿಗೇರಿ ಎಂದು ಕರೆಯಲಾಗಿದೆ. ‘ಪೆಗ್ಗೆರೆ’16ಯು> ಹೆಗ್ರ್ಗೆರೆ> ಹಿರಿಕೆರೆ ಆಗಿದೆ.
2. ಸಾಂಸ್ಕøತಿಕವಾಚಿ ಸ್ಥಳನಾಮಗಳು:
ವಸತಿ ಸ್ಥಳನಾಮಗಳು ನಮ್ಮ ಪೂರ್ವಿಕರ ಆಚಾರ-ವಿಚಾರ ಸಂಪ್ರದಾಯ, ನಂಬಿಕೆ, ವೃತ್ತಿ ಇತ್ಯಾದಿಯಾಗಿ ಅವರ ಜೀವನ ವಿಧಾನವನ್ನು ತಿಳಿಸುತ್ತವೆ. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನೋಕ್ತ ಸ್ಥಳನಾಮಗಳಲ್ಲಿ ವ್ಯಕ್ತಿವಾಚಿ, ಜನಾಂಗವಾಚಿ, ಐತಿಹಾಸಿಕವಾಚಿ, ದೈವವಾಚಿ, ಮುಂತಾದ ಬಗೆಯ ಸ್ಥಳನಾಮಗಳಿರುವುದನ್ನು ಗುರುತಿಸಬಹುದಾಗಿದೆ.
‘ಅಮ್ಮಿನಬಾವಿ’ ಗ್ರಾಮದ ಮೂಲನಾಮ ‘ಅಮ್ಮಿನ ಬಾವಿ’17 ಅದರ ನಿಷ್ಪತ್ತಿ ಅಮ್ಮಯ್ಯನಬಾವಿ (ಅಮ್ಮಯ್ಯನ+ ಬಾವಿ)> ಅಮ್ಮಯನಬಾವಿ> ಅಂಮ್ಮೆನಬಾವಿ> ಅಮ್ಮಿನಬಾವಿ ಎಂದಾಗಿದೆ ಅಂದರೆ ಅಮ್ಮಯ್ಯ ಕಟ್ಟಿಸಿದ ಬಾವಿ ಅಮ್ಮಿನಬಾವಿ ಎಂದಾಗಿದೆ. ಶಿಂಗನಳ್ಳಿ ‘ಸವಣನಪಳ್ಳಿ’18 ಆಗಿತ್ತು. ಸವಣನ+ಪಳ್ಳಿ= ಸವಣನಪಳ್ಳಿ> ಸವಣನಳ್ಳಿ > ಸಂಗವಳ್ಳಿ > ಶಿಂಗನಳ್ಳಿ. ಇದು  ಇಂದು ಮೌಖಿಕರೂಪದಲ್ಲಿ ಶಿಗನಹಳ್ಳಿ ಆಗಿದೆ. ಇದು ಜೈನಯತಿಯಾದ ಸವಣನನ್ನು ನೆನಪಿಸುತ್ತದೆ. ಸಿದ್ಧಾಪುರದ ಮೂಲ ಹೆಸರು ‘ಪೊಸವೊಳಲ’,19 ಪೊಸ+ಪೊಳಲ್= ಪೊಸವೊಳಲ್ ಪ>ಹ ಕಾರವಾದ ಕಾಲಘಟ್ಟದ ಊರು. ಆಗ ಹೊಸ ಊರಾಗಿದ್ದ ಇದು ನಂತರದಲ್ಲಿ ‘ಸಿದ್ಧಾಪುರ’ವಾಗಿ ಬದಲಾವಣೆಗೊಂಡಿದೆ. ಅದು ಸಿದ್ದಪ್ಪ+ಪುರ= ಸಿದ್ದಪ್ಪಪುರ> ಸಿದ್ದಾಪುರವೆಂದು ವ್ಯಕ್ತಿನಾಮವಾಗಿ ಬದಲಾವಣೆಗೊಂಡಿರಬಹುದು. ತೇಗೂರು ಮೂಲತಃ ‘ಕೊಳನೂರು’20 ಎಂಬ ಹೆಸರನ್ನು ಹೊಂದಿತ್ತು. ಕೊಳನ+ಊರು = ಕೊಳನೂರು ಆಗಿದೆ. ಇದು ಕೊಳನ ಎಂಬ ವ್ಯಕ್ತಿನಾಮದ ಹಿನ್ನೆಲೆಯಲ್ಲಿ ಬಂದಿದೆ. ನಂತರದಲ್ಲಿ ತೇಗೂರು ಎಂಬ ಪರಿವರ್ತನ ನಾಮವನ್ನು ಹೊಂದಿದೆ. ತೇಗ+ಊರು=ತೇಗೂರು ತೇಗಿನ ಮರಗಳು ಯಥೇಚ್ಚವಾಗಿ ಬೆಳೆದಿದ್ದರಿಂದ ಈ ಹೆಸರು ಬಂದಿದೆ.
‘ಧಾರವಾಡ’ದ ಮೂಲ ರೂಪ ‘ದಾರವಾಡ’.21 ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು 1403ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.1117 ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ. ಇದಕ್ಕೆ ಸಹಾಯಕವಾಗಿ ಕ್ರಿ.ಶ.1125 ನರೇಂದ್ರ ಮತ್ತು 1148 ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ 1403ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.
ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕøತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.  ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕøತ ಭೂಯಿಷ್ಠವಾಗಿ ಇಡುವುದು ಅಸಂಭವ. ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ.
ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ. ‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು. ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’.22 ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕøತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ
‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ.
ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ. ‘ಅಳ್ನಾವರ’ ಮೂಲತಃ ಅಣಿಲಾಪುರ.23 ಅಣಿಲಾ+ ಪುರ=ಅಣಿಲಾಪುರ> ಅಳಣಾಪೂರ> ಅಳ್ನಾವಾರ ಆಗಿದೆ. ಇಲ್ಲಿ ಪೂರ್ವಪದದ ಅಂತ್ಯಾಕ್ಷರ ‘ಲಾ’ ಇರುವುದರಿಂದ ಇದೊಂದು ಸ್ತ್ರೀವಾಚಿನಾಮವಾಗಿದೆ. ‘ಕನಕೂರು’ ‘ಕನಕಾಪುರ’24ವಾಗಿತ್ತು. ಕನಕಾ+ಪುರ= ಕನಕಾಪುರ > ಕನಕೂರ ಅಗಿದೆ. ಕನಕಾ ಸ್ತ್ರೀನಾಮವಾಗಿದ್ದು ಇದು ಊರಿನ ಗ್ರಾಮದೇವತೆ ಕನಕಮ್ಮ ಗ್ರಾಮದೇವತೆಯಿಂದ ಬಂದಿರುವಂತಹದ್ದಾಗಿರಬಹುದು. ಬೊಮ್ಮರಸಿಕೊಪ್ಪ ‘ಬಮ್ಮರಸಿ ಕೊಪ್ಪ’25ವಾಗಿತ್ತು. ಬಮ್ಮಅರಸಿ+ಕೊಪ್ಪ= ಬಮ್ಮರಸಿಕೊಪ್ಪ> ಬೊಮ್ಮರಸಿಕೊಪ್ಪ ಎಂದಾಗಿದೆ. ಇದು ಪ್ರಭುವರ್ಗದ ರಾಣಿಯನ್ನು ನೆನಪಿಸುವಂತಹದ್ದಾಗಿದೆ.
ಸತ್ತೂರು ‘ಶ್ರೋತ್ರಿಯೂರು’26 ಆಗಿತ್ತೆಂದು ಶಾಸನ ತಿಳಿಸುತ್ತದೆ. ಶ್ರೋತ್ರಿಯ + ಊರು = ಶ್ರೋತ್ರಿಯೂರು > ಸೊತ್ತಿಯೂರು > ಸತ್ತಿವೂರು27 > ಸತ್ತೂರು ಆಗಿದೆ. ಪ್ರಾಯಶಃ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಾಗ ಈ ಹೆಸರಿನಿಂದ ಈ ಗ್ರಾಮವನ್ನು ಕರೆದಿರಲು ಸಾಕು. ಕನ್ನಡ ಮೂಲದ ಹೆಸರೊಂದು ಸಂಸ್ಕøತ ರೂಪಕ್ಕೆ ತಿರುಗಿದ ಬಗೆ ಇದಾಗಿದ್ದರೂ ಇದರ ಮೂಲನಾಮ ತಿಳಿಯದು. ಹಂಗರಕಿ ಮೂಲರೂಪ ‘ಹಗರಗೆ’28 ಎಂದು ಶಾಸನದಲ್ಲಿದ್ದರೂ ಪ್ರಾಯಶಃ ಅದರ ಮೂಲರೂಪ ‘ಹಂಗರಗೆ’ ಇದ್ದಿರಬಹುದಾಗಿದೆ. ಹಾಗಾಗಿ ಹಂಗರ+ಕೆಯ್= ಹಂಗರಕೆಯ್> ಹಂಗರಗೆ> ಹಗರಗೆ> ಹಂಗರಕಿ ಆಗಿದೆ. ‘ಹಂಗರ’ ಇದೊಂದು ಜನಾಂಗ ನಾಮವಾಗಿದೆ. ಅದರಂತೆ ‘ಕುಂಬಾರ ಗೆರೆ’ ಕುಂಬಾರ ಜನಾಂಗವನ್ನು ನೆನಪಿಸುತ್ತ್ತಿದೆ.
ಅರಸರು ಉದಾತ್ತ ಕಾರ್ಯಕ್ಕಾಗಿ ಯಾರಿಗೋ ಅನುಭೋಗಿಸಲು ಕೊಟ್ಟ ಊರು ಭೋಗೂರು29> ಬೋಗೂರು ಆಗಿದೆ. ಮರೆವಾಡ ಗ್ರಾಮನಾಮ ‘ಮರೆಯ ವಾಡ’30 ಆಗಿತ್ತು. ಮರೆಯ+ಬಾಡ= ಮರೆಯಬಾಡ> ಮರೆಯ ವಾಡ> ಮರೆವಾಡ ಆಗಿದೆ. ಈ ಹಳ್ಳಿ ಭೌಗೋಳಿಕವಾಗಿ ಮರೆಯಲ್ಲಿ (ಕಾಣದ ಹಾಗೆ) ಇರುವುದರಿಂದ ಆ ಹೆಸರು ಬಂದಿದೆ. ‘ಬಾಡ’ ವಾರ್ಗಿಕನಾಮವು ಗ್ರಾಮನಾಮವಾಗಿ ಬಳಕೆಗೊಂಡಿದೆ. ಹೆಬ್ಬಳ್ಳಿ ಮೂಲರೂಪ ಪೆಬ್ರ್ಬಳ್ಳಿ31 ಪೆರ್+ಪಳ್ಳಿ= ಪೆರ್‍ಪಳ್ಳಿ> ಪೆರ್ಬಪಳ್ಳಿ> ಹೆಬ್ಬವಳ್ಳಿ> ಹೆಬ್ಬಳ್ಳಿ ಆಗಿದೆ. ಪೆರ್ ಅಂದರೆ ಹಿರಿಯ ಪ್ರಾಚೀನ ಕಾಲದಲ್ಲಿ ಇದು ದೊಡ್ಡಹಳ್ಳಿ ಆಗಿರಬಹುದಾಗಿದೆ.
‘ಕೌಲಗೇರಿ’32 ಗ್ರಾಮನಾಮವು ಕೌಲ>ಕವಲ+ಕೇರಿ= ಕೌವಲಗೇರಿ ಎಂದಾಗಿರಬಹುದು. ಇದು ‘ಕೌಲಗುಡ್ಡ, ಕೌಲಗಿ, ಕೌಲೂರುಗಳಂತೆ ಕೌಲಪಂಥದ ನೆಲೆಯಾಗಿರಬೇಕು (ಎಂ.ಎಂ. ಕಲಬುರ್ಗಿ, ಕನ್ನಡ ನಾಮವಿಜ್ಞಾನ-86) ಅಥವಾ ಕವಲದಾರಿಯನ್ನು ನೆನಪಿಸುವ ನೆಲೆಗಟ್ಟಿನಲ್ಲಿ ಬಳಕೆಗೊಂಡ ಪದವಾಗಿರಬೇಕು.
ಧಾರವಾಡ ತಾಲೂಕಿನಲ್ಲಿರುವ ಅಮ್ಮಿನಬಾವಿ, ದೇವರಹುಬ್ಬಳ್ಳಿ, ನವಲೂರು, ಬಾಡ, ಕನಕೂರು, ಮನಗುಂಡಿ ಇವು ಪ್ರಾಚೀನ ಕಾಲದಲ್ಲಿ ಅಗ್ರಹಾರಗಳಾಗಿದ್ದವು. ಅದರಂತೆ ಕುಂದೂರ (ನರೇಂದ್ರ)-500, ಮುಗದ-30 ಇವು ಆಡಳಿತದ ಕೇಂದ್ರಗಳಾಗಿದ್ದವು. ಹೀಗೆ ಒಟ್ಟಾರೆ ಧಾರವಾಡ ತಾಲೂಕಿನ ಪೂರ್ವ ಇತಿಹಾಸವನ್ನು ತಿಳಿಯಲು ಅಲ್ಲಿಯ ಸ್ಥಳನಾಮಗಳು ಸಹಾಯಕವಾಗಿ ಬಂದಿರುವುದು ವಿಶೇಷ.
[ಈ ಲೇಖನದ ಲೇಖಕರು ಮತ್ತು ವಿಳಾಸ ಖಚಿತವಾಗಿ ತಿಳಿಯದು. ಲೇಖಕರು ತಮ್ಮ ಹೆಸರನ್ನು ಮತ್ತು ವಿಳಾಸವನ್ನು ನೀಡಿರುವುದೇ ಇಲ್ಲ. ಇ-ಮೇಲ್‍ನಲ್ಲಿ ವಿರೂಪಾಕ್ಷ ಎಂಬುವವರ ಕಡೆಯಿಂದ ಲೇಖನ ಬಂದಿರುತ್ತದೆ. ಆದ ಕಾರಣ ನಮ್ಮ ಗಮನಕ್ಕೆ ಬಂದ ಮಟ್ಟಿಗೂ ಸಂದೇಹವಾಗಿ ಲೇಖಕರ ಹೆಸರನ್ನು ಮತ್ತು ವಿಳಾಸವನ್ನು ಸೂಚಿಸಿದ್ದೇವೆ. -ಸಂ.]
ಆಧಾರಸೂಚಿ ಹಾಗೂ ಟಿಪ್ಪಣಿಗಳು
1. ಡಾ.ಎಂ.ಎಂ. ಕಲಬುರ್ಗಿ, ಕನ್ನಡ ನಾಮ ವಿಜ್ಞಾನ, ಪುಟ 54, 55.
2. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 2, ಅಮ್ಮಿನಬಾವಿ, ಕ್ರಿ.ಶ. 1071-72.
3. ಅದೇ, ನಂ. 9, ಅಮ್ಮಿನಬಾವಿ, ಕ್ರಿ.ಶ. 1547.
4. ಅದೇ, ನಂ. 39 ನರೇಂದ್ರ, ಕ್ರಿ.ಶ. 1125.
5. SII.ಘಿI-i-78, ಮುಗದ, ಕ್ರಿ.ಶ. 1045.
6. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 44, ನಿಗದಿ, ಕ್ರಿ.ಶ. 1111.
7. ಅದೇ, ನಂ. 51, ಮನಗುಂಡಿ, ಕ್ರಿ.ಶ. 1203.
8. ಅದೇ, ನಂ. 20, ಗರಗ, ಕ್ರಿ.ಶ. 1287.
9. SII.ಘಿಗಿ- 9, ಭಾವಿಹಾಳ, ಕ್ರಿ.ಶ. 1125.
10. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 51, ಮನಗುಂಡಿ, ಕ್ರಿ.ಶ. 1203.
11. ಅದೇ, ನಂ. 46, ನುಗ್ಗಿಕೇರಿ, ಸು, 18ನೇ, ಶತಮಾನ.
12. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 27, ದೇವರ ಹುಬ್ಬಳ್ಳಿ, ಕ್ರಿ.ಶ. 1206.
13. ಡಾ.ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 29, ಧಾರವಾಡ, ಸುಮಾರು 9ನೇ, ಶತಮಾನ.
14. SII.ಘಿಗಿ- 233, ಮನಗುಂಡಿ, ಕ್ರಿ.ಶ. 1203.
15. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 53, ಮನಗುಂಡಿ, ಕ್ರಿ.ಶ. 1203.
16. SII.ಘಿಗಿ-i- 78, ಮುಗದ, ಕ್ರಿ.ಶ. 1045.
17. SII.ಘಿI-ii- 121, ಅಮ್ಮಿನಬಾವಿ, ಕ್ರಿ.ಶ. 1071-72
18. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 39 ನರೇಂದ್ರ, ಕ್ರಿ.ಶ. 1125.
19. ಅದೇ, ನಂ. 66, ಸಿದ್ದಾಪುರ, ಕ್ರಿ.ಶ. 1120.
20. SII.ಘಿI-ii- 128, ತೇಗೂರ, ಕ್ರಿ.ಶ. 1082.
21. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 33, ಧಾರವಾಡ, ಕ್ರಿ.ಶ. 1117.
22. ಡಾ. ವ್ಹಿ.ಎಲ್. ಪಾಟೀಲ, ದೇಶಿ ಅವಲೋಕನ, ಪುಟ 77.
23. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 11, ಅಳ್ನಾವರ, ಕ್ರಿ.ಶ. 1081.
24. SII.ಘಿI-ii-154, ಕನಕೂರ, ಕ್ರಿ.ಶ. 1104.
25. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 36, ಧಾರವಾಡ, ಕ್ರಿ.ಶ. 1448.
26. ಡಾ. ಎಂ.ಎಂ. ಕಲಬುರ್ಗಿ, ನಾಮ ವಿಜ್ಞಾನ, ಪುಟ 79.
27. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 51, ಮನಗುಂಡಿ, ಕ್ರಿ.ಶ. 1203.
28. SII.ಘಿಗಿ- 230, ಬೋಕ್ಯಾಪುರ, ಕ್ರಿ.ಶ. 1163.
29. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 50, ಮದನಭಾವಿ, ಕ್ರಿ.ಶ. 1127.
30. ಅದೇ, ನಂ. 38, ನರೇಂದ್ರ, ಕ್ರಿ.ಶ. 1123.
31. ಅದೇ, ನಂ. 38, ನರೇಂದ್ರ, ಕ್ರಿ.ಶ. 1123.
32. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 39, ನರೇಂದ್ರ, ಕ್ರಿ.ಶ. 1125.

 ಕನ್ನಡ ಪ್ರಾಧ್ಯಾಪಕರು, ಅನುಗ್ರಹ, ನವೋದಯ ನಗರ, ಧಾರವಾಡ-580003.

Saturday, July 5, 2014

ಲಿಬರ್ಟಿ ಬೆಲ್‌

ಲಿಬರ್ಟಿ ಬೆಲ್‌

ಬಿಡುಗಡೆಯ ಸಂಕೇತವಾದ ಗಂಟೆ.

ಎಲ್ಲ ದೇಶಗಳಲ್ಲೂ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣವನ್ನು ದೇಶದ ಪ್ರಮುಖರು ಮಾಡುವುದು ಸಾಮಾನ್ಯ ಆಚರಣೆ. ಅಮೇರಿಕಾದ ಸ್ವಾತಂತ್ರ್ಯ ದಿನ ಜೂಲೈ ೪  ರಂದು. ಅಲ್ಲಿ ಎಲ್ಲರಂತೆ ಸಂಭ್ರಮದಿಂದ ಆಚರಿಸುವ ಜೊತೆಗೆ ಸ್ವಾತಂತ್ರ್ಯ ಬಂದ ಮೊದಲ ದಶಕದಲ್ಲಿ ರಾಜಧಾನಿಯಾಗಿದ್ದ ಫಿಲೆಡೆಲ್ಫಿಯಾದಲ್ಲಿ   ಹದಿಮೂರು ಯುವಜನರು ಶತಮಾನಗಳ ಇತಿಹಾಸವಿರುವ ಬೃಹತ್‌ ಗಂಟೆಯೊಂದನ್ನು ಸಾಂಕೇತಿಕವಾಗಿ ಬಾರಿಸುವರು. ಅಂದರೆ ಹತ್ತಿಯ ಬಿಳಿ ಕೈಗವಸು ಹಾಕಿದ ಕೈ ಬೆರಳುಗಳಿಂದ ಮೃದುವಾಗಿ ತಟ್ಟುತ್ತಾರೆ. ಇದು 1776 ರಿಂದ ಸತತವಾಗಿ ನಡೆದುಕೊಂಡುಬಂದ ಸಂಪ್ರದಾಯ. ಕಾರಣ ಅಮೇರಿಕಾ ಸ್ವತಂತ್ರಪಡೆದಾಗ ಮೊದಲು ಒಕ್ಕೂಟದಲ್ಲಿದ್ದ ಹದಿಮೂರು ರಾಜ್ಯಗಳ ಪ್ರತಿನಿಧಿಗಳು   ಆ ಘೋಷಣೆಗೆ ಸಹಿ ಹಾಕಿದ್ದರು. ಅವರ ವಂಶಸ್ಥರು  ಈ ಸಮಾರಂಭದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದ ಸಂಪ್ರದಾಯ. ಆದೂ ಅತಿಂಥಹ ಗಂಟೆಯಲ್ಲ. ಅಮೇರಿಕಾದ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ ನಂತರ ಸಮಾನತೆಯ ಸಂಕೇತವಾದ ಅಮೇರಿಕಾದಲ್ಲಿ ಮೂರು ದೊಡ್ಡ ಚಳುವಳಿಗಳಿಗೆ ಸ್ಪೂರ್ತಿಯಾದ ಹಾಗೂ ಜಗತ್ತಿನಾದ್ಯಂತದ ದಮನಿತರ ದನಿಯಾದ ಜಗತ್‌ಪ್ರಸಿದ್ದವಾದ ಲಿಬರ್ಟಿ ಬೆಲ್‌ .
ಲಿಬರ್ಟಿ ಬೆಲ್‌
. ಲಿಬರ್ಟಿಬೆಲ್‌ ನಿರ್ಮಾಣವಾದದ್ದು  ಅಮೇರಿಕಾ ಇನ್ನೂ ಬ್ರಿಟನ್‌ನ ವಸಾಹತುವಾಗಿದ್ದಾಗಲೇ. ಅಮೇರಿಕಾದಲ್ಲಿ ಪೆನ್ಸಿಲ್ವೇ‌ನಿಯಾ ಪ್ರಾಂತ್ಯದ ರಾಜಧಾನಿ ಫಿಲೆಡೆಲ್ಫಿಯಾದಲ್ಲಿ. ಈ ವಸಾಹ
ತು ಸ್ಥಾಪಿಸಿದವನು ಇಂಗ್ಲೆಂಡಿನ ವಿಲಿಯಂ ಪೆನ್‌. ಅವನು ಈ ಪ್ರದೇಶದಲ್ಲಿ ಆಡಳಿತ ಮತ್ತು ಕಾನೂನು ರಚನೆಯಲ್ಲಿ  ಜನಸಾಮಾನ್ಯರು ಪಾಲುಗೊಳ್ಳಲು ಹಾಗೂ  ಮುಕ್ತವಾದ ಧಾರ್ಮಿಕ ಆಚರಣೆಯ ಹಕ್ಕನ್ನು   ಅಮೇರಿಕಾ ಮೂಲನಿವಾಸಿಗಳೂ  ಸೇರಿದಂತೆ ಎಲ್ಲ ಜನರಿಗೂ ಅವಕಾಶ ನೀಡಿದ ಉದಾರವಾದಿ. ಅವನು ಸ್ಟೇಟ್‌ ಅಸೆಂಬ್ಲಿ ಸ್ಥಾಪಿಸಿದ್ದನು. ಅದಕ್ಕಾಗಿ 1701  ರಲ್ಲಿ ಒಂದು ಚಾರ್ಟರ್‌ ನ್ನು  ಹೊರಡಿಸಿದ್ದನು. ಅಲ್ಲಿನ ಪ್ರಾಂತೀಯ ಅಸೆಂಬ್ಲಿಯು 1751 ರಲ್ಲಿ   ಪೆನ್‌ನ ಚಾರ್ಟರ್‌ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅವನಿಗೆ ಗೌರವ ಸಲ್ಲಿಸಲು ಒಂದು ಸ್ಮಾರಕ ನಿರ್ಮಿಸಲು ನಿರ್ಧರಿಸಿತು. ಅದಕ್ಕಾಗಿ ಒಂದು ಬೃಹತ್‌ ಗಂಟೆಯ ನಿರ್ಮಾಣಕ್ಕಾಗಿ ಇಂಗ್ಲಂಡಿನ ವೈಟ್‌ಚಾಪೆಲ್‌ ಫೌಂಡ್ರಿಗೆ ಆದೇಶ ನೀಡಿದರು. ಗಂಟೆಯ ಮೇಲೆ Proclaim liberty throughout the land  unto  all  the inhabitants thereof “ ಎಂಬ ಬೈಬಲ್ಲಿನ ಒಂದು ವಾಕ್ಯವನ್ನು ಬರೆಸಲು ನಿರ್ಧರಿಸಿದರು. ಪ್ರಜಾತಂತ್ರವಾದಿ ವಿಲಿಯಂ ಪೆನ್‌ನಿಗೆ  ಈ ಬರಹವುಳ್ಳ  ಗಂಟೆ ಸೂಕ್ತವಾದ  ಸ್ಮಾರವಾಗಿತ್ತು. ಇಂಗ್ಲೆಂಡಿನಿಂದ1752ರಲ್ಲಿಯೇ ಗಂಟೆ ಬಂದರೂ ಅದನ್ನು  ಒಂದು ವರ್ಷದ ನಂತರ  ಅಸೆಂಬ್ಲಿ ಹಾಲ್‌ನ ಗೋಪುರದಲ್ಲಿ ಅಳವಡಿಸಲು ಯೋಚಿಸಿದ್ದರು ಅದನ್ನು 1753ರ ಮಾರ್ಚನಲ್ಲಿ ಮೊದಲ ಸಲ ಬಾರಿಸಿದಾಗಲೇ ಅದರ ನಾದ ಹಿತವಾಗಿಲ್ಲದಿರುವುದ ಕಂಡುಬಂದಿತು. ಅದರಲ್ಲಿ ಚಿಕ್ಕ ಸೀಳು ಕಾಣಿಸಿಕೊಂಡಿತ್ತು. ಅದು ತಯಾರಿಕೆಯ  ಅಥವ ಲೋಹಮಿಶ್ರಣದ ದೋಷ  ಇರಬಹುದೆಂದು ಕೊಂಡರು. ಅದನ್ನುಕರಗಿಸಿ ಮತ್ತೆ ಎರಕ ಹೊಯ್ಯಲು ಸ್ಥಳೀಯ ಕಂಚುಗಾರರಿಗೆ ನೀಡಿದರು. ಅದರ ಪೆಡಸುತನ ಕಡಿಮೆ ಮಾಡಲು ತುಸು ತಾಮ್ರ  ಸೇರಿಸಿ ಗಂಟೆ ತಯಾರಿಸಲಾಯಿತು. ಅದರ ನಾದವೂ ಹಿತವಾಗಿರಲಿಲ್ಲ. ಮತ್ತೆ ಅದನ್ನು ಕರಗಿಸಿ ಹೊಸದಾಗಿ ೨೦೮೦ ಪೌಂಡ್‌ ತೂಕದ  ಗಂಟೆ ನಿರ್ಮಿಸಿದರೂ  ತೃಪ್ತಿಕರವೆನಿಸಲಿಲ್ಲ. ಅದನ್ನೇ ಅಸೆಂಬ್ಲಿಯ ಗೋಪುರಕ್ಕೆ ಅಳವಡಿಸಿದರು.  ಹೊಸದೊಂದು ಗಂಟೆಯ ನಿರ್ಮಾಣ  ಮಾಡಿಸಿದರೂ ಅದರ ನಾದವೂ ಅಷ್ಟೇನೂ ತೃಪ್ತಿಕರವಾಗಿಲಿಲ್ಲ . ಈ ಗಂಟೆಯನ್ನು ಅಸೆಂಬ್ಲಿ ಹಾಲ್‌ಗಂಟೆ ಎನ್ನುತಿದ್ದರು. ಅದನ್ನು ಅಸೆಂಬ್ಲಿಯನ್ನು ಕರೆಯಲು,ವಿಶೇಷ  ಕಾನೂನು ರಚನೆ ಮಾಡುವಾಗ ಜನರನ್ನು ಸೇರಿಸಿ ಅಭಿಪ್ರಾಯ ಪಡೆಯಲು ಮತ್ತು ಅತಿಮುಖ್ಯ ಘೋಷಣೆ ಮಾಡುವಾಗ ಬಾರಿಸಲಾಗುತಿತ್ತು.
ಗಂಟೆಯ ಸದ್ದಿನಿಂದ ತೊಂದರೆಯಾಗುವುದೆಂದು ಆ ಪ್ರದೇಶಗಳ ಜನ ದೂರು ನೀಡಿದರೂ ಘಂಟಾವಾದನ ಮುಂದುವರಿದಿತ್ತು. ಬೆಂಜಮಿನ್‌ಫ್ರಾಂಕ್ಲಿನ್‌ ವಸಾಹತಿನ ಜನರ ಸಂಕಷ್ಟವನ್ನು ಪಾರ್ಲಿಮೆಂಟ್‌ಮುಂದೆ ನಿವೇದಿಸಲು ಬ್ರಿಟನ್‌ಗೆ ಹೋದಾಗ, ಆರನೆಯ ಜಾರ್ಜ ಸಿಂಹಾಸನವೇರಿದಾಗ, ಅತಿಮುಖ್ಯ ಕಾನೂನುಗಳಾದ ಶುಗರ್‌ ಆಕ್ಟ್‌ 1764  ಮತ್ತು   ಸ್ಟಾಂಪ್‌ಆಕ್ಟ್‌ 1765 ಜಾರಿಯಾಗುವ ಮುನ್ನ  ಗಂಟೆ ಬಾರಿಸಿದ್ದರು.
 ಅಮೇರಿಕಾದ ಸ್ವತಾಂತ್ರ್ಯಕ್ಕಾಗಿ ಹೋರಾಟ ನಡೆಸುವಾಗಲೂ. ಈ ಬೆಲ್‌ನ  ಪಾತ್ರ ಬಹಳ ಹಿರಿದು ಅದನ್ನು ಹೋರಾಟದ ಒಂದು ಪ್ರಮುಖ ಸಂಕೇತವಾಗಿ ಬಳಸಲಾಗಿತ್ತು.ಅಂತಿಮವಾಗಿ ಹೋರಟಕ್ಕೆ ಜಯ ಸಿಕ್ಕಿತು. ಸ್ವಾತಂತ್ರ್ಯ ಘೋಷಣೆಯನ್ನು 1776 ಜೂಲೈ 4 ರಂದು ಫಿಲೆಡೆಲ್ಫಿಯಾದಲ್ಲಿಯೇ ಮಾಡಲಾಯಿತು. ಆಗಲೂ ಗಂಟೆ ಬಾರಿಸಿ ಜನಸಮೂಹವನ್ನು ಸೇರಿಸಲಾಗಿತ್ತು. 
ಸ್ವಾತಂತ್ರ್ಯ ಘೋಷಣೆಗೆ ಸಹಿಹಾಕಿದ ಹದಿಮೂರುರಾಜ್ಯ ಪ್ರತಿನಿಧಿಗಳ ವಂಶಸ್ಥರು


ಸ್ವಾತಂತ್ರ್ಯ ಘೋಷಣೆಯ ದಾಖಲೆಗೆ ಅಂದು ಸಹಿಮಾಡಿದವರು ಹದಿಮೂರು ರಾಜ್ಯಗಳ ಪ್ರತಿನಿಧಿಗಳು. ಆ ಪ್ರಕ್ರಿಯೆಯನ್ನು ಪ್ರತಿ ವರ್ಷ ಪುನಾರವರ್ತಿಸಿ ಆಚರಿಸಲಾಗುತ್ತಿದೆ. ಅದರಲ್ಲಿ ಆಗ ಸಹಿ ಮಾಡಿದ 13 ಪ್ರತಿನಿಧಿಗಳ  ವಂಶಕ್ಕೆ ಸೇರಿದವರು ತಪ್ಪದೇ ಭಾಗವಹಿಸುವರು. ಅದರ ಜೊತೆಯಲ್ಲಿ ಮೊದಲ ಅಧ್ಯಕ್ಷ ಜಾರ್ಜ ವಾಷಿಂಗ್‌ಟನ್‌ ಜನ್ಮದಿನದಂದೂ ಗಂಟೆ ಬಾರಿಸುವ ಸಂಪ್ರದಾಯವಿತ್ತು. ಇದು ಕೊನೆಗೊಂಡುದುದು 1840 ರಲ್ಲಿ. ಅಂದು ಗಂಟೆಯನ್ನು ಬಾರಿಸಿದಾಗ ದೊಡ್ಡ ಸೀಳು ಬಿಟ್ಟು ದನಿ ಹೊರಡದಂತಾಯಿತು.  ಅಂದಿನಿಂದ ಅದನ್ನು  ಜತನವಾಗಿ ಇಡಲಾಗಿದೆ.
ಆದರೆ ಸೀಳು ಬಿಟ್ಟ ಮೇಲೆ ಅದರ ಪ್ರಾಧಾನ್ಯತೆ ಇನ್ನೂ ಹೆಚ್ಚಾಯಿತು. ಅಮೇರಿಕಾಕ್ಕೆ ಸ್ವಾತಂತ್ರ್ಯ ಬಂದರೂ ಸಮಾನತೆ ಇರಲಿಲ್ಲ. ವರ್ಣಬೇಧ ನೀತಿ ಯಿಂದಾಗಿ ಕಪ್ಪು  ಜನರು ಗುಲಾಮರಾಗಿದ್ದರು ಬಿಳಿ ಮತ್ತು ಕಪ್ಪು ಜನರ ಸಮಾಜದ ನಡುವಿನ ಅಪಾರ ಅಂತರದ ಸಂಕೇತ ಅದಾಗಿತ್ತು. ಗುಲಾಮಗಿರಿ ರದ್ದತಿಗಾಗಿ ಹೋರಾಡುವವರು ( 1861-1865 )ಗಂಟೆಯನ್ನು ಸಂಕೇತವಾಗಿ ಮಾಡಿಕೊಂಡರು. ಅದನ್ನು ಮೊದಲ ಬಾರಿಗೆ ಅದನ್ನು ಲಿಬರ್ಟಿ ಬೆಲ್‌ ಎಂದು ಕರೆದರು. ಅದೇ ಹೆಸರು ಶಾಶ್ವತವಾಗಿ ಉಳಿಯಿತು.
ಅಂತರ್‌ ಯುದ್ದದಲ್ಲಿ ಸಮಾನತೆ ಸಂಕೇತವಾದ ಗಂಟೆ





ಅಬ್ರಾಹಂ ಲಿಂಕನ್‌ಅಧ್ಯಕ್ಷರಾದ ಮೇಲೆ ಅಮಾನವಿಯ  ಗುಲಾಮಗಿರಿ ನಿರ್ಮೂಲನಾ ಕಾನೂನು ಜಾರಿಗೆ ತಂದರು. ಅದನ್ನು ವಿರೋಧಿಸಿವರು ದಕ್ಷಿಣದ  ರಾಜ್ಯಗಳು. ಅಲ್ಲಿನ ಬೃಹತ್‌ ಕಬ್ಬು, ತಮಬಾಕು,ಮತ್ತು ಹತ್ತಿಯ ಹೊಲಗಳಲ್ಲಿ ಕಪ್ಪುಜನರನ್ನು ಗುಲಾಮರಾಗಿ ದುಡಿಸಿಕೊಳ್ಳುತಿದ್ದರು. ಅವರು ಸ್ವತಂತ್ರರಾದರೆ ತಮ್ಮ ಹಿತಾಸಕ್ತಿಗೆ ಧಕ್ಕೆ ಬರುವುದೆಂದು  ಅವರು ಒಕ್ಕೂಟದಿಂದ ಬೇರೆಯಾದರು.ದೇಶದ ಐಕ್ಯತೆಗಾಗಿ ಯುದ್ಧ ಅನಿವಾರ್ಯವಾಯಿತು. ಆಗ ನಡೆದ ಅಂತರ್‌ಯುದ್ದದಲ್ಲಿ ಕೊನೆಗೆ ಉತ್ತರದವರು ಜಯಗಳಿಸಿದರು, ಗುಲಾಮಗಿರಿ ನಿರ್ಮೂಲವಾಯಿತು. ಅಮೇರಿಕಾದ ಜನತೆ ಪೂರ್ಣಅರ್ಥದಲ್ಲಿ ಸ್ವತಂತ್ರರಾದರು. ಆದರೆ ಅಂತರ್‌ ಯುದ್ಧದ  ಪರಿಣಾಮವಾಗಿ ಜನರ ಮನದಲ್ಲಿ ಕಹಿಭಾವನೆ ಉಳಿದಿತ್ತು ಅದರ ನಿವಾರಣೆಗಾಗಿ ಮತ್ತು ರಾಷ್ಟ್ರದ ಐಕ್ಯತೆಗಾಗಿ ಲಿಬರ್ಟಿ ಬೆಲ್‌ ರಾಷ್ಟ್ರಾದ್ಯಂತ ಸಂಚಾರ ಪ್ರಾಂಭಿಸಿತು.ಅದು1880ರ ಆದಿಭಾಗದಿಂದ ರಾಷ್ಟ್ರಾದ್ಯಂತ ಪ್ರದರ್ಶಿತವಾಗಿ ಐಕ್ಯತೆ ಮತ್ತು ಸಮಗ್ರತೆಯ ಸಂದೇಶ ಸಾರಿತು .ಎಲ್ಲ ದೊಡ್ಡ ನಗರಗಳಲ್ಲೂ ಲಿಬರ್ಟಿಬೆಲ್‌ ಪ್ರದರ್ಶಿಸಲಾಯಿತು. ನಂತರ ಲಿಬರ್ಟಿ ಹಾಲ್‌ನಲ್ಲಿ ಇಡಲಾಯಿತು.ಇದೂ ರಾಷ್ಟ್ರ ಧ್ವಜದಂತೆ ಐಕ್ಯತೆ, ಸಮಗ್ರತೆ ಮತ್ತು ಸ್ವಾತಂತ್ರ್ಯದ ಸಂಕೇತವಾಯಿತು..
ಲಿಬರ್ಟಿಬೆಲ್‌ನ ಪ್ರಭಾವ ಎಷ್ಟಾಯಿತೆಂದರೆ ಎಲ್ಲ ಹೋರಾಟಗಳಿಗೆ ಅದು ಸ್ಪೂರ್ತಿಯಾಯಿತು. ಅಮೇರಿಕಾ1776, ಜೂಲೈ4 ರಲ್ಲಿಯೇ ಸ್ವತಂತ್ರವಾದರೂ ಅನೇಕ ಶತಮಾನಗಳ ವರೆಗೆ ಮಹಿಳೆಯರಿಗೆ ಮತದಾನದ  ಹಕ್ಕುಇರಲಿಲ್ಲ. ಅವರ ಪಾತ್ರ ಅಡಿಗೆಮನೆಗೆ ಮೀಸಲು ಭಾವಿಸಲಾಗಿತ್ತು.ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಅವರನ್ನು ದೂರ ಇಡಲಾಗಿತ್ತು. ಅವರು ಒಂದು ರೀತಿಯಲ್ಲಿ ಎರಡನೆಯ ದರ್ಜೆಯಪ್ರಜೆಯಾಗಿದ್ದರು. ಈ ಅಸಮಾನತೆಯ ವಿರುದ್ಧ ಮಹಿಳೆಯರು 1915 ರಲ್ಲಿ  ಧನಿ ಎತ್ತಿದರು. ಅವರು ತೀವ್ರವಾಗಿ ಪ್ರತಿಭಟಿಸಿ  .ಚಳುವಳಿಗಿಳಿದರು. ಆಗಲೂ ಅವರಿಗೆ ಸ್ಪೂರ್ತಿ ನೀಡಿದ್ದು  ಲಿಬರ್ಟಿ ಬೆಲ್‌.
ಮಹಿಳಾಮತದಾನದ ಚಳುವಳಿಯಲ್ಲಿ ಬಳಕೆಯಾದ ಸದ್ದು ಮಾಡದ ಗಂಟೆ

 ಅದರ ಪ್ರತಿರೂಪ ಒಂದನ್ನು ನಿರ್ಮಿಸಿ ಗಂಟೆಯ ನಾಲಿಗೆಯನ್ನು ಸರಪಳಿಯಿಂದ ಒಂದು ಬದಿಗೆ ಬಂಧಿಸಿ ಚಳುವಳಿಯಲ್ಲಿ  ಸಾಂಕೇತಿಕವಾಗಿ ಬಳಸಲಾಯಿತು. ಕೊನೆಗೆ 1920ರಲ್ಲಿ ಸಂವಿಧಾನದ ೧೯ನೆಯ ತಿದ್ಮದುಪಡಿಯ ಮೂಲಕ ಮಹಿಳೆಯರಿಗೂ ಮತದಾನದ ಹಕ್ಕು ದೊರೆತಾಗ ಮತ್ತೆ ಗಂಟೆಯನ್ನು ಫಿಲೆಡೆಲ್ಫಿಯಾದಲ್ಲಿ ಮೊಳಗಿಸಲಾಯಿತು. ಹೀಗೆ ಅಮೇರಿಕಾದಲ್ಲಿ ದಬ್ಬಾಳಿಕೆಯವಿರುದ್ಧ ದನಿ ಎತ್ತುವ , ಬಿಡುಗಡೆ ಬೇಡುವ  ಎಲ್ಲ ಹೋರಾಟಗಳ ಸಂಕೇತವಾದ ಇದನ್ನು ಸ್ವಾತಂತ್ರ್ಯದ ಗಂಟೆ ಎಂದು ಅರ್ಥ ಪೂರ್ಣವಾಗಿ ಕರೆಯಲಾಗಿದೆ. ಇದನ್ನು ಅಲ್ಲಿನ ಲಿಬರ್ಟಿ ಹಾಲಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಮೇರಿಕಾದಲ್ಲಿ ಕಾನೂನಿನ ಹೊರತಾಗಿಯೂ ಜಾರಿಯಲ್ಲಿದ್ದ ವರ್ಣವಿಬೇಧ ನೀತಿಯ ನಿವಾರಣೆಗಾಗಿ ಹೋರಾಡಿದವರು, ಮಾರ್ಟಿನ್‌ಲೂಥರ್‌ ಕಿಂಗ್‌. ಅದಕ್ಕಾಗಿ ಅವರ ಜನ್ಮದಿನದಂದು ಕೂಡಾ 1986 ರಿಂದ ಗಂಟೆಯನ್ನು ಮೊಳಗಿಸಲಾಗುವುದು. ಇದೂ ಬರಿ ಅಮೇರಿಕಾಕ್ಕೆ ಮಾತ್ರ ಅಲ್ಲ ವಿಶ್ವದದ ಎಲ್ಲ ದಮನಿತರ ದನಿಯಾಗಿ ಹೊರ ಹೊಮ್ಮಿದೆ. ಜಗತ್ತಿನಾದ್ಯಂತದ  ತುಳಿತಕ್ಕೆ ಒಳಗಾದವರೆಲ್ಲರೂ ಇಲ್ಲಿಗೆ ಬಂದು ಲಿಬರ್ಟಿ ಬೆಲ್‌ ಸಾನಿಧ್ಯದಲ್ಲಿ ಸ್ಪೂರ್ತಿ ಪಡೆಯುತಿದ್ದಾರೆ.ಅದಕ್ಕೇ ಸ್ವಾತಂತ್ರ್ಯ ದಿನದಂದು  ಲಿಬರ್ಟಿ ಬೆಲ್‌ ಬಾರಿಸುವ ಸಾಂಕೇತಿಕ ಆಚರಣೆ ಪ್ರಮುಖ ಆಕರ್ಷಣೆಯಾಗಿದೆ.
( ಚಿತ್ರ ಕೃಪೆ ಅಂತರ್‌ಜಾಲ)